ಶಾಸಕತ್ವವೇ ಬೇಡ ಎಂದವರಿಗೆ ವಿಪ್ ಅನ್ವಯಿಸುವುದಿಲ್ಲ: ಬಿ.ವಿ.ಆಚಾರ್ಯ

Public TV
1 Min Read

ಬೆಂಗಳೂರು: ಬಂಡಾಯ ಶಾಸಕರ ವಿಪ್ ವಿಚಾರದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯ ಹೊಂದಿರಬಹುದು. ಆದರೆ ನನ್ನ ಪ್ರಕಾರ ನಿಮ್ಮ ಶಾಸಕತ್ವವೇ ಬೇಡ ಎಂದವರಿಗೆ ವಿಪ್ ಅನ್ವಯಿಸುವುದಿಲ್ಲ ಎಂದು ಹಿರಿಯ ವಕೀಲ ಬಿ.ವಿ.ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಲಾ ಈಸ್ ನಾಟ್ ಎ ಮ್ಯಾಥ್‍ಮೆಟಿಕ್ಸ್. 2+2:4 ಎಂದು ಕೆಲವರು ಹೇಳಬಹುದು. ಅದೇ ರೀತಿ ಬಂಡಾಯ ಶಾಸಕರ ವಿಪ್ ವಿಚಾರದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯ ಹೊಂದಿರಬಹುದು. ಆದರೆ ನನ್ನ ಪ್ರಕಾರ ನಿಮ್ಮ ಶಾಸಕತ್ವವೇ ಬೇಡ ಎಂದವರಿಗೆ ವಿಪ್ ಅನ್ವಯಿಸುವುದಿಲ್ಲ. ಹೀಗಾಗಿ ಉಚ್ಛಾಟನೆ ಮಾಡಲು ಸಾಧ್ಯವಿಲ್ಲ. ವಿಶ್ವಾಸಮತ ಯಾಚನೆಗೆ ಸ್ಪೀಕರ್ ಸರ್ಕಾರದ ಜೊತೆ ಸೇರಿ ಎಷ್ಟು ಸಾಧ್ಯವೋ ಅಷ್ಟು ಸಮಯ ಮುಂದೂಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ರಾಜ್ಯಪಾಲರು ಮಧ್ಯ ಪ್ರವೇಶಿಸಿ ಸಿಎಂಗೆ ವಿಶ್ವಾಸ ನಿರ್ಣಯ ಮಂಡಿಸಿ ಎಂದು ಹೇಳಬೇಕಿತ್ತು. ಗುರುವಾರ ವಿಶ್ವಾಸ ಮತಗಳು ದೊರೆತರೆ ಸರ್ಕಾರ ಮುಂದುವರಿಯುತ್ತದೆ. ಇಲ್ಲದಿದ್ದರೆ ಬಿದ್ದು ಹೋಗುತ್ತದೆ. ಬಂಡಾಯ ಶಾಸಕರ ರಾಜೀನಾಮೆ ಅಂಗೀಕಾರ ವಿಚಾರದಲ್ಲಿ ಸ್ಪೀಕರ್ ವಿಳಂಬ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ಈ ಹಿಂದೆ ಯಡಿಯೂರಪ್ಪನವರು ವಿಶ್ವಾಸ ನಿರ್ಣಯ ಮಂಡಿಸಲು ರಾಜ್ಯಪಾಲರು 15 ದಿನ ಸಮಯ ನೀಡಿದ್ದರು ಎಂದು ವಿವರಿಸಿದರು.

ಸುಪ್ರೀಂ ಕೋರ್ಟ್ 48 ಗಂಟೆಯೊಳಗೆ ವಿಶ್ವಾಸಮತ ಸಾಬೀತುಪಡಿಸಿ ಎಂದು ಹೇಳಿದೆ. ಅಲ್ಲದೆ ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ವಿಶ್ವಾಸ ಮತ ಸಾಬೀತುಪಡಿಸಲು ಸಾಧ್ಯವಾಗದೇ ರಾಜೀನಾಮೆ ನೀಡಲಿಲ್ಲವೇ? ಗುರವಾರವೂ ಅಷ್ಟೇ ಸದನದಲ್ಲಿ ವಿಶ್ವಾಸ ಮತ ಸಾಬೀತು ಮಾಡಿದರೆ ಸರ್ಕಾರ ಉಳಿಯುತ್ತದೆ. ಇಲ್ಲವೇ ಬಿದ್ದು ಹೋಗಲಿದೆ. ನಾಳಿನ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಮೊದಲೇ ಮಾತನಾಡುವುದು ತಪ್ಪು ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಅಡ್ಡಿ ಇಲ್ಲ: ನಾಳಿನ ಬಂಡಾಯ ಶಾಸಕರ ಉಚ್ಛಾಟನೆ ಅಥವಾ ರಾಜೀನಾಮೆಯ ಕುರಿತು ಸುಪ್ರೀಂ ಕೋರ್ಟ್ ತೀರ್ಪು, ವಿಶ್ವಾಸ ಮತಯಾಚನೆಯ ಮೇಲೆ ಪರಿಣಾಮ ಬೀರುವುದಿಲ್ಲ. ಸುಪ್ರೀಂ ಕೋರ್ಟಿನಲ್ಲಿಯೂ ವಿಶ್ವಾಸಮತ ಯಾಚನೆಯ ವಿಷಯ ಚರ್ಚೆಗೆ ಬರುವುದಿಲ್ಲ ಬಿವಿ ಆಚಾರ್ಯ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *