ತಂತಿ ಮೇಲೆ ನಡೆದು ಯಡಿಯೂರಪ್ಪ ಬಿದ್ದುಬಿಟ್ಟಾರು: ಸಿದ್ದರಾಮಯ್ಯ ಟಾಂಗ್

Public TV
3 Min Read

– ಸಿಎಂ ರೆಕ್ಕೆ ಪುಕ್ಕವನ್ನ ಪಕ್ಷದವರೇ ಕಟ್ ಮಾಡಿದ್ದಾರೆ
– ಬಿಜೆಪಿ ಸರ್ಕಾರ ಪತನವಾಗಲಿದೆ

ರಾಯಚೂರು: ಸಿಎಂ ಯಡಿಯೂರಪ್ಪ ತಂತಿ ಮೇಲೆ ಯಾಕೆ ನಡೆಯಬೇಕು. ರಾಜಿನಾಮೆ ಕೊಟ್ಟು ಸಿಎಂ ಸ್ಥಾನದಿಂದ ಕೆಳಗೆ ಇಳಿಯಲಿ. ತಂತಿ ಮೇಲೆ ನಡೆದು ಬಿದ್ದುಬಿಟ್ಟಾರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ವೀಕ್ ಚೀಫ್‍ಮಿನಿಸ್ಟರ್, ಯಡಿಯೂರಪ್ಪ ಅವರಿಗೆ ಪಕ್ಷದವರೇ ತುಂಬಾ ತೊಂದರೆ ಕೊಡುತ್ತಿದ್ದಾರೆ. ಅವರು ರೆಕ್ಕೆ ಪುಕ್ಕಗಳು ಕಟ್ ಮಾಡಿದ್ದಾರೆ. ಅಮಿತ್ ಶಾ, ಮೋದಿ ಬಳಿ ಯಡಿಯೂರಪ್ಪಗೆ ಮಾತನಾಡುವ ಶಕ್ತಿಯಿಲ್ಲ. ನೆರೆ ಪ್ರವಾಹ ಪರಿಹಾರ ಕೇಂದ್ರದಲ್ಲಿ ಕೇಳಲು ಧೈರ್ಯವಿಲ್ಲ. ಬಿಜೆಪಿಗೆ 103 ಸೀಟ್‍ಗಳು ಇವೆ. ಹೀಗಾಗಿ ಬಿಜೆಪಿ ಸರ್ಕಾರ ಪತನವಾಗುತ್ತೆ. ನಮ್ಮ ಶಾಸಕರಿಗೆ ಆಸೆ ತೋರಿಸಿ ಅಧಿಕಾರಕ್ಕೆ ಬಂದಿದ್ದಾರೆ. ಮಧ್ಯಂತರ ಚುನಾವಣೆ ಬರುತ್ತೆ ಆದರೆ ಜೆಡಿಎಸ್ ಬಿಜೆಪಿ ಜೊತೆಗೆ ಹೋಗುವುದಿಲ್ಲ ಎಂದು ಮಾತಿನ ಚಾಟಿ ಬೀಸಿದ್ದಾರೆ. ಇದನ್ನೂ ಓದಿ:ಬಿಜೆಪಿಯಲ್ಲಿ ಪ್ರಾಬಲ್ಯ ಸಾಧಿಸಿದ್ರಾ ನಳಿನ್ ಕುಮಾರ್ ಕಟೀಲ್?

ಈ ಸರ್ಕಾರಕ್ಕೆ ಕಣ್ಣು, ಕಿವಿ, ಮೂಗು ಏನು ಇಲ್ಲ. 2.5 ಲಕ್ಷ ಮನೆಗಳು ನೆರೆಯಿಂದ ಬಿದ್ದಿವೆ. ಬಿಎಸ್‍ವೈ ಪರಿಹಾರ ಇವತ್ತು ಬರುತ್ತೆ, ನಾಳೆ ಬರುತ್ತೆ ಎಂದು ಹೇಳುತ್ತಿದ್ದಾರೆ. ಇಷ್ಟು ನಷ್ಟವಾಗಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರುಪಯುಕ್ತವಾಗಿವೆ. ನನ್ನ ಪ್ರಕಾರ ಅಧಿವೇಶನ ಬೆಳಗಾವಿಯಲ್ಲಿ ನಡೆಸಬೇಕಾಗಿತ್ತು. ಆದರೆ ಪ್ರವಾಹದಿಂದ ಬೆಳಗಾವಿ ಹೆಚ್ಚು ನಷ್ಟವಾಗಿದೆ. ಬಾಗಲಕೋಟೆ, ವಿಜಯಪುರ, ರಾಯಚೂರಿನಲ್ಲೂ ಬಹಳಷ್ಟು ನಷ್ಟವಾಗಿದೆ ಎಂದು ಕಿಡಿಕಾರಿದರು. ಬಳಿಕ ಸರ್ಕಾರ ಬಾಡಿಗೆ ಮನೆಗಳಲ್ಲಿ ಉಳಿದಿರುವ ಸಂತ್ರಸ್ತರಿಗೆ 5 ಸಾವಿರ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಳ್ಳಿಯಲ್ಲಿ ಬಾಡಿಗೆ ಮನೆಗಳು ಸಿಗುತ್ತವೆಯಾ ಎಂದು ಪ್ರಶ್ನಿಸಿ, ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ರಾಜ್ಯದ ಎಲ್ಲೆಡೆ ಬಿಜೆಪಿ ಎಂಎಲ್‍ಎ ಇದ್ದಾರೆ ಅಂದುಕೊಂಡಿದ್ದಾರೆ. ಆದರೆ ಉಪ ಚುನಾವಣೆಯಲ್ಲಿ ಆಡಳಿತ ಪಕ್ಷ ಗೆಲ್ಲಲ್ಲ. ಹೀಗಾಗಿ ಮಧ್ಯಂತರ ಚುನಾವಣೆ ಬರುತ್ತದೆ ಎಂದರು. ಹಾಗೆಯೇ ಕಾಂಗ್ರೆಸ್ ನಾಯಕರಾದ ಚಿದಂಬರಂ, ಡಿಕೆ ಶಿವಕುಮಾರ್ ಮೇಲೆ ಕಾನೂನು ಕ್ರಮ ತೆಗೆಕೊಳ್ಳಲಿ. ಆದರೆ ಜಾಮೀನನ್ನೇ ಕೊಡಲ್ಲ ಎಂದರೇನು? ಇದು ದ್ವೇಷ, ಅಮಾನವೀಯ ರಾಜಕೀಯವಾಗಿದೆ. ಇಂತಹ ರಾಜಕೀಯ ತಿರುಗುಬಾಣವಾಗುತ್ತದೆ. ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್‍ಗೆ ಹೋಗುವುದು ಒಳ್ಳೆಯದು. ಯಾಕೆಂದರೆ ಇವಿಎಂ ದುರುಪಯೋಗ ಬಗ್ಗೆ ನನಗೂ ಅನುಮಾನಗಳಿವೆ. ಬಹಳ ಜನ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ, ಆದರೂ ಚುನಾವಣಾ ಆಯೋಗ ಯಾಕೆ ಇವಿಎಂ ಬಿಡುತ್ತಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ:ಬಿಜೆಪಿಗೆ ಬೇಡವಾದ್ರಾ ಬಿಎಸ್‍ವೈ?

ಚುನಾವಣಾ ಆಯೋಗ, ಸಿಬಿಐ ಸೇರಿ ಎಲ್ಲಾ ಸಂಸ್ಥೆ ದುರ್ಬಳಕೆಯಾಗುತ್ತಿವೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಅನರ್ಹ ಶಾಸಕರಿಗೆ ಟೈಮ್ ಸಿಗಲಿ ಎಂದು ಚುನಾವಣೆ ಘೋಷಣೆಯಾಗುತ್ತಿದೆ. ಅನರ್ಹ ಶಾಸಕರ ಕ್ಷೇತ್ರಕ್ಕೆ ಹಣ ಕೊಟ್ಟಿದ್ದಾರೆ. ಅನರ್ಹ ಶಾಸಕರು ಅವರ ಕ್ಷೇತ್ರದಲ್ಲಿ ತಯಾರಿಯಾಗಲು ಅನುವು ಮಾಡಿಕೊಡಲಾಗುತ್ತಿದೆ. ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಯಲ್ಲಿದೆ ಎಂದು ಕಿಡಿಕಾರಿದರು. ಬೆಳಗಾವಿ ಜಿಲ್ಲೆಯನ್ನೇ ವಿಭಜನೆ ಮಾಡಿಲ್ಲ, ಬಳ್ಳಾರಿಯನ್ನ ವಿಭಜನೆ ಬೇಕಿಲ್ಲ. ಆದರೆ ಅನಹಃ ಶಾಸಕ ಆನಂದ್ ಸಿಂಗ್ ತಮ್ಮ ರಾಜಕೀಯಕ್ಕಾಗಿ ಹೀಗೆ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.

ದಸರಾಕ್ಕೆ ನನಗೆ ಆಹ್ವಾನ ಇಲ್ಲ. ಕರೆಯದೇ ಬರುವವನಿಗೆ ಏನಂತಾರೆ? ಅದಕ್ಕೆ ನಾನು ಹೋಗಿಲ್ಲ. ನಾವು ಹಿಂದೆ ದಸರಾ ಮಾಡಿದ್ದೇವೆ. ಈಗ ಅವರು ಮಾಡುತ್ತಿದ್ದಾರೆ ಮಾಡಲಿ ಎಂದು ದಸರಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ಸ್ಪಷ್ಟನೆ ನೀಡಿದರು. ಜೊತೆಗೆ ಸೋಮಶೇಖರ್ ನನ್ನ ಅನರ್ಹ ಮಾಡಿಸಿದ್ದೆ ನಾನು ಎಂದು ಅವನು ಹೇಳುತ್ತಾನೆ. ಹೊಟ್ಟೆ ಉರಿಗೆ ಏನೇನೋ ಮಾತನಾಡುತ್ತಾನೆ. ಅದಕ್ಕೆಲ್ಲಾ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಅನರ್ಹ ಶಾಸಕ ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿದರು. ಇದನ್ನೂ ಓದಿ:ಏಕಾಂಗಿಯಾದ ಆನಂದ್ ಸಿಂಗ್-ತಿರುಗಿಬಿದ್ದ ಬಿದ್ದ ಬಿಜೆಪಿ ಶಾಸಕರು!

ಸಿಎಂ ಹೇಳಿದ್ದೇನು?
ನಾನು ಒಂದು ರೀತಿ ತಂತಿ ಮೇಲೆ ನಡೆಯುತ್ತಿದ್ದೇನೆ, ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕಾದಲ್ಲಿ ಹತ್ತಾರು ಸಲ ವಿಚಾರ ಮಾಡಬೇಕಾಗಿದೆ. ನಿರ್ಧಾರ ತೆಗೆದುಕೊಳ್ಳುವಾಗ ಅದು ಬೇರೆ ಸಮಾಜದ ಮೇಲೆ ಹೇಗೆ ಪರಿಣಾಮ ಎನಾಗುತ್ತದೆ ಎಂಬುದನ್ನೂ ಚಿಂತನೆ ಮಾಡಬೇಕಾಗಿದೆ ಎಂದು ದಾವಣಗೆರೆಯಲ್ಲಿ ಭಾನುವಾರ ಯಡಿಯೂರಪ್ಪ ಭಾವನಾತ್ಮಕವಾಗಿ ಹೇಳಿಕೆ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *