ಶಬರಿಮಲೆಗೆ ಹೋಗ್ತಿದ್ದ ಮಹಿಳೆ ಮೇಲೆ ಪೆಪ್ಪರ್ ಸ್ಪ್ರೇ

Public TV
1 Min Read

ತಿರುವನಂತಪುರಂ: ಶಬರಿಮಲೆಗೆ ಹೋಗುತ್ತಿದ್ದ ಮಹಿಳೆಯರ ಮೇಲೆ ವ್ಯಕ್ತಿಯೊಬ್ಬ ಪೆಪ್ಪರ್ ಸ್ಪ್ರೇ ಸಿಂಪಡಿಸಿದ ಘಟನೆ ಕೇರಳದ ಕೊಚ್ಚಿ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ನಡೆದಿದೆ. ಇದೀಗ ಮಹಿಳೆಯರ ಮೇಲೆ ಪೆಪ್ಪರ್ ಸ್ಪ್ರೇ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಹೋರಾಟಗಾರ್ತಿ ಬಿಂದು ಅಮ್ಮಿಣಿ ತಮ್ಮ ಮುಖವನ್ನು ಮುಚ್ಚಿಕೊಂಡು ಹಲ್ಲೆ ಮಾಡಿದ ವ್ಯಕ್ತಿಯಿಂದ ದೂರ ಓಡಿ ಹೋಗುತ್ತಿದ್ದಾರೆ. ಹಲ್ಲೆಯಿಂದ ಅಮ್ಮಿಣಿಗೆ ಗಾಯವಾಗುತ್ತಿದ್ದಂತೆ ವ್ಯಕ್ತಿ ಕಾಂಪೌಂಡ್ ಹಾರಿ ಅಲ್ಲಿಂದ ಪರಾರಿಯಾಗಿದ್ದಾನೆ. ಹಲ್ಲೆಯಿಂದ ಗಾಯಗೊಂಡ ಅಮ್ಮಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಹೋರಾಟಗಾರ್ತಿ ತೃಪ್ತಿ ದೇಸಾಯಿ ಸೇರಿದಂತೆ ಐವರು ಮಹಿಳೆಯರು ಇಂದು ಶಬರಿಮಲೆಗೆ ಪ್ರವೇಶ ಮಾಡಲು ನಿರ್ಧರಿಸಿದ್ದರು.

ಇಂದು ಬೆಳಗ್ಗೆ ತೃಪ್ತಿ ದೇಸಾಯಿ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಅವರು, “ಇಂದು ಸಂವಿಧಾನದ ದಿನವಾಗಿದ್ದು, ಇಂದೇ ನಾವು ಶಬರಿಮಲೆ ಪ್ರವೇಶಿಸುತ್ತೇವೆ. ನಾವು ದೇವಾಲಯ ಪ್ರವೇಶಿಸುವುದನ್ನು ರಾಜ್ಯ ಸರ್ಕಾರದಿಂದ ಅಥವಾ ಪೊಲೀಸರಿಂದ ತಡೆಯಲು ಸಾಧ್ಯವಿಲ್ಲ. ನಮಗೆ ಭದ್ರತೆ ಸಿಕ್ಕರೂ ಸಿಗದಿದ್ದರೂ ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದ ಬಳಿಕವೇ ನಾನು ಕೇರಳವನ್ನು ಬಿಟ್ಟು ಹೋಗುತ್ತೇನೆ” ಎಂದು ಪ್ರತಿಕ್ರಿಯಿಸಿದರು.

ನನ್ನ ಚಲನವಲನದ ಬಗ್ಗೆ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ನನ್ನ ಮೇಲೆ ಹಲ್ಲೆ ನಡೆಸುವವರು ನನ್ನ ಕಾರಿನ ನಂಬರ್ ಗಮನಿಸಿದ್ದಾರೆ ಎಂದು ತೃಪ್ತಿ ಆರೋಪಿಸಿದ್ದಾರೆ. ಪುಣೆ ಮೂಲದ ಹೋರಾಟಗಾರ್ತಿ ತೃಪ್ತಿ ಕಳೆದ ವರ್ಷ ಕೂಡ ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದರು. ಆದರೆ ಆಗ ಹೋರಾಟಗಾರರು ಅವರನ್ನು ತಡೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *