ನವದೆಹಲಿ: ದೆಹಲಿಗೆ ಪೂರ್ಣ ರಾಜ್ಯ ಸ್ಥಾನಮಾನ ನೀಡಿದರೆ ಬಿಜೆಪಿಗೆ ಸಂಪೂರ್ಣ ಬೆಂಬಲ ಸೂಚಿಸುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ.
ಸೋಮವಾರ ನಡೆದ ವಿಶೇಷ ಅಧಿವೇಶನದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತನಾಡಿ, ಕೇಂದ್ರ ಸರ್ಕಾರವು ದೆಹಲಿಗೆ ಪೂರ್ಣ ರಾಜ್ಯ ಸ್ಥಾನಮಾನವನ್ನು ನೀಡಿದರೆ, 2019ರ ಲೋಕಸಭಾ ಚುನಾವಣೆಗೆ ಎಎಪಿ(ಆಮ್ ಆದ್ಮಿ ಪಾರ್ಟಿ)ಯು ಬಿಜೆಪಿಗೆ ಸಂಪೂರ್ಣ ಬೆಂಬಲ ಸೂಚಿಸುತ್ತದೆ ಎಂದು ಘೋಷಿಸಿದ್ದಾರೆ.
2019ರ ಚುನಾವಣೆಯೊಳಗೆ ದೆಹಲಿಗೆ ಪೂರ್ಣ ರಾಜ್ಯ ಸ್ಥಾನಮಾನ ನೀಡಬೇಕು. ದೆಹಲಿಯ ಮತದಾರರೂ ಬಿಜೆಪಿಗೆ ಮತ ನೀಡಿದ್ದಾರೆ. ಇಲ್ಲದಿದ್ದರೆ ಬಿಜೆಪಿಯು ದೆಹಲಿಯನ್ನು ಬಿಟ್ಟು ತೊಲಗುವಂತೆ ಫಲಕಗಳನ್ನು ಹಾಕಿಸಲಾಗುತ್ತದೆ. ದೆಹಲಿ ಜನತೆಯು ತಮ್ಮ ಹಕ್ಕು, ಭವಿಷ್ಯ ಮತ್ತು ಅಭಿವೃದ್ಧಿಗಾಗಿ ಪೂರ್ಣ ರಾಜ್ಯದ ಸ್ಥಾನಮಾನಕ್ಕಾಗಿ ಹೋರಾಡುವಂತೆ ಕರೆ ನೀಡಿದ್ದಾರೆ.
ಕಾಂಗ್ರೆಸ್ ಮತ್ತು ಇತರೆ ಪಕ್ಷಗಳಿಂದ ಮೈತ್ರಿ ಒಕ್ಕೂಟದ ಮನವಿ ಬಂದಿದ್ದು, ದೆಹಲಿ, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ಒಟ್ಟಾಗಿ ಮುಂಬರುವ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಆಪ್ ಮುಖಂಡರೊಬ್ಬರು ಟ್ಟಿಟ್ಟರ್ನಲ್ಲಿ ಬರೆದುಕೊಂಡಿದ್ದರು. ಆದರೆ ಇಲ್ಲಿಯವರೆಗೂ ಪಕ್ಷ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.
ಪ್ರಸ್ತುತ ದೆಹಲಿಯು ಕೇವಲ ಭಾಗಶಃ ಅಧಿಕಾರವನ್ನು ಹೊಂದಿದ್ದು, ಭೂಮಿ, ಕಾನೂನು ಸುವ್ಯವಸ್ಥೆ, ಪೊಲೀಸ್ ಅಧಿಕಾರಗಳನ್ನು ಕೇಂದ್ರ ಸರ್ಕಾರ ವಹಿಸಿಕೊಂಡಿದೆ. ಸದ್ಯ ದೆಹಲಿಯ ಅಧಿಕಾರವನ್ನು ರಾಜ್ಯಪಾಲರು ವಹಿಸಿಕೊಂಡಿದ್ದು, ಎಎಪಿ ಸರ್ಕಾರದ ಸಲಹೆಗಳನ್ನು ಪಡೆದು ಅಧಿಕಾರ ನಡೆಸುತ್ತಿದ್ದಾರೆ.
ದೆಹಲಿ ನ್ಯಾಯಾಲಯವು ದೆಹಲಿಯನ್ನು ಕೇಂದ್ರವನ್ನಾಗಿಸಿ, ರಾಜ್ಯಪಾಲರನ್ನು ಮುಖ್ಯಸ್ಥರನ್ನಾಗಿ ಮಾಡಿತ್ತು. ಅಲ್ಲದೇ ಎಲ್ಲಾ ಅಧಿಕಾರಗಳನ್ನು ರಾಜ್ಯಪಾಲರೇ ಹೊಂದಿರುವಂತೆ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಎಎಪಿ 2016ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದೆ 5 ನ್ಯಾಯಾಧೀಶರ ಪೀಠದ ಎದುರು ಎಎಪಿ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಕ್ಕೆ ಯಾವುದೇ ಅಧಿಕಾರ ನಡೆಸುವ ಹಕ್ಕು ಇಲ್ಲವೇ ಎಂದು ವಾದ ಮಂಡಿಸಿತ್ತು.