ಗಂಡು ಮಗುವಾಗ್ಲಿಲ್ಲವೆಂದು ಮೂವರು ಹೆಣ್ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಹಾರಿದ್ಳು

Public TV
1 Min Read

ಗಾಂಧಿನಗರ: ಮಹಿಳೆಯೊಬ್ಬಳು ತನ್ನ ಮೂವರು ಹೆಣ್ಣು ಮಕ್ಕಳನ್ನು ಬಾವಿಗೆ ತಳ್ಳಿ ಬಳಿಕ ತಾನೂ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಜರಾತಿನ ಮಹಿಸಾಗರ್ ಎಂಬಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಮಂಗು ದಾಮರ್ ಎಂದು ಗುರುತಿಸಲಾಗಿದೆ. ಈಕೆ ತನಗೆ ಗಂಡು ಮಗುವಾಗಲಿಲ್ಲ ಎಂದು ಮನನೊಂದು ಗುರುವಾರ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಬುಧವಾರ ಬೆಳಗಿನಿಂದಲೇ ಮಂಗು ವಿಚಲಿತಗೊಂಡಿದ್ದು, ಯಾರ ಜೊತೆಗೂ ಮಾತನಾಡುತ್ತಿರಲಿಲ್ಲ. ಅಲ್ಲದೆ ಅಡುಗೆಯೂ ಮಾಡಿರಲಿಲ್ಲ. ಇದರಿಂದ ಮೂವರಲ್ಲಿ ಒಬ್ಬಾಕೆ ಹಸಿವಿನಿಂದ ಅಳುತ್ತಿದ್ದಳು. ಇದನ್ನು ಕಂಡು ಬೇಸರಗೊಂಡ ಮಂಗು ಅತ್ತೆ, ತಾನೇ ಅಡುಗೆ ಮಾಡಿ ಮಕ್ಕಳಿಗೆ ಉಣಬಡಿಸಿದ್ದಾರೆ. ಅದೇ ದಿನ ರಾತ್ರಿ 8 ಗಂಟೆಯ ಸುಮಾರಿಗೆ ಹಿರಿಯ ಮಗಳ ಜೊತೆ ಮಂಗು ಮನೆಯಿಂದ ಹೊರಟಿದ್ದಳು. ನಂತರ ಮಧ್ಯರಾತ್ರಿ ಹೊತ್ತಲ್ಲಿ ವಾಪಸ್ ಮನೆಗೆ ಬಂದು ನಿದ್ದೆ ಮಾಡಿದ್ದಳು.

ಮಾರನೇ ದಿನ ಬೆಳಗ್ಗೆ ಮೂವರು ಮಕ್ಕಳ ಜೊತೆ ಮಂಗು ಕೂಡ ಮನೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಇದರಿಂದ ಗಾಬರಿಗೊಂಡ ಇಡೀ ಕುಟುಂಬ ಹುಡುಕಾಟ ನಡೆಸಿತ್ತು. ಈ ವೇಳೆ ಕೆಲ ಸಂಬಂಧಿಕರು ಗ್ರಾಮದ ಬಾವಿಯ ಹತ್ತಿರ ಸ್ವೆಟ್ಟರ್ ಹಾಗೂ ಬೆಡ್ ಶೀಟ್ ನೋಡಿರುವುದಾಗಿ ಮಂಗು ಪತಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಸಿಕ್ಕ ಕೂಡಲೇ ಪತಿ ರಮನ್ ಬಾವಿಯ ಬಳಿ ಹೋದಾಗ ಮೂವರು ಹೆಣ್ಣು ಮಕ್ಕಳ ಮೃತದೇಹಗಳು ಬಾವಿಯಲ್ಲಿ ತೇಲುತ್ತಿರುವುದು ಬೆಳಕಿಗೆ ಬಂದಿದೆ. ನಂತರ ಕುಟುಂಬ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಹೀಗಾಗಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಮೂವರು ಮಕ್ಕಳ ಮೃತದೇಹಗಳನ್ನು ಬಾವಿಯಿಂದ ಹೊರತೆಗೆದರು. ಮಂಗು ಮೃತದೇಹವನ್ನು ಬಾವಿಯಿಂದ ನೀರು ಹೊರತೆಗೆದ ಮೇಲೆ ಮೇಲಕ್ಕೆತ್ತಲಾಯಿತು.

ಪ್ರಕರಣದ ತನಿಖೆ ನಡೆಸಿದಾಗ ರಾಮನ್, ಮದುವೆಯಾಗಿ 7 ವರ್ಷವಾಗಿದೆ. ನಮಗೆ ಮೂವರೂ ಹೆಣ್ಣು ಮಕ್ಕಳೇ ಇದ್ದು, ಗಂಡು ಮಗುವಾಗಿಲ್ಲ ಎಂದು ಮಂಗು ಬೇಸರಗೊಂಡಿದ್ದಳು ಎಂದು ತಿಳಿಸಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *