ಬಾಹುಬಲಿ ಕರ್ನಾಟಕದಲ್ಲಿ ರಿಲೀಸ್ ಆಗುತ್ತಾ? ಶನಿವಾರ ಬೆಳಗ್ಗೆ ಗೊತ್ತಾಗುತ್ತೆ

Public TV
1 Min Read

ಬೆಂಗಳೂರು: ಕರ್ನಾಟಕದಲ್ಲಿ ಬಾಹುಬಲಿ ಭಾಗ 2 ರಿಲೀಸ್ ಆಗುತ್ತದೋ ಇಲ್ಲವೋ ಎನ್ನುವುದು ಶನಿವಾರ ಬೆಳಗ್ಗೆ ಪ್ರಕಟವಾಗಲಿದೆ.

ಸತ್ಯರಾಜ್ ಅವರು ಕ್ಷಮೆ ಕೇಳಿದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ಮಾಧ್ಯಮಗಳ ಮೂಲಕ ಸತ್ಯರಾಜ್ ಕ್ಷಮೆ ಕೇಳಿರುವ ವಿಚಾರ ಗೊತ್ತಾಗಿದೆ. ವಿವಿಧ ಸಂಘಟನೆಗಳ ಮುಖಂಡರ ಜೊತೆ ಚರ್ಚಿಸುತ್ತೇವೆ. ಈ ಸಂಬಂಧ ಇಂದು ಮಧ್ಯಾಹ್ನ ಕನ್ನಡ ಸಂಘಟನೆಗಳ ಜೊತೆ ಸಭೆ ನಡೆಸುತ್ತೇವೆ. ಸಭೆಯ ತೀರ್ಮಾನವನ್ನು ಮಧ್ಯಾಹ್ನ 3 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ತಿಳಿಸುತ್ತೇವೆ ಎಂದು ಹೇಳಿದ್ದರು.

ಆದರೆ ಇಂದು ನಿಗದಿಯಾಗಿದ್ದ ಸಭೆ ನಾಳೆಗೆ ಮುಂದೂಡಿಕೆಯಾಗಿದ್ದು, ಬೆಳಗ್ಗೆ 11 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಬಾಹುಬಲಿ ಚಿತ್ರದ ಬಿಡುಗಡೆ ವಿಚಾರವಾಗಿ ನಮ್ಮ ನಿಲುವು ಏನು ಎನ್ನುವುದನ್ನು ಕನ್ನಡ ಸಂಘಟನೆಗಳು ತಿಳಿಸಲಿವೆ.

ನಾನು ಕನ್ನಡ ಹಾಗೂ ಕರ್ನಾಟಕದ ವಿರೋಧಿಯಲ್ಲ. ಅಂದಿನ ಹೇಳಿಕೆಗೆ ಇಂದು ಬಾಹುಬಲಿ-2 ಚಿತ್ರಕ್ಕೆ ಅಡ್ಡಿಪಡಿಸಬೇಡಿ ಎಂದು ಕನ್ನಡಿಗರಲ್ಲಿ ಸತ್ಯರಾಜ್ ಮನವಿ ಮಾಡಿದ್ದಾರೆ. ಕಾವೇರಿ ಬಿಕ್ಕಟ್ಟಿನ ಸಂದರ್ಭದಲ್ಲಿ ನಾನು ಭಾವವೇಶದಲ್ಲಿ ಮಾತನಾಡುವಾಗ ಆ ರೀತಿಯ ಹೇಳಿಕೆ ನೀಡಿದ್ದೆ. ಈ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ವಿಡಿಯೋದಲ್ಲಿ ಕೇಳಿಕೊಂಡಿದ್ದಾರೆ.

ಸತ್ಯರಾಜ್ ಕನ್ನಡಿಗರ ವಿರುದ್ಧ ಮಾತನಾಡಿದ್ದಕ್ಕೆ ಬಾಹುಬಲಿ ಚಿತ್ರದ ಬಿಡುಗಡೆಗೆ ಕನ್ನಡ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಈ ನಡುವೆ ಗುರುವಾರ ನಿರ್ದೇಶಕ ರಾಜಮೌಳಿ ಅವರು ಕನ್ನಡದಲ್ಲಿ ಮಾತನಾಡಿ ಸತ್ಯರಾಜ್ ಅವರ ಹೇಳಿಕೆಗೂ ಬಾಹುಬಲಿ ಚಿತ್ರ ತಂಡಕ್ಕೂ ಯಾವುದೇ ಸಂಬಂಧ ಇಲ್ಲ. ಈ ವಿಚಾರದಲ್ಲಿ ನಮಗೆ ಸಂಬಂಧ ಕಲ್ಪಿಸಬೇಡಿ ಎಂದು ಮನವಿ ಮಾಡಿದ್ದರು.

ಕನ್ನಡ ಸಂಘಟನೆಗಳ ನಾಯಕರು ಬಾಹುಬಲಿ ಚಿತ್ರದ ಬಿಡುಗಡೆಗೆ ವಿರೋಧ ಇಲ್ಲ. ಆದರೆ ಸತ್ಯರಾಜ್ ಹೇಳಿಕೆಯನ್ನು ಖಂಡಿಸಿ ಬಿಡುಗಡೆಯನ್ನು ವಿರೋಧಿಸುತ್ತಿದ್ದೇವೆ. ಸತ್ಯರಾಜ್ ಕ್ಷಮೆ ಕೇಳಿದರೆ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗಲಿ ಎಂದು ಈ ಹಿಂದೆ ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *