ಧಾರವಾಡ: ಏನಯ್ಯಾ ನಿಮ್ಮ ಮನೆಗೆ ಬರುವ ರಸ್ತೆಗಳನ್ನು ಹೇಗೆ ಇಟ್ಟುಕೊಂಡಿದ್ದೀರಲ್ಲ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪ್ರಶ್ನಿಸಿದ್ದಾರೆ.
ಭಾನುವಾರ ಧಾರವಾಡದಲ್ಲಿರುವ ವಿನಯ್ ಕುಲಕರ್ಣಿ ಅವರ ಮನೆಗೆ ಭೇಟಿ ನೀಡಿ, ಕಾರು ಇಳಿಯುತ್ತಿದ್ದಂತೆ ಮಾಜಿ ಸಚಿವರಿಗೆ ರೇವಣ್ಣ ಹೀಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ವಿನಯ್ ಕುಲಕರ್ಣಿ ಅವರು, ಅಣ್ಣಾ ಯುಜಿಡಿ ಕಾಮಗಾರಿ ನಡೆಯುತ್ತಿದೆ ಹೀಗಾಗಿ ರಸ್ತೆ ಹಾಳಾಗಿವೆ ಎಂದು ಉತ್ತರಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ರೇವಣ್ಣ ಅವರು, ಧಾರವಾಡ ಜಿಲ್ಲಾ ಪ್ರವಾಸ ಕೈಗೊಂಡಿರುವೆ. ಹೀಗಾಗಿ ಸಹೋದರ ವಿನಯ್ ಕುಲಕರ್ಣಿ ಮನೆಗೆ ಭೇಟಿ ನೀಡಿದ್ದೇನೆ. ವಿನಯ್ ಸೋತಿದ್ದು ನನಗೂ ನೋವಾಗಿದೆ. ಮುಂದಿನ ದಿನಗಳಲ್ಲಿ ಸಹೋದರ ವಿನಯ್ಗೆ ಉನ್ನತ ಸ್ಥಾನಮಾನ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿನಯ್ ಕುಲಕರ್ಣಿ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಮುಂಚುಣಿಯ ನಾಯಕ. ಹೋರಾಟದಿಂದಾಗಿ ಸಚಿವ ಸ್ಥಾನ ವಂಚಿತರ ಮನವೊಲಿಸಲು ನಾನು ವಿನಯ್ ಕುಲಕರ್ಣಿ ಅವರ ಮನೆಗೆ ಭೇಟಿ ನೀಡಿಲ್ಲ. ಅದೆಲ್ಲವನ್ನು ಪಕ್ಷದ ನಾಯಕರು ನಿರ್ಧರಿಸುತ್ತಾರೆ. ಆ ವಿಷಯದ ಕುರಿತು ನಾನು ತಲೆ ಕೆಡಿಸಿಕೊಳ್ಳಬೇಕಿಲ್ಲ, ವಿನಯ್ ನನ್ನ ಆತ್ಮೀಯ ಸಹೋದರ ಅಷ್ಟೇ ಎಂದು ರೇವಣ್ಣ ಹೇಳಿದರು.
ಬಳಿಕ ಮಾತನಾಡಿದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು, ಕೆಲವೇ ದಿನಗಳಲ್ಲಿಯೇ ಎಂ.ಬಿ.ಪಾಟೀಲರು ಕೂಡ ಸಚಿವರಾಗುತ್ತಾರೆ. ಕೇವಲ ಒಂದೇ ವಾರದಲ್ಲಿಯೇ ಯಾರು ಯಾರು ಮಂತ್ರಿಗಳಾಗುತ್ತಾರೆ ಎನ್ನುವುದು ತಿಳಿಯುತ್ತದೆ ಎಂದರು.