ಕೊಲೆಯ ಭಯದಿಂದ ಪತಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆಗೆ ಯತ್ನಿಸಿದ ಪತ್ನಿಯೇ ಹೆಣವಾದ್ಲು!

Public TV
2 Min Read

ಚಿಕ್ಕಬಳ್ಳಾಪುರ: ಮದ್ಯದ ಅಮಲಿನಲ್ಲಿ ಪತಿಯೊಬ್ಬ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಗೌರಿಬಿದನೂರಿನ ಶ್ರೀನಗರದಲ್ಲಿ ನಡೆದಿದೆ.

ಶಾಕೀರ್(26) ಕೊಲೆಯಾದ ಮಹಿಳೆ. ಮೆಹಬೂಬ್ ಪಾಷಾ (30) ಕೊಲೆ ಮಾಡಿದ ಗಂಡ. ಅನೈತಿಕ ಸಂಬಂಧದಿಂದ ಪತಿ ಪತ್ನಿಯನ್ನ ಕೊಲೆ ಮಾಡಿರುವ ಶಂಕೆ ಎನ್ನಲಾಗಿದೆ.

ಮೂಲತಃ ಆಂಧ್ರದ ನಂದ್ಯಾಳ ಗ್ರಾಮದ ಮೆಹಬೂಬ್ ಪಾಷಾ, ಕಳೆದ 15 ವರ್ಷಗಳ ಹಿಂದೆಯೇ ಗೌರಿಬಿದನೂರಿನಲ್ಲಿ ಬಂದು ನೆಲೆಸಿದ್ದು, ಟೈಲ್ಸ್ ಫಿಟ್ಟಿಂಗ್ ಕೆಲಸ ಮಾಡುತ್ತಿದ್ದನು. ಕಳೆದ 6 ವರ್ಷಗಳ ಹಿಂದೆ ಈತ ಶಾಕೀರ್ ಎಂಬಾಕೆಯನ್ನು ಮದುವೆಯಾಗಿದ್ದನು. ಪಾಷಾಗೆ ಇಬ್ಬರು ಮಕ್ಕಳಿದ್ದಾರೆ. 3-4 ವರ್ಷ ಚೆನ್ನಾಗಿಯೇ ಇದ್ದ ದಂಪತಿ, ಬಳೀಕ ಪತ್ನಿ ಶಾಕೀರ್ ಎರಡನೇ ಮಗುವಿನ ಬಾಣಂತನಕ್ಕೆ ತವರು ಮನೆಗೆ ಹೋಗಿ ಬಂದ ಮೇಲೆ ಇಬ್ಬರ ನಡುವೆ ಒಂದಷ್ಟು ಬಿರುಕು ಮೂಡಿದೆ.

ತವರಿನಲ್ಲಿ ಶಾಕೀರ್ ಅನೈತಿಕ ಸಂಬಂಧ ಹೊಂದಿದ್ದಳು ಅಂತ ಅನುಮಾನಿಸಿ ಪತಿ ಮೆಹಬೂಬ್ ಪಾಷಾ ಪದೇ ಪದೇ ಶಾಕೀರ್ ಜೊತೆ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಶನಿವಾರ ರಾತ್ರಿಯೂ ಕೂಡ ಗಂಡ-ಹೆಂಡತಿ ನಡುವೆ ಜಗಳ ನಡೆದಿದ್ದು, ಈ ವೇಳೆ ಶಾಕೀರ್ ತಾನು ತವರು ಮನೆಗೆ ಹೋಗುವುದಾಗಿ ಹೇಳಿದ್ದಾರೆ. ಅಲ್ಲದೇ ತಡರಾತ್ರಿ ಗಂಡ ಮನೆಗೆ ಬಂದ್ರೂ ಊಟ ಬಡಿಸದೆ ಮಲಗಿದ್ದ ವೇಳೆ ಗಂಡ ಕೆಂಡಾಮಂಡಲನಾಗಿ ಮತ್ತೆ ಗಲಾಟೆ ಮಾಡಿದ್ದಾನೆ.

ಗಲಾಟೆ ನಂತರ ಮಲಗಿದ್ದ ಪತ್ನಿ ಶಾಕೀರ್ ಪಕ್ಕದಲ್ಲಿ ಮಲಗಲು ಗಂಡ ಮಧ್ಯರಾತ್ರಿ 2 ಗಂಟೆಗೆ ಹೋಗಿದ್ದಾನೆ. ಆದ್ರೆ ಅಷ್ಟೋತ್ತಿಗಾಗಲೇ ಗಂಡ ತನ್ನನ್ನು ಕೊಲೆ ಮಾಡಬಹುದು ಅಂತ ಮೊದಲೇ ಅನುಮಾನಿಸಿದ್ದ ಶಾಕೀರ್ ತಲೆದಿಂಬಿನ ಕೆಳಗೆ ಕಬ್ಬಿಣದ ರಾಡ್ ಇಟ್ಟುಕೊಂಡು ಮಲಗಿದ್ದಳಂತೆ. ಗಂಡ ಪಕ್ಕದಲ್ಲಿ ಮಲಗಲು ಬಂದ ಕೂಡಲೇ ತನ್ನನ್ನ ಕೊಲೆ ಮಾಡ್ತಾನೆ ಅನ್ನೋ ಭಯದಿಂದ ಗಂಡನಿಗೆ ರಾಡ್ ನಿಂದ ಹಲ್ಲೆ ಮಾಡಲು ಯತ್ನಿಸಿದ್ದಾಳೆ. ಇದ್ರಿಂದ ಮತ್ತಷ್ಟು ಕುಪಿತಗೊಂಡ ಮೆಹಬೂಬ್ ಪಾಷಾ ನನ್ನನ್ನೇ ಕೊಲ್ತೀಯಾ ಅಂತ ಪತ್ನಿ ಶಾಕೀರ್ ಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ನಂತರ ತಾನೇ ಗೌರಿಬಿದನೂರು ನಗರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಡಿವೈಎಸ್ಪಿ ಪ್ರಭುಶಂಕರ್ ಹಾಗೂ ಗೌರಿಬಿದನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *