ಮಗುವಿಗೆ ಹೈಡೋಸ್ ಕೊಟ್ಟು, ಎಚ್ಚರ ತಪ್ಪಿಸಿ ಹತ್ಯೆ- ಸೇಠ್ ರೂಮಲ್ಲಿ ಕೆಮ್ಮಿನ ಔಷಧಿ ಬಾಟ್ಲಿ ಪತ್ತೆ

Public TV
3 Min Read

ಪಣಜಿ: ಸ್ಟಾರ್ಟ್‌ಅಪ್ ಕಂಪನಿಯ ಸಿಇಒ ತನ್ನ ನಾಲ್ಕು ವರ್ಷದ ಮಗನನ್ನು ಹತ್ಯೆಗೈದ ರೂಮಿನಲ್ಲಿ ಕೆಮ್ಮಿನ ಸಿರಪ್‍ನ ಖಾಲಿ ಬಾಟ್ಲಿಗಳನ್ನು ಗೋವಾ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮಹಿಳೆ ಮಗುವಿಗೆ ಹೆಚ್ಚಿನ ಪ್ರಮಾಣದ ಔಷಧಿಯನ್ನು ನೀಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಕೆಮ್ಮಿನ ಔಷಧಿ ಕುಡಿಸಿ ಎಚ್ಚರ ತಪ್ಪಿದ ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಕೊಲ್ಲಲಾಗಿದೆ. ಉಸಿರುಗಟ್ಟಿಸಿ ಕೊಂದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಈಗಾಗಲೇ ತಿಳಿದುಬಂದಿದೆ. ಇದೊಂದು ಪೂರ್ವ ನಿಯೋಜಿತ ಕೊಲೆ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪತಿಗೆ ಮಗು ತೋರಿಸಲು ಇಷ್ಟವಿಲ್ಲದಿದ್ದರಿಂದ ಪ್ರಜ್ಞೆ ತಪ್ಪಿಸಲು ದಿಂಬಿನಿಂದ ಒತ್ತಿ ಹಿಡಿದೆ: ತಪ್ಪೊಪ್ಪಿಕೊಂಡ ಸೇಠ್

ಮಹಿಳೆ ಉಳಿದುಕೊಂಡಿದ್ದ ಕೊಠಡಿಯ ತಪಾಸಣೆಯ ವೇಳೆ ಕೆಮ್ಮಿನ ಸಿರಪ್‍ನ ಎರಡು ಖಾಲಿ ಬಾಟಲಿಗಳು (ಒಂದು ದೊಡ್ಡದು ಮತ್ತು ಇನ್ನೊಂದು ಚಿಕ್ಕವು) ಪತ್ತೆಯಾಗಿದೆ. ಅಲ್ಲದೇ ಮಗು ಸಾಯುವ ವೇಳೆ ಯಾವುದೇ ಹೋರಾಟ ಮಾಡಿಲ್ಲ. ಮಗುವಿಗೆ ಹೆಚ್ಚಿನ ಡೋಸ್ ಔಷಧ ನೀಡಿರುವ ಸಾಧ್ಯತೆ ಇದರಿಂದ ಎದ್ದು ಕಾಣುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಮ್ಮಿನ ಔಷಧದ ಬಗ್ಗೆ ಹೋಟೆಲ್ ಸಿಬ್ಬಂದಿಯನ್ನು ವಿಚಾರಿಸಿದಾಗ ಮಹಿಳೆ ತನಗೆ ಕೆಮ್ಮಿದೆ, ಎಂದು ಹೇಳಿಕೊಂಡು ಕೆಮ್ಮಿನ ಸಿರಪ್‍ನ ಬಾಟ್ಲಿಯನ್ನು ಕೇಳಿದ್ದಳು ಎಂದು ತಿಳಿದು ಬಂದಿದೆ.

ಆರಂಭದಲ್ಲಿ ಆರೋಪಿಯ ವಿಚಾರಣೆ ವೇಳೆ ಕೊಲೆ ಆರೋಪವನ್ನು ನಿರಾಕರಿಸಿದ್ದಳು. ಅಲ್ಲದೇ ನಿದ್ರೆಯಿಂದ ಎದ್ದಾಗಾ ಮಗು ಮೃತಪಟ್ಟಿತ್ತು ಎಂದು ಮಗು ಮೃತಪಟ್ಟಿತ್ತು ಎಂದು ತಿಳಿಸಿದ್ದಳು. ಬಳಿಕ ಮಗುವನ್ನು ಉಸಿರುಗಟ್ಟಿಸಿ ಹತ್ಯೆಗೈದಿರುವುದಾಗಿ ಒಪ್ಪಿಕೊಂಡಿದ್ದಳು.

ಏನಿದು ಪ್ರಕರಣ?: ಸ್ವಂತ ಮಗುವನ್ನೇ ಸ್ಟಾರ್ಟ್ ಅಪ್ ಫೌಂಡರ್ ಮತ್ತು ಸಿಇಓ ಸುಚನಾ ಸೇಠ್ ಹತ್ಯೆಗೈದು ಸೂಟ್‍ಕೇಸ್‍ನಲ್ಲಿ ಶವ ತುಂಬಿಕೊಂಡು ಗೋವಾದಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಚಿತ್ರದುರ್ಗ ಪೊಲೀಸರು ಬಂಧಿಸಿದ್ದರು. ಸುಚನಾ ಸೇಠ್ ಶನಿವಾರ ತನ್ನ ಮಗನೊಂದಿಗೆ ಉತ್ತರ ಗೋವಾದ ಕ್ಯಾಂಡೋಲಿಮ್‍ನಲ್ಲಿರುವ ಸೋಲ್ ಬನಿಯನ್ ಗ್ರಾಂಡೆಗೆ ಭೇಟಿ ನೀಡಿದ್ದಳು. ಸೋಮವಾರ ಹೋಟೆಲ್ ತೊರೆಯುವಾಗ ಒಬ್ಬಂಟಿಯಾಗಿದ್ದು, ತಾನು ಬೆಂಗಳೂರಿಗೆ ಟ್ಯಾಕ್ಸಿ ಕಾಯ್ದಿರಿಸುವಂತೆ ಹೋಟೆಲ್ ಸಿಬ್ಬಂದಿಯನ್ನು ಕೇಳಿದ್ದಾಳೆ. ಅವರು ವಿಮಾನ ಸೌಲಭ್ಯ ಇರುವ ಸಲಹೆ ನೀಡಿದರೂ ಟ್ಯಾಕ್ಸಿ ತೆಗೆದುಕೊಳ್ಳುವಂತೆ ಆಕೆ ಒತ್ತಾಯಿಸಿದ್ದಾಳೆ ಎಂದು ಸಿಬ್ಬಂದಿ ತಿಳಿಸಿದ್ದರು.

ಆಕೆ ಹೋಟೆಲ್‍ನಿಂದ ಹೊರಗೆ ಹೋದ ಬಳಿಕ ಮಗು ಇಲ್ಲದಿದ್ದನ್ನು ಸಿಬ್ಬಂದಿ ಗಮನಿಸಿದ್ದರು. ಅಲ್ಲದೇ ಆಕೆ ತಂಗಿದ್ದ ಹೋಟೆಲ್ ಶುಚಿಗೊಳಿಸಲು ಹೋದಾಗ ರಕ್ತದ ಕಲೆಗಳು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಗೋವಾ ಪೊಲೀಸರು ಹೋಟೆಲ್ ಸಿಬ್ಬಂದಿ ಕರೆಸಿದ್ದ ಟ್ಯಾಕ್ಸಿ ಡ್ರೈವರ್ ಸಂಪರ್ಕಿಸಿ ಆಕೆಯೊಂದಿಗೆ ಮಾತನಾಡಲು ಹೇಳಿದ್ದಾರೆ. ಆಕೆಯ ಮಗನ ಬಗ್ಗೆ ಕೇಳಿದಾಗ ಅವನು ಸ್ನೇಹಿತನೊಂದಿಗೆ ಇರುವುದಾಗಿ ಹೇಳಿಕೊಂಡಿದ್ದಳು. ಆತನ ವಿಳಾಸವನ್ನೂ ನೀಡಿದ್ದಳು. ಪೊಲೀಸರು ಆ ವಿಳಾಸವನ್ನ ಪರಿಶೀಲಿಸಿದಾಗ ಅದು ನಕಲಿಯಾಗಿತ್ತು. ನಂತರ ಟ್ಯಾಕ್ಸಿ ಡ್ರೈವರ್‍ಗೆ ಹೈವೇ ಬಳಿ ಪೊಲೀಸರು ಕಂಡಾಕ್ಷಣ ಟ್ಯಾಕ್ಸಿ ನಿಲ್ಲಿಸುವಂತೆ ತಿಳಿಸಿದ್ದಾಳೆ.

ನಂತರ ಟ್ಯಾಕ್ಸಿ ಚಾಲಕ ರಾಷ್ಟ್ರೀಯ ಹೆದ್ದಾರಿ-4ರ ಬಳಿಯ ಐಮಂಗಲ ಠಾಣೆ ಪೊಲೀಸರಿಗೆ ಆಕೆಯನ್ನ ಒಪ್ಪಿಸಿದ್ದ. ಬಳಿಕ ಟ್ಯಾಕ್ಸಿ ತಪಾಸಣೆ ಮಾಡಿದ ಐಮಂಗಲ ಪೊಲೀಸರಿಗೆ ಟ್ಯಾಕ್ಸಿ ಡಿಕ್ಕಿಯಲ್ಲಿದ್ದ ಸೂಟ್‍ಕೇಸ್‍ನಲ್ಲಿ ಮಗುವಿನ ಶವ ಪತ್ತೆಯಾಗಿತ್ತು. ಈ ಸಂಬಂಧ ಗೋವಾ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಈ ಹಿಂದೆ ಕೌಟುಂಬಿಕ ಕಲಹದ ಹಿನ್ನೆಲೆ ದಂಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆವಾಗಿನಿಂದಲೂ ಗಂಡ-ಹೆಂಡತಿ ಅನ್ಯೋನ್ಯವಾಗಿರಲಿಲ್ಲ. ಬಳಿಕ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿಕೊಂಡಿದ್ದರು. ವಾರಕ್ಕೊಮ್ಮೆ ವೆಂಕಟರಮಣ ಅವರಿಗೆ ಮಗುವನ್ನು ತೋರಿಸುವಂತೆ ನ್ಯಾಯಾಲಯ ಈ ವೇಳೆ ಹೇಳಿತ್ತು. ಮಗುವನ್ನು ತೋರಿಸಲು ಇಷ್ಟವಿಲ್ಲದೇ ಹತ್ಯೆಗೈದಿರುವುದು ವಿಚಾರಣೆಯ ವೇಳೆ ಬಯಲಾಗಿದೆ. ಇದನ್ನೂ ಓದಿ: ಪುತ್ರನ ಹತ್ಯೆಗೈದ ಬೆಂಗ್ಳೂರು CEO ಪ್ರಕರಣ- ತಂದೆಯಿಂದ ಮಗುವಿನ ಅಂತ್ಯಸಂಸ್ಕಾರ

Share This Article