ಬುಲಂದಶಹರ್ ಹಿಂಸಾಚಾರ ಪ್ರಕರಣ: ಪೊಲೀಸ್ ಅಧಿಕಾರಿ ಗುಂಡೇಟು – ಶಂಕಿತ ಆರೋಪಿ ಯೋಧನ ಬಂಧನ

Public TV
2 Min Read

ಲಕ್ನೋ: ಉತ್ತರಪ್ರದೇಶದ ಬುಲಂಧಶಹರ್ ನಲ್ಲಿ ನಡೆದ ಹಿಂಸಾಚಾರದಲ್ಲಿ ಪೊಲೀಸ್ ಅಧಿಕಾರಿಯ ಹತ್ಯೆಗೆ ಸಂಬಂಧಿಸಿದಂತೆ ಶಂಕಿತ ಆರೋಪಿ ಯೋಧನನ್ನು ಎಸ್‍ಟಿಎಫ್ ಬಂಧಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಎಸ್‍ಟಿಎಫ್ ಅಧಿಕಾರಿ ಅಭಿಷೇಕ್ ಸಿಂಗ್, ಬುಲಂದಶಹರ್ ಪ್ರಕರಣದ ಶಂಕಿತ ಆರೋಪಿ `ಜಿತು ಫೌಜಿ’ಯನ್ನು ಬಂಧಿಸಿದ್ದೇವೆ. ಶನಿವಾರ ಮಧ್ಯರಾತ್ರಿ ಸೇನೆ ಜಿತು ಫೌಜಿಯನ್ನು ನಮ್ಮ ವಶಕ್ಕೆ ನೀಡಿತ್ತು. ಸದ್ಯ ಪ್ರಾಥಮಿಕ ತನಿಖೆಯನ್ನು ಪೂರ್ಣಗೊಳಿಸಿದ್ದೇವೆ. ಬಂಧಿತ ಜಿತುರನ್ನು ಬುಲಂದಶಹರ್ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಯಾರಿದು ಜಿತು ಫೌಜಿ?
ಜಿತೆಂದರ್ ಮಲ್ಲಿಕ್ ಅಲಿಯಾಸ್ ಜಿತು ಫೌಜಿ ಭಾರತೀಯ ಸೇನೆಯ 22ನೇ ರಾಷ್ಟ್ರೀಯ ರೈಫಲ್ಸ್ ಪಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಜಿತು ಮೂಲತಃ ಬುಲಂದಶಹರ್ ನಿವಾಸಿಯಾಗಿದ್ದರು. 15 ದಿನಗಳ ರಜೆ ಮೇರೆಗೆ ಊರಿಗೆ ಬಂದಿದ್ದಾಗ, ಹಿಂಸಾಚಾರ ನಡೆದ ಸಂದರ್ಭದಲ್ಲಿ ಜಿತು ಅಲ್ಲಿಯೇ ಇದ್ದರು. ಹಿಂಸಾಚಾರದಂದು ಅವರ ಚಲನವಲನಗಳು ವಿಡಿಯೋದಲ್ಲಿ ದಾಖಲಾಗಿತ್ತು.

ಪೊಲೀಸ್ ಅಧಿಕಾರಿ ಸುಭೋದ್ ಕುಮಾರ್ ಹಾಗೂ ಯುವಕ ಮೃತಪಟ್ಟ ನಂತರ ನೇರವಾಗಿ ಜಿತು ಕಾಶ್ಮೀರದ ಸೋಪೂರ್‍ಗೆ ತೆರಳಿದ್ದರು. ಬುಲಂದಶಹರ್ ಹಿಂಸಾಚಾರ ಪ್ರಕರಣದಲ್ಲಿ ಯೋಧನ ಕೈವಾಡ ಹಿನ್ನೆಲೆಯಲ್ಲಿ, ಸೇನೆ ಶುಕ್ರವಾರ ಜಮ್ಮು ಕಾಶ್ಮೀರದ ಸೋಪೂರ್ ಪಟ್ಟಣದಲ್ಲಿ ವಶಕ್ಕೆ ಪಡೆದಿತ್ತು. ಬಳಿಕ ಶನಿವಾರ ಎಸ್‍ಟಿಎಫ್‍ಗೆ ಹಸ್ತಾಂತರಿಸಿತ್ತು.

ಏನಿದು ಬುಲಂದಶಹರ್ ಪ್ರಕರಣ?
ಕಳೆದ ಸೋಮವಾರ ಬುಲಂದ್‍ಶಹರ್ ಗ್ರಾಮದ ಹೊರವಲಯದಲ್ಲಿ ಪ್ರಾಣಿಯ ಪಳಿಯುಳಿಕೆ ಪತ್ತೆಯಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕೆಲ ಬಲಪಂಥಿಯ ಮುಖಂಡರು ಮತ್ತು ಗ್ರಾಮಸ್ಥರು ಸಯನಾ ರೋಡ್ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ರಸ್ತೆ ಸಂಚಾರ ಸುಗಮಗೊಳಿಸಲು ಪ್ರಯತ್ನಿಸಿದ್ದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ಆರಂಭವಾಗಿ, ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಉದ್ರಿಕ್ತರು ಪೊಲೀಸ್ ಠಾಣೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಗಲಭೆಯಿಂದಾಗಿ ಪೊಲೀಸ್ ಅಧಿಕಾರಿ ಹಾಗೂ ಇಬ್ಬರು ಮೃತಪಟ್ಟಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *