ಪ್ರಸವ ವೇದನೆಯಲ್ಲಿದ್ದ ಗರ್ಭಿಣಿಯನ್ನ ಒಂಟಿಯಾಗಿ ಬಿಟ್ಟು ಹೋದ ವೈದ್ಯರು-ವಾಪಸ್ ಬಂದು ನೋಡ್ದಾಗ ಕಸದ ಬುಟ್ಟಿಯಲ್ಲಿತ್ತು ಮಗು

Public TV
1 Min Read

ಚಂಡೀಘಢ: ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ನವಜಾತ ಶಿಶು ಸಾವು ಬದುಕಿನ ಮಧ್ಯೆ ಹೋರಾಡುವಂತಾಗಿರುವ ಘಟನೆ ಹರಿಯಾಣದ ಫರೀದಾಬಾದ್‍ನಲ್ಲಿ ನಡೆದಿದೆ.

ಸೋಮವಾರದಂದು ಇಲ್ಲಿನ ಸಿವಿಕ್ ಆಸ್ಪತ್ರೆಗೆ ಗರ್ಭಿಣಿಯನ್ನ ಹೆರಿಗೆಗಾಗಿ ದಾಖಲಿಸಲಾಗಿತ್ತು. ಆದ್ರೆ ಪ್ರಸವ ವೇದನೆಯಲ್ಲಿದ್ದ ಗರ್ಭಿಣಿಯನ್ನ ಆಸ್ಪತ್ರೆಯ ಬೆಡ್ ಮೇಲೆ ಒಂಟಿಯಾಗಿ ಬಿಟ್ಟಿದ್ದು, ಯಾವುದೇ ವೈದ್ಯಕೀಯ ನೆರವು ನೀಡಿರಲಿಲ್ಲ. ವೈದ್ಯರು ಹೊರಗಡೆ ಇದ್ದ ವೇಳೆ ಯಾವುದೇ ಸಹಾಯ ಇಲ್ಲದೆ ಮಹಿಳೆ ಮಗುವಿಗೆ ಜನ್ಮ ನೀಡಿದ್ದರು.

ವೈದ್ಯರು ಹಾಗೂ ನರ್ಸ್‍ಗಳು ಇಲ್ಲದೆಯೇ ಮಹಿಳೆಗೆ ಹೆರಿಗೆಯಾಗಿತ್ತು. ಆದ್ರೆ ಹಾಸಿಗೆ ಬಳಿ ಇಟ್ಟಿದ್ದ ಕಸದ ಬುಟ್ಟಿಯೊಳಗೆ ನೇರವಾಗಿ ಮಗು ಬಿದ್ದಿತ್ತು. ಹಾಸಿಗೆ ಮೇಲೆ ಮಲಗಿದ್ದ ತಾಯಿ ಸಹಾಯಕ್ಕಾಗಿ ಕಿರುಚಾಡುತ್ತಿದ್ರು.

ವೈದ್ಯರು ಹಾಗೂ ಸಿಬ್ಬಂದಿ ಬಂದು ನೋಡಿದಾಗ ಮಗು ಕಸದ ಬುಟ್ಟಿಯಲ್ಲಿ ಪತ್ತೆಯಾಗಿತ್ತು. ಮಗುವಿನ ಕರುಳ ಬಳ್ಳಿ ಇನ್ನೂ ತಾಯಿಯ ದೇಹಕ್ಕೆ ಅಂಟಿಕೊಂಡೇ ಇತ್ತು. ಮಗುವನ್ನ ರಕ್ಷಣೆ ಮಾಡಿದ ಬಳಿಕ ವೈದ್ಯರು ಕರುಳ ಬಳ್ಳಿಯನ್ನ ಕಟ್ ಮಾಡಿದ್ದಾರೆ.

ಹುಟ್ಟಿದ ತಕ್ಷಣ ಮಗು ಅಳಲಿಲ್ಲವಾದ್ದರಿಂದ ವೈದ್ಯರು ಶಿಶುವನ್ನ ಐಸಿಯುನಲ್ಲಿರಿಸಿದ್ದರು. ಮಗು ಕಸದ ಬುಟ್ಟಿಗೆ ಬಿದ್ದಿದ್ದರಿಂದ ಅದರ ತಲೆಗೆ ಏಟು ಬಿದ್ದಿದ್ದು, ಫಿಟ್ಸ್ ಬರಲು ಶುರುವಾಗಿತ್ತು. ನಂತರ ಮಗುವನ್ನ ಬೇರೊಂದು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೂ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *