ಸಾಲದ ಹಣ ಕೊಟ್ಟಿಲ್ಲ ಅಂತ ಮಹಿಳೆ ಮೇಲೆ ದೌರ್ಜನ್ಯ – ಕಂಬಕ್ಕೆ ಕಟ್ಟಿಹಾಕಿ ವಿಕೃತಿ ಮೆರೆದ ಜನ

Public TV
1 Min Read

ಬೆಂಗಳೂರು: ಸಾಲದ ಹಣವನ್ನು ವಾಪಸ್ ಕೊಟ್ಟಿಲ್ಲ ಎಂದು ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಬೆಂಗಳೂರು ಹೊರವಲಯದ ಕೊಡಿಗೆಹಳ್ಳಿಯಲ್ಲಿ ನಡೆದಿದೆ.

ಕೊಳ್ಳೆಗಾಲದ ಮೂಲದ ರಾಜಮ್ಮ ಹಲ್ಲೆಗೊಳಗಾದ ಮಹಿಳೆ. ರಾಜಮ್ಮ ತನ್ನ ಮಗಳೊಂದಿಗೆ ಕೊಡಿಗೆಹಳ್ಳಿಯಲ್ಲಿ ವಾಸವಿದ್ದರು. ಅಲ್ಲದೇ ಅದೇ ಏರಿಯಾದಲ್ಲಿ ಸಣ್ಣ ಹೊಟೇಲ್ ನಡೆಸುತ್ತಿದ್ದು, ಜೀವನ ಮಾಡುತ್ತಿದ್ದರು.

ಹಣದ ಸಮಸ್ಯೆ ಬಂದಾಗ ರಾಜಮ್ಮ ನೆರೆಹೊರೆಯವರ ಬಳಿ ಸಾಲವನ್ನು ಪಡೆದುಕೊಂಡಿದ್ದಾರೆ. ಆದರೆ ಅದನ್ನು ವಾಪಸ್ ಕೊಟ್ಟಿಲ್ಲ. ಇದರಿಂದ ಸಾಲಗಾರರು ಪ್ರತಿದಿನ ಸಾಲ ಮರುಪಾತಿಸುವಂತೆ ಕಾಟಕೊಡುತ್ತಿದ್ದರು. ಕೊನೆಗೆ ಸಾಲಗಾರರ ಕಾಟಕ್ಕೆ ಕಳೆದ ಒಂದು ತಿಂಗಳ ಹಿಂದೆ ರಾಜಮ್ಮ ಊರು ಬಿಟ್ಟು ಹೋಗಿದ್ದರು.

ಇಂದು ಮರಳಿ ಕೊಡಿಗೆಹಳ್ಳಿಯ ತಮ್ಮ ಮನೆ ಬಳಿ ಬಂದಾಗ ಸಾಲಗಾರರ ಕಣ್ಣಿಗೆ ಬಿದ್ದಿದ್ದಾರೆ. ತಕ್ಷಣ ರಾಜಮ್ಮನನ್ನು ಹಿಡಿದ ಸಾಲಗಾರರು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ. ಬೆಳಗ್ಗಿನಿಂದಲೂ ಮಹಿಳೆಯನ್ನು ಸ್ಥಳೀಯರು ಕಟ್ಟಿ ಹಿಂಸಿಸಿದ್ದಾರೆ. ಆದರೆ ಸುತ್ತಮುತ್ತಲಿನ ಜನರು ಮಹಿಳೆಯನ್ನು ರಕ್ಷಿಸದೆ ಕೆಲವರು ವಿಡಿಯೋ ಮಾಡಿಕೊಂಡಿದ್ದಾರೆ. ಮಹಿಳೆಯನ್ನು ಹಗ್ಗದಿಂದ ಕಂಬಕ್ಕೆ ಕಟ್ಟಿ ಹಾಕಿದ್ದು, ಆಕೆಯ ಸುತ್ತಲು ಜನರು ನಿಂತಿರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಈ ಘಟನೆ ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *