ದೀಪಾವಳಿಯಂದು ಬಲೀಂದ್ರ ಪೂಜೆಯನ್ನು ಯಾಕೆ ಮಾಡುತ್ತಾರೆ? ರೈತರು ಹೇಗೆ ಬಲಿಯನ್ನು ಸ್ವಾಗತಿಸುತ್ತಾರೆ?

Public TV
3 Min Read

ದೀಪಾವಳಿ ಬಲಿಪಾಡ್ಯಮಿಯೊಂದಿಗೆ ಈ ಮೂರು ದಿನಗಳ ಹಬ್ಬ ಮುಗಿಯುತ್ತದೆ. ಅಮಾವಾಸ್ಯೆಯ ನಂತರದ ಪಾಡ್ಯದಂದು ದಾನವ ಅರಸನಾದ ಬಲೀಂದ್ರನ ಪೂಜೆಯನ್ನು ನಡೆಸುವುದರಿಂದ ಈ ದಿನವನ್ನು ಬಲಿಪಾಡ್ಯಮಿ ಎಂದೇ ಕರೆಯಲಾಗುತ್ತದೆ.

ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣುಭಕ್ತ, ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿ ಪ್ರಜೆಗಳನ್ನು ಅತ್ಯಂತ ಯೋಗಕ್ಷೇಮದಿಂದ ನೋಡಿಕೊಳ್ಳುತ್ತಿರುತ್ತಾನೆ. ರಾಕ್ಷಸ ರಾಜನಾದರೂ ದಾನ ಧರ್ಮದಿಂದ ಹೆಸರುವಾಸಿಯಾಗಿದ್ದ ಬಲಿ ಮಹಾರಾಜನಿಗೆ ತನ್ನ ರೀತಿಯಲ್ಲಿ ಬೇರೆ ಯಾರು ಪ್ರಜೆಗಳನ್ನು ನೋಡಿಕೊಳ್ಳುವುದಿಲ್ಲ ಎಂಬ ಅಹಂಕಾರ ಬರುತ್ತದೆ. ಈತನನ್ನು ಹೇಗಾದರೂ ಮಾಡಿ ಸಂಹಾರ ಮಾಡಬೇಕೆಂದು ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ. ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಮಾಡಿ ಗರಿಗರಿಯಾದ ಶಂಕರಪೊಳೆ

ದೇವತೆಗಳಿಗೆ ಅಭಯ ನೀಡಿದ ವಿಷ್ಣು ವಾಮನನ (ಬಾಲಕ) ರೂಪದಲ್ಲಿ ಬಲಿ ಮಹಾರಾಜನ ಬಳಿ ಬರುತ್ತಾನೆ. ವಾಮನ ಮಹಾರಾಜನ ಬಳಿ,”ತನ್ನ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ನೀಡಬಹುದೇ?” ಎಂದು ಕೇಳುತ್ತಾನೆ.  ಇದನ್ನೂ ಓದಿ: ಉತ್ತರ ಭಾರತದಲ್ಲಿ 5 ದಿನ ದೀಪಾವಳಿ – ಯಾವ ದಿನ ಯಾವ ಹಬ್ಬ?

ಪ್ರಜಾಪರಿಪಾಲನೆಯಲ್ಲಿ ಯಶಸ್ವಿಕಂಡಿರುವ ನನಗೆ ಈ ಪುಟ್ಟ ಬಾಲಕನ ಬೇಡಿಕೆಯನ್ನು ಈಡೇರಿಸುವ ಯೋಗ್ಯತೆ ನನಗಿಲ್ವಾ ಎಂಬ ಅಹಂಕಾರದಿಂದ ಬಲೀಂದ್ರ ಮಹಾರಾಜ ವಾಮನನಿಗೆ, “ನೀನು ಕೇಳಿದ ಮೂರು ಹೆಜ್ಜೆ ಊರುವಷ್ಟು ಜಾಗ ನೀಡುತ್ತೇನೆ” ಎಂದು ವಚನವನ್ನು ಕೊಡುತ್ತಾನೆ. ಇದನ್ನೂ ಓದಿ: ದೀಪಾವಳಿಯಂದು ಎಣ್ಣೆ ಸ್ನಾನ ಮಾಡೋದು ಯಾಕೆ? ನರಕಕ್ಕೆ ಹೋಗಲ್ಲ ಯಾಕೆ?

ಸ್ಥಳವನ್ನು ದಾನ ಪಡೆಯುವಾಗ ವಾಮನಮೂರ್ತಿ ಆಕಾಶದ ಉದ್ದಕ್ಕೂ ಬೆಳೆಯುತ್ತಾನೆ. ಒಂದು ಪಾದವನ್ನು ಭೂಮಿ ಮೇಲೆ, ಮತ್ತೊಂದು ಪಾದವನ್ನು ಆಕಾಶದ ಮೇಲೆ ಇರಿಸುತ್ತಾನೆ. ಇನ್ನೊಂದು ಪಾದ ಇಡಲು ಜಾಗ ಕಾಣುತ್ತಿಲ್ಲ ಎಲ್ಲಿ ಇಡಬೇಕು ಎಂದು ಕೇಳಿದಾಗ ಬಲಿ ಚಕ್ರವರ್ತಿಗೆ ಜ್ಞಾನೋದಯವಾಗಿ ನನ್ನ ತಲೆ ಮೇಲೆ ಇಡು ಎಂದು ಹೇಳುತ್ತಾನೆ. ಇದನ್ನೂ ಓದಿ: ದೀಪಾವಳಿಯ ದೀಪಾರಾಧನೆ-ಮನೆಯ ಮುಂಭಾಗ ಇರಿಸುವ ದೀಪಗಳೆಷ್ಟಿರಬೇಕು?

ನನ್ನ ತಲೆ ಮೇಲೆ ನಿಮ್ಮ ಪಾದ ಇಡುವ ಮೂಲಕ ನನ್ನಲ್ಲಿರುವ ಅಹಂಕಾರವೆಲ್ಲ ನಾಶವಾಗಲಿ ಎಂದು ವಾಮನನ ಬಳಿ ಬಲಿ ಕ್ಷಮೆ ಕೇಳುತ್ತಾನೆ. ಶ್ರೀಮನ್ನಾರಾಯಣ ತನ್ನ ಪಾದವನ್ನು ಬಲೀಂದ್ರ ಮಹಾರಾಜನ ಮೇಲೆ ಇರಿಸಿ ಪಾತಾಳಕ್ಕೆ ಕಳುಹಿಸುತ್ತಾನೆ.

ತಲೆ ಮೇಲೆ ಕಾಲನ್ನು ಇಡುವ ಮುನ್ನ ವಾಮನ ಬಳಿ ಬಲಿ, ನನ್ನ ಮಕ್ಕಳಂತೆ ನಾನು ಪ್ರಜೆಗಳನ್ನು ನೋಡಿದ್ದೇನೆ. ಹೀಗಾಗಿ ಪ್ರಜೆಗಳನ್ನು ನೋಡಲು ಅವಕಾಶ ನೀಡಬೇಕೆಂದು ಪ್ರಾರ್ಥನೆ ಮಾಡಿಕೊಳ್ಳುತ್ತಾನೆ. ಈ ಪ್ರಾರ್ಥನೆ ಸ್ವೀಕರಿಸಿದ ವಾಮನ ಅಸ್ತು ಎಂದು ಹೇಳಿ ತಲೆಯ ಮೇಲಿಟ್ಟು ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದುಬಿಡುತ್ತಾನೆ. ಇದನ್ನೂ ಓದಿ: ದೀಪಾವಳಿಗೆ ರುಚಿ ರುಚಿಯಾದ ಕುಂಬಳಕಾಯಿ ಇಡ್ಲಿ ಮಾಡೋದು ಹೇಗೆ?

ಬಲಿಯ ಭಕ್ತಿಯನ್ನು ಮತ್ತು ದಾನಶೀಲಗುಣವನ್ನು ಮೆಚ್ಚಿದ ವಿಷ್ಣು ಪ್ರತಿವರ್ಷ ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಅದೇನೆಂದರೆ ಆಶ್ವಯುಜ ಮಾಸದಲ್ಲಿ ಮೂರು ದಿವಸಗಳ ಕಾಲ ನೀನು ಭೂಲೋಕಕ್ಕೆ ಬರಬಹುದು. ಅಲ್ಲಿ ನಿನ್ನನ್ನು ಜನತೆ ಪೂಜೆ ಮಾಡುವರು. ಇದರ ಫಲವಾಗಿಯೇ ದೀಪಾವಳಿ ಸಮಯದಲ್ಲಿ ಎಲ್ಲರೂ ದೀಪ ಹಚ್ಚಿ ಬಲೀಂದ್ರ ಪೂಜೆ ಕೈಗೊಳ್ಳುತ್ತಾರೆ. ಆಶ್ವಯುಜ ಕೃಷ್ಣ ಚತುರ್ದಶಿ, ಅಮಾವಾಸ್ಯೆ ಮತ್ತು ಕಾರ್ತಿಕ ಶುದ್ಧ ಪಾಡ್ಯ – ಈ ಮೂರು ದಿನಗಳನ್ನು ಬಲಿರಾಜ್ಯವೆಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಬಲಿ ಚಕ್ರವರ್ತಿ ಪಾತಾಳದಿಂದ ಭೂಲೋಕ ಸಂಚಾರಕ್ಕೆ ಬರುತ್ತಾನೆಂಬ ನಂಬಿಕೆಯಲ್ಲಿ ಬಲೀಂದ್ರ ಪೂಜೆ ನಡೆಯುತ್ತದೆ.

ಬಲೀಂದ್ರ ಮಹಾರಾಜ ಭೂಲೋಕದಲ್ಲಿ ಸಂಚಾರ ಮಾಡುತ್ತಿದ್ದಾನೆ. ಹೀಗೆ ನನ್ನ ಮನೆ ಬಾಗಿಲಿಗೂ ಬಂದು ನನ್ನ ಕುಟುಂಬವನ್ನು ನೋಡುತ್ತಾನೆ ಎಂಬ ನಂಬಿಕೆ ಈಗಲೂ ಗ್ರಾಮೀಣ ಭಾಗಗಳಲ್ಲಿದೆ. ಈ ದಿನ ರೈತರೂ ಬಲಿಯ ನೆನಪಿಗಾಗಿ ಹಿಟ್ಟಿನ, ಇಲ್ಲವೆ ಗೋಮಯದ ಬಲಿಯ ಮೂರ್ತಿ ಮಾಡಿ, ಪೂಜಿಸುವರು. ಹೊಲದಲ್ಲಿ ಕೈಗೆ ಬಂದ ಗೋಧಿ, ರಾಗಿ, ಬತ್ತ, ಕಬ್ಬು ಮುಂತಾದವುಗಳ ತೆನೆಗಳನ್ನು ಹೂಮುಡಿಸಿ ಪೂಜೆ ಮಾಡುತ್ತಾರೆ. ತಮ್ಮ ಪ್ರಾಂತ್ಯದಲ್ಲಿ ಏನು ಬೆಳೆದಿರುತ್ತೋ ಆ ತೆನೆಯನ್ನು ಬಾಗಿಲಿಗಿಟ್ಟು ಪೂಜೆ ಮಾಡಲಾಗುತ್ತದೆ. ಅಲ್ಲದೆ ಮನೆ ಮುಂದೆ ರಂಗೋಲಿಗಳನ್ನು ಹಾಕಿ, ದೀಪಗಳನ್ನು ಹಚ್ಚುವ ಸಂಪ್ರದಾಯವಿದೆ. ಇದನ್ನೂ ಓದಿ: ದೀಪಾವಳಿ ಸಂಭ್ರಮಕ್ಕೆ ಜೊತೆಯಾಗಲಿದೆ ಪರಿಸರ ಸ್ನೇಹಿ ಹಸಿರು ಪಟಾಕಿ

ಈ ದಿನ ಜನರೆಲ್ಲ ಹೊಸ ಬಟ್ಟೆ ತೊಟ್ಟು, ಸಂತೋಷ ಸಂಭ್ರದಿಂದ ಬಲಿಯನ್ನು ಆರಾಧಿಸುತ್ತಾರೆ. ಈ ದಿನ ಯಾರು ಯಾವ ಮನಸ್ಸಿನಿಂದ ಇರುತ್ತಾರೋ, ಅವರು ಆ ವರ್ಷವೆಲ್ಲಾ ಅದೇ ರೀತಿ ಸುಖ ಅಥವಾ ದುಃಖದಿಂದ ಇರಬೇಕಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಿದೆ. ಕೆಲವೆಡೆ ಅಳಿಯಂದಿರು, ಸಪತ್ನೀಕರಾಗಿ ಹೋಗಿ, ಅತ್ತೆ ಮಾವಂದಿರಿಗೆ ಗುರು ಹಿರಿಯರಿಗೆ, ಕಾಣಿಕೆ ಅರ್ಪಿಸುತ್ತಾರೆ.

https://www.youtube.com/watch?v=bdq-b9Difjs

Share This Article
Leave a Comment

Leave a Reply

Your email address will not be published. Required fields are marked *