ನಾನು ಕೊಲ್ಲದಿದ್ರೆ ಅವಳೇ ನನ್ನ ಸಾಯಿಸ್ತಿದ್ಳು- ಕೊಡಲಿ ಸಮೇತ ಪೊಲೀಸರಿಗೆ ಪತಿ ಶರಣು

Public TV
1 Min Read

– ಕೊಲೆಗೂ ಮುನ್ನ ಮಕ್ಕಳನ್ನ ಸೋದರ ಮನೆಗೆ ಕಳುಹಿಸಿದ್ದ
– ಕೊಡಲಿಯಿಂದ ಕೊಚ್ಚಿ ಪತ್ನಿಯ ಬರ್ಬರ ಕೊಲೆ

ಲಕ್ನೋ: ವ್ಯಕ್ತಿಯೊಬ್ಬ ಕೊಡಲಿಯಿಂದ ಪತ್ನಿಯನ್ನು ಕೊಲೆ ಮಾಡಿದ್ದು, ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‍ನಲ್ಲಿ ನಡೆದಿದೆ.

ಸೀಮಾ ಮೃತ ಮಹಿಳೆ. ಆರೋಪಿ ಬಾಲುರಾಮ್ ಪತ್ನಿ ನಿದ್ದೆ ಮಾಡುತ್ತಿದ್ದಾಗ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ಸ್ವತಃ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಆರೋಪಿ ಬಾಲುರಾಮ್ ಪತ್ನಿಯನ್ನು ಕೊಲೆ ಮಾಡಿದ ಕೊಡಲಿ ಸಮೇತ ನೇರವಾಗಿ ಕೊಟ್ವಾಲಿ ಪೊಲೀಸ್ ಠಾಣೆಗೆ ಹೋಗಿದ್ದಾನೆ. ಅಲ್ಲಿ ನಾನು ನನ್ನ ಹೆಂಡತಿಯನ್ನು ಕೊಂದಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಮಾಹಿತಿಯ ಮೇರೆಗೆ ಪೊಲೀಸ್ ಅಧಿಕಾರಿ ಗಜೇಂದ್ರ ತ್ಯಾಗಿ ತಕ್ಷಣ ಕೊಲೆ ನಡೆದಿದ್ದ ಸ್ಥಳಕ್ಕೆ ಹೋಗಿದ್ದಾರೆ. ಅಲ್ಲಿ ರಕ್ತದ ಮಡುವಿನಲ್ಲಿ ಸೀಮಾಳ ಮೃತದೇಹ ಪತ್ತೆಯಾಗಿದೆ. ನಂತರ ಪೊಲೀಸರು ವಿಧಿವಿಜ್ಞಾನ ತಂಡವನ್ನು ಘಟನೆ ನಡೆದ ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿದ್ದಾರೆ.

ನನ್ನ ಪತ್ನಿ ಎರಡು ಮೊಬೈಲ್ ಫೋನ್ ಇಟ್ಟುಕೊಂಡಿದ್ದಳು. ಅಲ್ಲದೇ ಆಕೆ ಆಗಾಗ ಹುಡುಗರೊಂದಿಗೆ ಮಾತನಾಡುತ್ತಿದ್ದಳು. ಇತ್ತೀಚೆಗೆ ಅವಳು ಬೇರೊಬ್ಬನ ಜೊತೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದಳು. ಅವಳು ನನ್ನನ್ನು ಪ್ರೀತಿಸಲಿಲ್ಲ. ಒಂದು ವೇಳೆ ನಾನು ಅವಳನ್ನು ಕೊಲ್ಲದಿದ್ದರೆ, ಅವಳು ನನ್ನನ್ನು ಕೊಲ್ಲುತ್ತಿದ್ದಳು ಎಂದು ಆರೋಪಿ ಪೊಲೀಸರಿಗೆ ಹೇಳಿದ್ದಾನೆ.

ಬಾಲುರಾಮ್ ಬಿಹಾರ್ ಮೂಲಕ ಸೀಮಾಳನ್ನು 2011ರಲ್ಲಿ ಮದುವೆಯಾಗಿದ್ದನು. ಈ ದಂಪತಿಗೆ ನಾಲ್ಕು ಮಕ್ಕಳಿವೆ. ಪತ್ನಿಯನ್ನು ಕೊಲೆ ಮಾಡುವ ಮೊದಲು ಮಕ್ಕಳನ್ನು ತನ್ನ ಸಹೋದರನ ಮನೆಗೆ ಕಳುಹಿಸಿದ್ದನು. ನಂತರ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಪತ್ನಿಯ ಅಕ್ರಮ ಸಂಬಂಧದಿಂದಾಗಿ ಆಕೆಯನ್ನು ಕೊಲೆ ಮಾಡಿರುವುದಾಗಿ ಆರೋಪಿ ಹೇಳಿದ್ದಾನೆ. ಸದ್ಯಕ್ಕೆ ಆರೋಪಿ ಬಾಲುರಾಮ್‍ನನ್ನು ಬಂಧಿಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *