ನಾನು ಈಗ ಯಾಕೆ ಕೆಂಪು ದೀಪ ತೆಗೆಯಬೇಕು?- ಪ್ರಶ್ನಿಸಿದ್ದಕ್ಕೆ ಕಣ್ಣು ಕೆಂಪಾಗಿಸಿದ ಸಿಎಂ

Public TV
1 Min Read

ಬೆಂಗಳೂರು: ಕೇಂದ್ರ ಸರ್ಕಾರ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಗಣ್ಯವ್ಯಕ್ತಿಗಳ ಕಾರಿನ ಮೇಲೆ ಕೆಂಪು ದೀಪ ನಿಷೇಧಿಸಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ತಮ್ಮ ಕಾರಿನ ಮೇಲೆ ಕೆಂಪು ದೀಪ ತೆರವಿನ ಬಗ್ಗೆ ಪ್ರಶ್ನಿಸಿದ್ದಕ್ಕೆ ಗರಂ ಆಗಿ ಉತ್ತರಿಸಿದ್ದಾರೆ.

ನಾನು ಈಗ ಯಾಕೆ ಕೆಂಪು ದೀಪ ತೆಗೆಯಬೇಕು? ಕೇಂದ್ರ ಸಚಿವ ಸಂಪುಟ ನಿರ್ಧಾರ ಯಾವಾಗಿನಿಂದ ಜಾರಿಗೆ ಬರುತ್ತೆ? ಮೇ ಒಂದರಿಂದ ಜಾರಿಗೆ ಬರುತ್ತೆ. ಈಗ ತೆಗೆಯಬೇಕಾದ ಅವಶ್ಯಕತೆ ಇಲ್ಲ ಎಂದು ಕೆಂಪು ದೀಪ ತೆರವು ಬಗ್ಗೆ ಸಿಎಂ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ನಿನ್ನೆಯೂ ಸಿಎಂ ಗರಂ: ಸೋಮವಾರ ಸ್ವಾತಂತ್ರ್ಯ ಉದ್ಯಾನವನದ ಖಾದಿ ಉತ್ಸವ ಕಾರ್ಯಕ್ರಮಕ್ಕೆ ಸಿಎಂ ಕೆಂಪು ದೀಪ ಇಲ್ಲದ ಕಾರಿನಲ್ಲಿ ಆಗಮಿಸಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಮಾಧ್ಯಮಗಳು ಕೆಂಪು ದೀಪ ತೆಗೆದ ಬಗ್ಗೆ ಪ್ರಶ್ನೆ ಕೇಳಿದಾಗ ಸಿಎಂ ಕಾರನ್ನು ನೋಡಿ ಆಶ್ಚರ್ಯಗೊಂಡು, “ರೆಡ್ ಲೈಟ್ ತೆಗೆದಿದ್ದು ಯಾಕೆ” ಎಂದು ಚಾಲಕನನ್ನು ಪ್ರಶ್ನಿಸಿದ್ದರು. ಈ ವೇಳೆ “ಆರ್ಡರ್ ಆಗಿದೆ ಸಾರ್, ಅದಕ್ಕೆ ತೆಗೆಯಲಾಗಿದೆ” ಎಂದು ಉತ್ತರಿಸಿದ್ರು. ಇದಕ್ಕೆ ಗರಂ ಆದ ಸಿಎಂ, ಯಾವ ಆರ್ಡರ್? ನನ್ನ ಅನುಮತಿ ಇಲ್ಲದೇ ಕೆಂಪು ದೀಪ ತೆಗೆದದ್ದು ಯಾಕೆ ಎಂದು ಸಿಟ್ಟಿನಿಂದ ಪ್ರಶ್ನಿಸಿದ್ದರು.

ಮೇ 1 ರಿಂದ ಅನ್ವಯವಾಗುವಂತೆ ರಾಷ್ಟ್ರಪತಿ, ಪ್ರಧಾನಿಯೂ ಸೇರಿದಂತೆ ಗಣ್ಯವ್ಯಕ್ತಿಗಳ ಹಾಗೂ ಸರ್ಕಾರಿ ಅಧಿಕಾರಿಗಳ ಕಾರಿನ ಮೇಲೆ ಕೆಂಪು ದೀಪ ಬಳಕೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ತುರ್ತು ಸೇವೆ ಒದಗಿಸುವ ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳು ಮಾತ್ರ ಕೆಂಪು/ನೀಲಿ ದೀಪವನ್ನ ಬಳಸಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *