ಜೆಡಿಎಸ್-ಕಾಂಗ್ರೆಸ್ ಸಮನ್ವಯ ಸಮಿತಿಯ ಮುಖ್ಯಸ್ಥರನ್ನಾಗಿ ಮಾಜಿ ಸಿಎಂ ನೇಮಕದ ಹಿಂದಿನ ಗುಟ್ಟು ರಟ್ಟು!

Public TV
2 Min Read

ಬೆಂಗಳೂರು: ಖಾತೆಗಳ ಹಂಚಿಕೆ, ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯ ಜೊತೆ-ಜೊತೆಗೆ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಸುಗಮ ಪಯಣಕ್ಕಾಗಿಯೇ ಸಮನ್ವಯ ಸಮಿತಿ ರಚಿಸಲಾಗಿದೆ. ಈ ಸಮಿತಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಮುಖ್ಯಸ್ಥರನ್ನಾಗಿ ಮಾಡಲಾಗಿದ್ದು, ಸಾಕಷ್ಟು ಚರ್ಚೆ, ಕುತೂಹಲಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿ ಹುದ್ದೆಯ ಜೊತೆಗೆ ದೊಡ್ಡ ದೊಡ್ಡ ಖಾತೆಗಳನ್ನು ಪಡೆಯೋವಲ್ಲಿ ಜೆಡಿಎಸ್‍ನ ಕೈ ಮೇಲಾಗಿದ್ದರೂ ತೆನೆ ಹೊತ್ತ ಮಹಿಳೆಗೆ ಲಗಾಮು ಹಾಕುವ ಸಲುವಾಗಿಯೇ ಸಿದ್ದರಾಮಯ್ಯರನ್ನು ಮುಖ್ಯಸ್ಥರನ್ನಾಗಿ ಮಾಡಲಾಗಿದೆ ಅನ್ನೋ ಅಭಿಪ್ರಾಯವೂ ವ್ಯಕ್ತವಾಗಿದೆ.

ಸಿದ್ದರಾಮಯ್ಯನ್ನ ಸಮನ್ವಯ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಿರುವ ಹಿಂದಿನ ಕಾರಣ ಹೀಗಿದೆ.
* ದೇವೇಗೌಡರ ರಾಜಕೀಯ ಪಾಠಶಾಲೆಯಲ್ಲೇ ಬೆಳೆದಿರುವ ಸಿದ್ದರಾಮಯ್ಯಗೆ ಗುರುವಿನ ತಂತ್ರಗಾರಿಕೆ ಚಿರಪರಿಚಿತ.
* ಬಿಬಿಎಂಪಿಯಲ್ಲಿ ಮೈತ್ರಿ, ಕಾವೇರಿ ಜಲ ವಿವಾದದಲ್ಲಿ ದೇವೇಗೌಡರ ಸಲಹೆಗೆ ಮಣೆ ಹಾಕಿದ್ದ ಸಿದ್ದರಾಮಯ್ಯ.
* ದೇವೇಗೌಡರ ತಂತ್ರಗಾರಿಕೆಗೆ ಪ್ರತಿಯಾಗಿ ರಣತಂತ್ರ ಹೆಣೆದು ತಿರುಗೇಟು ಕೊಟ್ಟಿದ್ದ ಮಾಜಿ ಮುಖ್ಯಮಂತ್ರಿ.
* ಮೈತ್ರಿ ಕೂಟದಲ್ಲಿ ಜೆಡಿಎಸ್‍ನ ಓಟಕ್ಕೆ ಕಡಿವಾಣ ಹಾಕೋದಕ್ಕೆ ಸಿದ್ದರಾಮಯ್ಯರೇ ಸೂಕ್ತ ಎಂಬ ಅಭಿಪ್ರಾಯ.

ಒಂದು ವಾರಕ್ಕೂ ಹೆಚ್ಚು ಕಾಲ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ನಡೆದ ಖಾತೆ ಹಂಚಿಕೆ ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ಸಮ್ಮಿಶ್ರ ಸರ್ಕಾರದ ಸುಗಮ ಮೈತ್ರಿ ಸರ್ಕಾರಕ್ಕೆ 6 ಸೂತ್ರ ರಚನೆ ಮಾಡಿ ಎರಡು ಪಕ್ಷಗಳ ಕಾರ್ಯದರ್ಶಿಗಳು ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.

ಸುಗಮ ಮೈತ್ರಿ ಸರ್ಕಾರಕ್ಕೆ 6 ಸೂತ್ರ:
1. ಎರಡೂ ಪಕ್ಷಗಳ ಪ್ರಣಾಳಿಕೆಯನ್ನು ಒಳಗೊಂಡ ಸಾಮಾನ್ಯ ಕಾರ್ಯಸೂಚಿ ಜಾರಿ.
2. ಸಿದ್ದರಾಮಯ್ಯ ನೇತೃತ್ವದಲ್ಲಿ 5 ಸದಸ್ಯರ ಸಮನ್ವಯ ಸಮಿತಿ: ಸಮಿತಿಯಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಕೆ.ಸಿ.ವೇಣುಗೋಪಾಲ್ ಹಾಗೂ ಡ್ಯಾನಿಷ್ ಅಲಿ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಮನ್ವಯ ಸಮಿತಿ ಸಭೆ ಪ್ರತಿ ತಿಂಗಳಿಗೊಮ್ಮೆ ಸಭೆ ಸೇರಿ ಚರ್ಚೆ ನಡೆಸಲಾಗುತ್ತದೆ.
3. ಸರ್ಕಾರದ ಕಾರ್ಯಸೂಚಿ ಮಾಹಿತಿ ನೀಡಲು ಎರಡೂ ಪಕ್ಷಗಳ ತಲಾ ಒಬ್ಬರು ವಕ್ತಾರರು.
4. ಸಮನ್ವಯ ಸಮಿತಿ ನೀಡುವ ಮಾರ್ಗಸೂಚಿಯಂತೆ ನಿಗಮ-ಮಂಡಳಿಗಳಿಗೆ ನೇಮಕ.
5. ಲೋಕಸಭೆ ಚುನಾವಣೆಗೂ ಮೈತ್ರಿ ಮುಂದುವರೆಯುತ್ತದೆ.
6. ಕುಮಾರಸ್ವಾಮಿ 5 ವರ್ಷ ಸಿಎಂ ಆಗಿರಲು ಸಂಪೂರ್ಣ ಬೆಂಬಲ ನೀಡಲಾಗಿದೆ. ಅಲ್ಲದೇ ಸಂಪುಟ ವಿಸ್ತರಣೆಯಲ್ಲಿ 2/3 ಪಾಲು ಕಾಂಗ್ರೆಸ್‍ಗೆ, 1/3 ಪಾಲು ಜೆಡಿಎಸ್‍ಗೆ ಹಂಚಿಕೆ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *