PSI ಅಕ್ರಮ ಪ್ರಕರಣದಲ್ಲಿ ಸಿಎಂಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿಲ್ಲ ಯಾಕೆ: ಪ್ರಿಯಾಂಕ್‌ ಖರ್ಗೆ ಪ್ರಶ್ನೆ

Public TV
1 Min Read

ಬೆಂಗಳೂರು: ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣದಲ್ಲಿ ಅಂದಿನ ಗೃಹ ಸಚಿವರು ಹಾಗೂ ಪರೀಕ್ಷಾ ಪ್ರಕ್ರಿಯೆಯ ಮುಖ್ಯಸ್ಥರಾದ ಇಂದಿನ ಸಿಎಂಗೆ ಯಾಕೆ ನೋಟಿಸ್ ನೀಡಿಲ್ಲ. ಯಾಕೆ ಅವರನ್ನು ತನಿಖೆಗೆ ಒಳಪಡಿಸಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ.

ʻಪಬ್ಲಿಕ್ ಟಿವಿʼಗೆ ಹೇಳಿಕೆ ನೀಡಿದ ಅವರು, ಪಿಎಸ್ಐ ಅಕ್ರಮ ಪ್ರಕರಣದಲ್ಲಿ ನಾನು ಆರೋಪಿಯಲ್ಲ, ಸಾಕ್ಷಿ ಕೂಡ ಅಲ್ಲ. ಆದರೂ ನನಗೆ ನೋಟಿಸ್ ಕೊಟ್ಟಿದ್ದಾರೆ. ಯಾವ ರೂಲ್ ಅಡಿಯಲ್ಲಿ ನೋಟಿಸ್ ಕೊಟ್ಟಿದ್ದಾರೆ ಅನ್ನೋದು ಅವರಿಗೂ ಗೊತ್ತಿಲ್ಲ. ನಾನು ಲಿಖಿತ ರೂಪದಲ್ಲಿ ಇಂದು ಪ್ರತಿಕ್ರಿಯೆ ಕೊಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ರೇವಣ್ಣನಿಗೆ ಶಿಕ್ಷಣ ಅಂದರೆ ಏನು ಅಂತ ಗೊತ್ತಿಲ್ಲ: ಅಶ್ವತ್ಥ್ ನಾರಾಯಣ್

ನನ್ನ ಪ್ರಶ್ನೆ, ನನ್ನ ಮಾಧ್ಯಮ ಹೇಳಿಕೆಗೆ ನೋಟಿಸ್ ಬರುತ್ತೆ. ಆದರೆ ಸಚಿವರಾದ ಪ್ರಭು ಚೌಹಾಣ್ ಮೊದಲೇ ಪತ್ರ ಬರೆದಿದ್ದಾರೆ. ಅವರಿಗೆ ನೋಟಿಸ್ ಕೊಟ್ಟಿಲ್ಲ. ಸಂಕನೂರು ಪತ್ರ ಬರೆದಿದ್ದಾರೆ ಅವರನ್ನೂ ವಿಚಾರಣೆಗೆ ಕರೆದಿಲ್ಲ. ಪ್ರಮುಖ ಪ್ರಶ್ನೆ ದಿವ್ಯ ಹಾಗರಗಿ ಬಂಧನ ಯಾಕಿನ್ನೂ ಆಗಿಲ್ಲ? ಗೃಹ ಸಚಿವರೇ ರಕ್ಷಣೆ ನೀಡ್ತಿದಾರಾ? ಇಡಿ ಸರ್ಕಾರವೇ ದಿವ್ಯ ಹಾಗರಗಿ ರಕ್ಷಣೆಗೆ ನಿಂತಂತಿದೆ ಎಂದು ಆರೋಪಿಸಿದ್ದಾರೆ.

ಅಂದಿನ ನೇಮಕಾತಿ ಪ್ರಕ್ರಿಯೆಯ ಪ್ರಮುಖರಾಗಿದ್ದವರು ಈಗಿನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ, ವಿಚಾರಣೆಗೆ ಕರೆದಿಲ್ಲಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಶಾಲೆಗಳನ್ನ ಕ್ಲೋಸ್ ಮಾಡಲ್ಲ: ಬಿ.ಸಿ ನಾಗೇಶ್

ನಾನು ಮಾಧ್ಯಮ ಹೇಳಿಕೆ ಕೊಟ್ಟು ಆಡಿಯೋ ಬಿಡುಗಡೆ ಮಾಡಿದ ನಂತರ ನನ್ನ ಟ್ಟಿಟ್ಟರ್ ಅಕೌಂಟ್ ಹ್ಯಾಕ್ ಆಗುತ್ತೆ. ನನಗೆ ಬೆದರಿಕೆ ಕರೆ ಬರುತ್ತೆ. ಇದೆಲ್ಲಾ ನೋಡಿದರೆ ವ್ಯವಸ್ಥಿತವಾಗಿ ಹೆದರಿಸುವ ಕೆಲಸ ಮಾಡಲಾಗುತ್ತಿದೆ ಎನ್ನಿಸುತ್ತೆ. ಹಿಂದೆ ಬೆದರಿಕೆ ಕರೆ ಬಂದಾಗಲೇ ಪೊಲೀಸ್ ದೂರು ಕೊಟ್ಟಿದ್ದೇವೆ. ಆಗಲೇ ಸರಿಯಾಗಿ ತನಿಖೆ ನಡೆಯಲಿಲ್ಲ‌. ಪೊಲೀಸರು ಇದು ಅಂತಾರಾಷ್ಟ್ರೀಯ ಕರೆ, ತನಿಖೆ ಮಾಡುವುದಕ್ಕೆ ಆಗಲ್ಲ ಅಂದಿದ್ದರು. ಅದಕ್ಕೆ ಈಗ ದೂರು ಕೊಡೋಕೆ ಹೋಗಿಲ್ಲ ಎಂದು ಖರ್ಗೆ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *