ಮಂಡ್ಯದಲ್ಲಿ ಮುಖ್ಯೋಪಾಧ್ಯಾಯರ ಕೊಲೆ ಪ್ರಕರಣ – ಹೆಂಡತಿ, ಮಗಳಿಂದಲೇ ಸುಪಾರಿ

Public TV
1 Min Read

ಮಂಡ್ಯ: ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗಳು ಮತ್ತು ಹೆಂಡತಿಯನ್ನ ಪೊಲೀಸರು ಬಂಧಿಸಿದ್ದಾರೆ.

ಮದ್ದೂರು ತಾಲೂಕಿನ ಬಿದರಹೊಸಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿದ್ದ ಶಶಿಭೂಷಣ್‍ರನ್ನ ಮಾರ್ಚ್ 31 ರಂದು ಕತ್ತು ಕೊಯ್ದು ಕೊಲೆ ಮಾಡಲಾಗಿತ್ತು. ಮದ್ದೂರು ತಾಲೂಕಿನ ಅರೆಚಾಕನಹಳ್ಳಿ ಗ್ರಾಮದ ಬಳಿ ನಡುರಸ್ತೆಯಲ್ಲಿ ಶಶಿಭೂಷಣ್‍ರನ್ನ ಕೊಲೆ ಮಾಡಲಾಗಿತ್ತು. ಹಾಡಹಗಲೇ ನಡೆದ ಕೊಲೆಗೆ ಸಾರ್ವಜನಿಕರು ಬೆಚ್ಚಿಬಿದ್ದಿದ್ರು.

ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಇದೀಗ ಕೊಲೆಗೆ ಸುಪಾರಿ ನೀಡಿದ್ದ ಮಗಳು ನವ್ಯಶ್ರೀ ಮತ್ತು ಹೆಂಡತಿ ಶಾಂತಮ್ಮಳನ್ನ ಬಂಧಿಸಿದ್ದಾರೆ. ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ತಾಯಿ ಮತ್ತು ಮಗಳು ಐದು ಲಕ್ಷ ರೂಪಾಯಿ ಸುಪಾರಿ ನೀಡಿ ಶಶಿಭೂಷಣ್ ಕೊಲೆ ಮಾಡಿಸಿದ್ರು. ಕೊಲೆಗಾರರಿಗೆ ಶಶಿಭೂಷಣ್ ಫೋಟೋ, ಅವರು ದಿನವೂ ಸಂಚರಿಸುವ ರಸ್ತೆ ಮತ್ತು ಪಾಠ ಮಾಡುವ ಶಾಲೆಯ ಫೋಟೋವನ್ನ ತಾಯಿ-ಮಗಳು ವಾಟ್ಸಪ್‍ನಲ್ಲಿ ಕಳುಹಿಸಿಕೊಟ್ಟಿದ್ರು. 6 ತಿಂಗಳ ಹಿಂದೆ ಮಗಳು ಮನೆ ಬಿಟ್ಟು ಹೋಗಿ ವಾಪಸ್ ಬಂದ ನಂತರ ತಂದೆ ಮನೆಗೆ ಸೇರಿಸಿರಲಿಲ್ಲ. ಈ ವಿಚಾರವಾಗಿ ಮಗಳು ತಂದೆಯ ಮಧ್ಯೆ ಸಮಸ್ಯೆ ಇತ್ತು ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

                      

ಶಶಿಭೂಷಣ್ ಪತ್ನಿ ಶಾಂತಮ್ಮ ಕೂಡ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ರು. ಇದೀಗ ಕೊಲೆಗೆ ಸುಪಾರಿ ನೀಡಿದ್ದ ತಾಯಿ ಮಗಳನ್ನ ಕೆಎಂ ದೊಡ್ಡಿ ಪೊಲೀಸರು ಬಂಧಿಸಿದ್ದು ಸುಪಾರಿ ಪಡೆದು ಕೊಲೆಗೈದ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *