ಚಿಕ್ಕಬಳ್ಳಾಪುರ: ವಿಚ್ಛೇದಿತ ಪತ್ನಿಗೆ ಜೀವನಾಂಶದ ಹಣ ಕೊಡಲಾಗದ ಪತಿ ಆಕೆಯನ್ನು ಕೊಲೆ ಮಾಡಿ ರುಂಡ-ಮುಂಡ ಬೇರ್ಪಡಿಸಿ ಹೂತು ಹಾಕಿರುವ ಆಘಾತಕಾರಿ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಬೊಮ್ಮಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
30 ವರ್ಷದ ಲಕ್ಷ್ಮೀ ಹತ್ಯೆಯಾದ ಮಹಿಳೆ. 34 ವರ್ಷದ ರಾಜೇಶ್ ಕೃತ್ಯ ಎಸಗಿದ ಪತಿ. ಮೃತ ಲಕ್ಷ್ಮೀ ಹಾಗೂ ರಾಜೇಶ್ ಗೆ ಮದುವೆಯಾಗಿ 8 ವರ್ಷಗಳು ಕಳೆದಿವೆ. ಮದುವೆಯಾಗಿ ಹೆರಿಗೆಗೆ ಎಂದು ಲಕ್ಷ್ಮೀ ಮೊದಲ ವರ್ಷದ ನಂತರ ತವರು ಮನೆಗೆ ಹೋಗಿದ್ದರು. ಆದರೆ ಈ ವೇಳೆ ಆರೋಪಿ ರಾಜೇಶ್ ಮತ್ತೊಂದು ಮದುವೆಯಾಗಿದ್ದ. ಇದೇ ಕಾರಣಕ್ಕೆ ಇಬ್ಬರು ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣದಲ್ಲಿ ನ್ಯಾಯಾಲಯ ಲಕ್ಷ್ಮೀಗೆ ಪ್ರತಿ ತಿಂಗಳು 1,500 ರೂ. ಜೀವನಾಂಶದ ಹಣ ನೀಡುವಂತೆ ಆದೇಶಿಸಿತ್ತು. ಮೊದಲ ಎರಡು ತಿಂಗಳು ಜೀವನಾಂಶ ಕೊಟ್ಟ ರಾಜೇಶ್ ಮತ್ತೆ ಕೊಟ್ಟಿರಲಿಲ್ಲ. ಆದರೆ ಕಳೆದ ಒಂದು ವರ್ಷದ ಹಿಂದೆ ಜೀವನಾಂಶ ಕೊಡಲು ಆಗುವುದಿಲ್ಲ ಜೊತೆಯಲ್ಲಿ ಬಂದು ಸಂಸಾರ ಮಾಡು ನಾನೇ ಸಾಕುತ್ತೇನೆ ಎಂದು ಪತ್ನಿ ಲಕ್ಷ್ಮೀಯನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಆದರೆ ಕಳೆದ 10 ದಿನಗಳ ಹಿಂದ ಲಕ್ಷ್ಮೀ ನಾಪತ್ತೆಯಾಗಿದ್ದರು. ಹೀಗಾಗಿ ಗಂಡ ರಾಜೇಶ್ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ.
ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ದೂರುದಾರ ಪತಿ ರಾಜೇಶ್ ಕೊಲೆ ಮಾಡಿರುವ ಅಘಾತಕಾರಿ ಅಂಶ ತಿಳಿದುಬಂದಿದೆ. ಈ ಕುರಿತು ಪೊಲೀಸರ ವಿಚಾರಣೆ ವೇಳೆ ರಾಜೇಶ್ ಸತ್ಯ ಬಿಚ್ಚಿಟ್ಟಿದ್ದಾನೆ. ಕಿರಾತಕ ಗಂಡ ರಾಜೇಶ್ ತನ್ನ ಹೆಂಡತಿಯನ್ನ ರುಂಡ-ಮುಂಡ ಬೇರ್ಪಡಿಸಿ ಕೊಲೆ ಮಾಡಿದ್ದ. ಅಲ್ಲದೇ ಪತ್ನಿಯ ರುಂಡವನ್ನ ಸುಟ್ಟು ಹಾಕಿ ಮುಂಡವನ್ನು ಪೀಸ್ ಪೀಸ್ ಮಾಡಿ ಗುಂಡಸಂದ್ರ ಕೆರೆಯಲ್ಲಿ ಹೂತು ಹಾಕಿದ್ದ. ಸದ್ಯ ಆರೋಪಿಯ ನೀಡಿದ ಮಾಹಿತಿ ಮೇಲೆ ದೊಡ್ಡಬಳ್ಳಾಪುರ ಉಪವಿಭಾಗ ಅಧಿಕಾರಿ ಮಹೇಶ್ ಬಾಬು ನೇತೃತ್ವದಲ್ಲಿ ಮೃತದೇಹದ ಭಾಗಗಳಿಗಾಗಿ ಕೆರೆಯಲ್ಲಿ ಹುಡುಕಾಟ ನಡೆಸಲಾಗಿದೆ.