ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಮನೆಗೆ ಬಂದು ಹೆಣವಾದ!

Public TV
2 Min Read

ಹೈದರಾಬಾದ್: ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಮಗನ ಜೊತೆ ಸೇರಿಕೊಂಡು ತಾಯಿಯೇ ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯಲ್ಲಿ ನಡೆದಿದೆ.

ಕಾತಿ ಶಂಕರ್ ರೆಡ್ಡಿ ಕೊಲೆಯಾದ ವ್ಯಕ್ತಿ. ಈ ಘಟನೆ ಜಿಲ್ಲೆಯ ರಾಯಚೋಟಿ ಟೌನ್ ವ್ಯಾಪ್ತಿಯ ರಾಯುಡು ಕಾಲೋನಿಯಲ್ಲಿ ಶನಿವಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಖದೀರುನ್ ಮತ್ತು ಈಕೆಯ ಮಗ ಅಮೀರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಮೃತ ಶಂಕರ್ ರೆಡ್ಡಿ ಹತ್ತು ವರ್ಷಗಳಿಂದ ರಾಯುಡು ಕಾಲೋನಿಯಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದನು. ಈತ ವ್ಯಾಪಾರಿಯಾಗಿ ಕೆಲಸ ಮಾಡಿಕೊಂಡಿದ್ದನು. ರಾಯಚೋಟಿಯ ಬಳಿ ಅಬ್ಬವರಾಮ್ ಗ್ರಾಮದಿಂದ ಬಂದ ಶಂಕರ್ ರೆಡ್ಡಿ ಚೆಕ್ ಪೋಸ್ಟ್ ಬಳಿ ತನ್ನ ಅಂಗಡಿಯನ್ನು ಇಟ್ಟುಕೊಂಡಿದ್ದನು ಎಂದು ಸರ್ಕಲ್ ಇನ್ಸ್ ಪೆಕ್ಟರ್ ಚಂದ್ರಶೇಖರ್ ತಿಳಿಸಿದ್ದಾರೆ.

ಶಂಕರ್ ರೆಡ್ಡಿ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಖದೀರುನ್ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದನು. ಈಕೆಯ ಪತಿ ಬೇರೆ ದೇಶದಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಮಗ ಅಮೀರ್ ಜೊತೆ ವಾಸಿಸುತ್ತಿದ್ದಳು. ಮಗ ಅಮೀರ್ ತಾಯಿ ಬೇರೆ ವ್ಯಕ್ತಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿರುವುದನ್ನು ಒಪ್ಪಿಕೊಂಡಿರಲಿಲ್ಲ. ಅಷ್ಟೇ ಅಲ್ಲದೆ ಈ ಸಂಬಂಧವನ್ನು ಮುಂದುವರಿಸಬಾರದೆಂದು ಕೂಡ ತಾಯಿಗೆ ಎಚ್ಚರಿಸಿದ್ದನು.

ಶನಿವಾರ ಶಂಕರ್ ರೆಡ್ಡಿ ಮನೆಯಲ್ಲಿ ಮಗ ಅಮೀರ್ ಇರುವುದನ್ನು ತಿಳಿಯದೆ ಖದೀರುನ್ ಮನೆಗೆ ಬಂದಿದ್ದಾನೆ. ಈ ವೇಳೆ ಶಂಕರ್ ರೆಡ್ಡಿಯನ್ನು ನೋಡಿದ ತಕ್ಷಣ ಅಮಿರ್ ಕೋಪಗೊಂಡು ಜಗಳ ಶುರುಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಮನೆಯಲ್ಲಿದ್ದ ಕ್ರಿಕೆಟ್ ಬ್ಯಾಟಿನಿಂದ ಶಂಕರ್ ರೆಡ್ಡಿಗೆ ತಲೆಗೆ ಹೊಡೆದಿದ್ದಾನೆ. ಇತ್ತ ಖದೀರುನ್ ಸಹ ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾಳೆ. ಪರಿಣಾಮ ಶಂಕರ್ ರೆಡ್ಡಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಭಾನುವಾರ ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿ, ತಾಯಿ ಮತ್ತು ಮಗನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಸದ್ಯಕ್ಕೆ ಈ ಕುರಿತು ರಾಯಚೋತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೊಲೆಗೆ ಇನ್ನಿಬ್ಬರು ವ್ಯಕ್ತಿಗಳು ಸಹಾಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗಾಗಿ ಶೋಧಕಾರ್ಯ ಮಾಡುತ್ತಿದ್ದೇವೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *