ಕಾಂಗ್ರೆಸ್‍ನಿಂದ ಸ್ಪರ್ಧಿಸಲ್ಲ, ಬಿಜೆಪಿ ಸೇರಲ್ಲ- ಜೆಡಿಎಸ್‍ಗೆ ಶಿವರಾಮೇಗೌಡ ಜಂಪ್?

Public TV
1 Min Read

ಮಂಡ್ಯ: ನನಗೆ ಕಾಂಗ್ರೆಸ್‍ನಿಂದ ಟಿಕೆಟ್ ಬೇಡ, ಬಿಜೆಪಿಗೆ ನಮ್ಮಪ್ಪನ ಆಣೆಗೂ ಹೋಗಲ್ಲ. ಆದ್ರೆ ಗೆಲ್ಲುವ ಪಕ್ಷದಿಂದ ನನಗೆ ಟಿಕೆಟ್ ಖಾತ್ರಿ ಆಗಿದೆ ಅಂತ ಕಾಂಗ್ರೆಸ್ ಮುಖಂಡ ಎಲ್‍ಆರ್.ಶಿವರಾಮೇಗೌಡ ಹೇಳಿದ್ದಾರೆ.

ನಾಗಮಂಗಲದಲ್ಲಿ ಮಾತನಾಡಿದ ಶಿವರಾಮೇಗೌಡ, ಜೆಡಿಎಸ್‍ನಿಂದ ಅಮಾನತ್ತಾದ ಏಳು ಜನ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ಖಚಿತ ಎಂದು ಒಂದು ವರ್ಷದ ಹಿಂದೆಯೇ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಮತ್ತು ಡಿಕೆ.ಶಿವಕುಮಾರ್ ಸಮ್ಮಖದಲ್ಲಿ ನನ್ನ ಎದುರೇ ತೀರ್ಮಾನವಾಗಿದೆ. ಆದ್ರೆ ಏಳು ಜನ ಶಾಸಕರು ಮತ ನೀಡಿದ ಜನರನ್ನ ಕೇಳಿ ಆ ನಂತರ ತಮ್ಮ ನಿರ್ಧಾರ ತಿಳಿಸ್ತೀವಿ ಅಂತಾ ಗೊಂಬೆರಾಮರ ನಾಟಕ ಆಡುತ್ತಿದ್ದಾರೆ ಅಂತ ಲೇವಡಿಯಾಡಿದ್ರು.

ಕಾಂಗ್ರೆಸ್‍ನಿಂದ ಚಲುವರಾಯಸ್ವಾಮಿ ಸೇರಿದಂತೆ ಉಳಿದ ಆರು ಜನರಿಗೆ ಟಿಕೆಟ್ ಖಚಿತವಾಗಿ ವರ್ಷವೇ ಕಳೆದು ಹೋಗಿದೆ. ಈ ಬಗ್ಗೆ ಗೊಂದಲಬೇಡ. ಈ ರೀತಿಯ ನಿರ್ಧಾರಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ. ನನ್ನನ್ನ ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡ್ತೇನೆ ಎಂದು ಭರವಸೆ ನೀಡಿದ್ರಿಂದ ನಾನು ಈ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದೆ. ಆದ್ರೆ ಕಾಂಗ್ರೆಸ್ ಮುಖಂಡರೇ ನನ್ನನ್ನ ಓಡಾಡಿಸಿಕೊಂಡು ಸೋಲಿಸಿದ್ರು. ಹಾಗಾಗಿ 2018ರ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ ಅಂದ್ರು.

ಆದ್ರೆ ನಮ್ಮಪ್ಪನ ಆಣೆ ನಾನು ನಾಗಮಂಗಲ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಲ್ಲ. ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡ್ತೇನೆ. ನನಗೆ ಟಿಕೆಟ್ ಬೇಡ. ಚಲುವರಾಯಸ್ವಾಮಿಗೆ ಕೊಡಿ ಅಂತಾ ಹೇಳ್ತೇನೆ. ಯಾಕಂದ್ರೆ ಚಲುವರಾಯಸ್ವಾಮಿ ಈಗಾಗಲೇ ನಾಗಮಂಗಲ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧೆಗೆ ರೆಡಿಯಾಗಿದ್ದಾರೆ ಎಂದು ಪಕ್ಷದ ಮುಖಂಡರ ತೀರ್ಮಾನದ ವಿರುದ್ಧ ಅಸಮಾಧಾನ ಹೊರಹಾಕಿದ್ರು.

ನಾಗಮಂಗಲ ಕ್ಷೇತ್ರದಲ್ಲಿ ಹಳ್ಳಿ ಹಳ್ಳಿಗೂ ಭೇಟಿ ನೀಡುತ್ತಿರುವ ಶಿವರಾಮೇಗೌಡ, ಮಾರ್ಚ್ 12 ರಂದು ತೂಬಿನಕೆರೆ ಗ್ರಾಮದ ಪಟ್ಟಲದಮ್ಮ ದೇವಸ್ಥಾನದ ಆವರಣದಲ್ಲಿ ತಮ್ಮ ಬೆಂಬಲಿಗರ ಬೃಹತ್ ಸಭೆ ನಡೆಸೋದಾಗಿ ತಿಳಿಸಿದ್ರು. ಇನ್ನು ನನಗೆ ಕಾಂಗ್ರೆಸ್‍ನಿಂದ ಟಿಕೆಟ್ ಬೇಡ, ಬಿಜೆಪಿಗೆ ನಮ್ಮಪ್ಪನ ಆಣೆಗೂ ಹೋಗಲ್ಲ. ಆದ್ರೆ ಗೆಲ್ಲುವ ಪಕ್ಷದಿಂದ ನನಗೆ ಟಿಕೆಟ್ ಖಾತ್ರಿ ಆಗಿದೆ ಎಂದು ಹೇಳುವ ಮೂಲಕ, ನಾಗಮಂಗಲದಿಂದ ತಾವೇ ಜೆಡಿಎಸ್ ಅಧಿಕೃತ ಅಭ್ಯರ್ಥಿ ಎಂದು ಪರೋಕ್ಷವಾಗಿ ಹೇಳಿದ್ರು.

Share This Article
Leave a Comment

Leave a Reply

Your email address will not be published. Required fields are marked *