ಮನಕಲಕುವ ಪತ್ರ ಬರೆದಿಟ್ಟು ತಾಯಿ, ಮಗಳು, ಮೊಮ್ಮಗ ಆತ್ಮಹತ್ಯೆ

Public TV
1 Min Read

ಚಿತ್ರದುರ್ಗ: ವಿಶ್ವ ಮಹಿಳಾ ದಿನಾಚರಣೆಯ ದಿನವೇ ಒಂದೇ ಕುಟುಂಬದ ಇಬ್ಬರು ಮಹಿಳೆಯರು ಸೇರಿದಂತೆ ಓರ್ವ ಬಾಲಕ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ನಡೆದಿದೆ.

ಹಿರಿಯೂರು ಪಟ್ಟಣದ ಚಳ್ಳಕೆರೆ ರಸ್ತೆಯ ಮನೆಯಲ್ಲಿ ತಾಯಿ ಭರತಮ್ಮ (65), ಮಗಳು ಶಾಂತಮ್ಮ(40) ಹಾಗೂ ಶಾಂತಮ್ಮಳ ಮಗ ವಿಷ್ಣು (17) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಭರತಮ್ಮ ತನ್ನ ಮಗಳಾದ ಶಾಂತಮ್ಮ ಹಾಗೂ 10ನೇ ತರಗತಿ ಓದುತ್ತಿದ್ದ ವಿಷ್ಣು ಜೊತೆ ಜೀವನ ಸಾಗಿಸುತಿದ್ದರು. ಗಾರ್ಮೆಂಟ್ಸ್ ನಲ್ಲಿ ದಿನಗೂಲಿ ಮಾಡುತ್ತಿದ್ದ ಶಾಂತಮ್ಮನ ವೈವಾಹಿಕ ಜೀವನವು ಅಸ್ತವ್ಯಸ್ತಗೊಂಡಿದ್ದು, ಗಂಡನನ್ನು ಬಿಟ್ಟು ತಾಯಿಯೊಂದಿಗೆ ಮಗನನ್ನು ನೋಡಿಕೊಂಡು ಬದುಕುತ್ತಿದ್ದರು. ಆದರೆ ಇತ್ತೀಚೆಗೆ ಶಾಂತಮ್ಮನ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯಲು ಹಣವಿಲ್ಲದ್ದರಿಂದ ಕುಟುಂಬದ ಮೂವರು ನೇಣಿಗೆ ಶರಣಾಗಿದ್ದಾರೆ.

ವಿಷ್ಣು ಪ್ರತಿಭಾವಂತನಾಗಿದ್ದು, ಅಪಾರ ಸ್ನೇಹಿತರು ಮತ್ತು ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದನು. ಹೀಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆತನ ಶಾಲೆಯ ಶಿಕ್ಷಕರು ಹಾಗೂ ಸಹಪಾಟಿಗಳೊಂದಿಗೆ ಕ್ಷಮೆಯಾಚಿಸುವ ಪತ್ರವೊಂದನ್ನು ಬರೆದಿದ್ದಾನೆ. ಉತ್ತಮ ವಿದ್ಯಾಭ್ಯಾಸ ಮಾಡಿ, ಉದ್ಯೋಗ ಗಳಿಸಿರಿ. ಆ ಅದೃಷ್ಟ ನನ್ನ ಪಾಲಿಗೆ ಇಲ್ಲವೆಂದು ಸ್ನೇಹಿತರಿಗೆ ಮನಕಲಕುವಂತೆ ಪತ್ರ ಬರೆದಿದ್ದಾನೆ.

ಈ ಘಟನೆ ಸಂಬಂಧ ಹಿರಿಯೂರು ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ನಮ್ಮ ನಿರ್ಧಾರಕ್ಕೆ ನಾವೇ ಕಾರಣ ಎಂದು ಡೆತ್‍ನೋಟ್ ಬರೆದಿರುವುದು ಪತ್ತೆಯಾಗಿದ್ದು, ಘಟನಾ ಸ್ಥಳಕ್ಕೆ ಚಿತ್ರದುರ್ಗ ಎಸ್‍ಪಿ ಶ್ರೀನಾಥ್ ಎಂ ಜೋಷಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *