ಹುಬ್ಬಳ್ಳಿ ದೇಶದ್ರೋಹಿಗಳ ಬೆನ್ನಿಗೆ ನಿಂತಿದ್ಯಾ ಸರ್ಕಾರ?- ಪೊಲೀಸರಿಗೆ, ಬೊಮ್ಮಾಯಿಗೆ ‘ಪಬ್ಲಿಕ್’ ಪ್ರಶ್ನೆಗಳು

Public TV
3 Min Read

– ಶ್ಯೂರಿಟಿ ಕೊಟ್ಟವರ ಬಗ್ಗೆ ಬಾಯ್ಬಿಡದ ಪೊಲೀಸರು
– ಗೃಹ ಸಚಿವ ಬೊಮ್ಮಾಯಿ ಮೇಲೆ ಹೈಕಮಾಂಡ್ ಸಿಟ್ಟು

ಹುಬ್ಬಳ್ಳಿ: ದೇಶದ್ರೋಹಿ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಸ್ಟೇಷನ್ ಬೇಲ್ ಕೊಟ್ಟ ಪ್ರಕರಣ ಹುಬ್ಬಳ್ಳಿ ಪೊಲೀಸರಿಗೆ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಉರುಳಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಿದೆ. ದೇಶದ್ರೋಹಿಗಳಿಗೆ ಬೇಲ್ ಕೊಟ್ಟ ಪ್ರಕರಣವನ್ನು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ.

ದೇಶದಲ್ಲಿ ದೇಶದ್ರೋಹ ಕೇಸ್‍ಗಳ ವಿರುದ್ಧ ವ್ಯಾಪಕ ಹೋರಾಟ ನಡೆಯುತ್ತಿದೆ. ಹಲವು ಬಾರಿ ದೇಶದ್ರೋಹ ಕೇಸ್ ದಾಖಲಿಸುವಂತೆ ಬಿಜೆಪಿಯೇ ಒತ್ತಾಯಿಸಿದೆ. ಆದ್ರೀಗ ಬಿಜೆಪಿ ಸರ್ಕಾರವೇ ಆಡಳಿತವಿರುವ ಕರ್ನಾಟಕದಲ್ಲೇ ದೇಶದ್ರೋಹಿಗಳಿಗೆ ಸ್ಟೇಷನ್ ಬೇಲ್ ಕೊಡಲಾಗಿದೆ. ಈ ಬೇಲ್ ಹಿಂದೆ ಯಾರೆಲ್ಲಾ ಇದ್ದಾರೆ? ಯಾರ ಒತ್ತಡವಿದೆ? ಎನ್ನುವ ಬಗ್ಗೆ ವಿವರಣೆ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಹೈಕಮಾಂಡ್ ಸೂಚಿಸಿದೆ. ಆರ್‌ಎಸ್‍ಎಸ್ ಕೂಡ ಅಸಮಾಧಾನ ವ್ಯಕ್ತಪಡಿಸಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

ಇಷ್ಟೆಲ್ಲಾ ಆದರೂ ಹುಬ್ಬಳ್ಳಿ ಪೊಲೀಸರು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ದೇಶದ್ರೋಹಿಗಳಿಗೆ ಬೇಲ್ ಕೊಟ್ಟವರ್ಯಾರು? ಅನ್ನೋದರ ಬಗ್ಗೆ ಕಿಂಚಿತ್ತೂ ಮಾಹಿತಿ ಸಿಗದಂತೆ ಮಾಡಿದ್ದಾರೆ. ಈ ಬಗ್ಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರನ್ನೆ ಪ್ರಶ್ನೆ ಕೇಳಿದರೆ ಪ್ರಕರಣ ತನಿಖಾ ಹಂತದಲ್ಲಿದೆ. ನೋ ಕಾಮೆಂಟ್ಸ್ ಎನ್ನುತ್ತಾರೆ. ಇನ್ನೊಂದೆಡೆ, ದೇಶದ್ರೋಹಿಗಳ ಭೇಟಿಗೆ ಬಂದ ಕುಟುಂಬಸ್ಥರನ್ನು ಮಾಧ್ಯಮಗಳ ಕಣ್ತಪ್ಪಿಸಿ ಜೀಪ್‍ನಲ್ಲಿ ಬೇರೆಡೆಗೆ ಕರೆದೊಯ್ಯಲಾಗಿದೆ. ಇವೆಲ್ಲಾ ಬೆಳವಣಿಗೆಗಳ ಮಧ್ಯೆ, ರಾತ್ರೋರಾತ್ರಿ ಮೂವರು ಆರೋಪಿಗಳನ್ನು ಹುಬ್ಬಳ್ಳಿ ಜೈಲಿನಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಹುಬ್ಬಳ್ಳಿ ಪೊಲೀಸರ ಪ್ರತಿಯೊಂದು ನಡೆಯೂ ಅನುಮಾನಗಳನ್ನು ಮೂಡಿಸುತ್ತಿದೆ. ಸಾರ್ವಜನಿಕ ವಲಯದಲ್ಲಿ ಎದ್ದಿರುವ ಒಂದಿಷ್ಟು ಪ್ರಶ್ನೆಗಳಿಗೆ ಪೊಲೀಸರು ಉತ್ತರ ಕೊಡಲೇಬೇಕಿದೆ.

ಪೊಲೀಸರೇ ಉತ್ತರ ಕೊಡಿ:
ಪಬ್ಲಿಕ್ ಪ್ರಶ್ನೆ 1 – ಸ್ಟೇಷನ್ ಬೇಲ್‍ಗೆ ಶ್ಯೂರಿಟಿ ಕೊಟ್ಟಿದ್ದು ಯಾರು? ಯಾಕೆ ಗೌಪ್ಯತೆ?
ಪಬ್ಲಿಕ್ ಪ್ರಶ್ನೆ 2 – ದೇಶದ್ರೋಹಿಗಳ ಕುಟುಂಬಸ್ಥರು ನೀಡಿದ್ರಾ? ಕಾಲೇಜಿನ ಮ್ಯಾನೇಜ್‍ಮೆಂಟ್ ನೀಡ್ತಾ?
ಪಬ್ಲಿಕ್ ಪ್ರಶ್ನೆ 3 – ತನಿಖೆ ದೃಷ್ಟಿಯಿಂದ ಬಹಿರಂಗಪಡಿಸುತ್ತಿಲ್ಲ ಅಂದ್ರೆ ಏನರ್ಥ?
ಪಬ್ಲಿಕ್ ಪ್ರಶ್ನೆ 4 – ಆರೋಪಿಗಳ ಪೋಷಕರು ಯಾರಿಗೂ ಸಿಗದಂತೆ ಗೌಪ್ಯ ಸ್ಥಳಕ್ಕೆ ಕರೆದೊಯ್ದಿದ್ಯಾಕೆ?

ಕೇವಲ ಪೊಲೀಸರ ಮೇಲೆ ಅಷ್ಟೇ ಅಲ್ಲ, ಗೃಹ ಸಚಿವ ಬಸವರಾಜ ಬೊಮ್ಮಯಿ ಅವರ ನಡೆಯೂ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಬೊಮ್ಮಾಯಿ ಅವರು ಕೂಡ ಸಾರ್ವಜನಿಕ ವಲಯದಲ್ಲಿ ಎದ್ದಿರುವ ಒಂದಿಷ್ಟು ಪ್ರಶ್ನೆಗಳಿಗೆ ಪೊಲೀಸರು ಉತ್ತರ ಕೊಡಲೇಬೇಕಿದೆ.

ಗೃಹ ಸಚಿವರೇ ಉತ್ತರ ಕೊಡಿ:
ಪಬ್ಲಿಕ್ ಪ್ರಶ್ನೆ 1 – ಹುಬ್ಬಳ್ಳಿ ಪ್ರಕರಣದಲ್ಲಿ ಮೃದು ಧೋರಣೆ ಏಕೆ ತಳೆದಿದ್ದೀರಿ?
ಪಬ್ಲಿಕ್ ಪ್ರಶ್ನೆ 2 – ಸ್ಟೇಷನ್ ಬೇಲ್‍ಗೆ ಮುನ್ನ ಪೊಲೀಸರು ನಿಮ್ಮ ಗಮನಕ್ಕೆ ತಂದಿರಲಿಲ್ವಾ?
ಪಬ್ಲಿಕ್ ಪ್ರಶ್ನೆ 3 – ಆಯುಕ್ತರ ವರದಿ ಕೇಳಿದ್ದೇನೆ ಎಂದಿದ್ರಿ? ವರದಿ ಬಂತಾ, ಇಲ್ವಾ?
ಪಬ್ಲಿಕ್ ಪ್ರಶ್ನೆ 4 – ಯಾರ ರಕ್ಷಣೆಗೆ ನಿಂತಿದ್ದೀರಿ? ಯಾರ ಹಿತಾಸಕ್ತಿ ಕಾಪಾಡುತ್ತಿದ್ದೀರಿ?
ಪಬ್ಲಿಕ್ ಪ್ರಶ್ನೆ 5 – ಬೀದರ್ ಮತ್ತು ಮೈಸೂರು ಪ್ರಕರಣದಲ್ಲಿ ವೀರಾವೇಶ ತೋರಿಸಿದ್ರಿ, ಈಗ್ಯಾಕೆ ಮೌನ?

ಹುಬ್ಬಳ್ಳಿ ಕೆಎಲ್‍ಇ ಪ್ರಕರಣ ವಿಧಾನಪರಿಷತ್ ಕಲಾಪದಲ್ಲಿಯೂ ಪ್ರತಿಧ್ವನಿಸಿದೆ. ದೇಶದ್ರೋಹಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು ಯಾಕೆ? ಪೊಲೀಸರ ಮೇಲೆ ಒತ್ತಡ ಹೇರಿದವರು ಯಾರು? ಎಂದು ಜೆಡಿಎಸ್‍ನ ಬಸವರಾಜ ಹೊರಟ್ಟಿ ಪ್ರಶ್ನೆ ಮಾಡಿದರು. ಸಮಗ್ರ ತನಿಖೆಗೆ ಆಗ್ರಹಿಸಿದರು. ಇದಕ್ಕೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಅವರು ದನಿಗೂಡಿಸಿ, ಇಲ್ಲಿ ಪಾಕಿಸ್ತಾನ ಪರ ಕೆಲಸ ಆಗಿದೆ. ನಮ್ಮ ದೇಶಕ್ಕೆ ದ್ರೋಹವಾಗಿದೆ. ಇದರ ಹಿಂದಿನ ಹುನ್ನಾರ ಏನು ಎಂದು ಪ್ರಶ್ನಿಸಿದರು. ಕೂಡಲೇ ಪೊಲೀಸ್ ಕಮೀಷನರ್ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ಬಳಿಕ ಸ್ಪಷ್ಟನೆ ಕೊಟ್ಟ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ದೇಶದ್ರೋಹಿಗಳನ್ನು ಸರ್ಕಾರ ಬಿಡುವ ಮಾತಿಲ್ಲ. ಅನಗತ್ಯವಾಗಿ ಬೇರೆ ಪ್ರಕರಣ ಪ್ರಸ್ತಾಪಿಸಿ ಪೊಲೀಸರ ಮೇಲೆ ಬೊಟ್ಟು ಮಾಡುವುದನ್ನು ಬಿಡಿ ಎಂದರು. ಆಗ ವಿಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದರು. ಈ ವೇಳೆ ಮಾತಿನ ಚಕಮಕಿ ನಡೀತು. ಆಡಳಿತ ಪಕ್ಷದ ವಿರೋಧದ ನಡೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ ಅಂತ ಕಾಂಗ್ರೆಸ್ ನಿಲುವಳಿ ಮಂಡಿಸಿತು. ಇತ್ತ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ, ಪೊಲೀಸರನ್ನು ದೇವದಾಸಿಯರಿಗೆ ಹೋಲಿಸಿ ವಿವಾದ ಮೈಮೇಲೆ ಎಳೆದುಕೊಂಡರು.

Share This Article
Leave a Comment

Leave a Reply

Your email address will not be published. Required fields are marked *