ರಾಮನಗರ: ವರದಕ್ಷಿಣೆ ಕಿರುಕುಳದಿಂದ ಪತ್ನಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಆರೋಪಿ ಪತಿಗೆ ಜೀವಾವಧಿ ಶಿಕ್ಷೆ ಪ್ರಕಟ ಮಾಡಿ ಕನಕಪುರದ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯವು ಆದೇಶ ಹೊರಡಿಸಿದೆ.
ಕಳೆದ 2020ರ ಮೇನಲ್ಲಿ ಹಾರೋಹಳ್ಳಿ (Harohalli) ತಾಲೂಕಿನ ಮರಳವಾಡಿ ಗ್ರಾಮದ ಅನಿಲ್ ಎಂಬಾತನ ಪತ್ನಿ ಅಶ್ವಿನಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿಯ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಅಶ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು. ಇದನ್ನೂ ಓದಿ: ಆನ್ಲೈನ್ನಲ್ಲಿ ಬುಕ್ ಮಾಡಿ – ಪಾರ್ಸೆಲ್ ಪಡೆಯಲು ಮನೆಗೆ ಬರ್ತಾರೆ ಪೋಸ್ಟ್ಮ್ಯಾನ್!
ಈ ಬಗ್ಗೆ ಅಶ್ವಿನಿ ಕುಟುಂಬಸ್ಥರು ಅನಿಲ್ ವಿರುದ್ಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ವೇಳೆ ಆರೋಪಿ ಅನಿಲ್ನನ್ನ ಪೊಲೀಸರು ವಶಕ್ಕೆ ಪಡೆದು, ತನಿಖೆ ನಡೆಸಿ ಸಾಕ್ಷ್ಯಾಧಾರಗಳನ್ನ ಸಂಗ್ರಹಿಸಿದ್ದರು. ಬಳಿಕ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಇದನ್ನೂ ಓದಿ: Plane Crash | ಬ್ಲ್ಯಾಕ್ ಬಾಕ್ಸ್ಗಳನ್ನು ವಿದೇಶಕ್ಕೆ ಕಳಿಸಿಲ್ಲ: ಸುಳ್ಳು ಸುದ್ದಿ ಹರಡದಂತೆ ಕೇಂದ್ರ ಸರ್ಕಾರ ಮನವಿ
ಕನಕಪುರದ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯವು ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ, ಗುರುವಾರ ತೀರ್ಪು ಪ್ರಕಟ ಮಾಡಿದೆ. ಸಾಕ್ಷ್ಯಾಧಾರಗಳ ಮೂಲಕ ವರದಕ್ಷಿಣೆ ಕಿರುಕುಳ ಆರೋಪ ಸಾಬೀತಾದ ಹಿನ್ನೆಲೆ ಅನಿಲ್ಗೆ ಜೀವಾವಧಿ ಶಿಕ್ಷೆ ಹಾಗೂ 35,000 ರೂ. ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.