ವಿಪಕ್ಷಗಳ ಗದ್ದಲದಿಂದ ಮೊದಲ ಭಾಷಣದಲ್ಲೇ ಶೂನ್ಯಕ್ಕೆ ಸಚಿನ್ ಔಟ್!

Public TV
1 Min Read

ನವದೆಹಲಿ: ವಿರೋಧ ಪಕ್ಷಗಳ ತೀವ್ರ ಗದ್ದಲ, ಕೋಲಾಹಲಗಳ ನಡುವೆ ರಾಜ್ಯಸಭಾ ಸದಸ್ಯ, ಭಾರತ ರತ್ನ ಸಚಿನ್ ತೆಂಡೂಲ್ಕರ್ ತಮ್ಮ ಮೊದಲ ಭಾಷಣ ಆರಂಭಿಸಲು ಅವಕಾಶ ಸಿಗದ ಘಟನೆಗೆ ರಾಜ್ಯ ಸಭೆ ಸಾಕ್ಷಿಯಾಯಿತು.

ಕಳೆದ 5 ವರ್ಷಗಳಲ್ಲಿ ಮೊದಲ ಬಾರಿಗೆ ಸಚಿನ್ ತೆಂಡೂಲ್ಕರ್ ಸದನದಲ್ಲಿ ಮಾತನಾಡಲು ಮುಂದಾಗಿದ್ದರು. ಸಚಿನ್ ತಮ್ಮ ಮೊದಲ ಭಾಷಣದಲ್ಲಿ ಭಾರತದಲ್ಲಿ ಕ್ರೀಡೆಗಳು ಹಾಗೂ ಆಟದ ಹಕ್ಕಿನ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದರು. ಅಲ್ಲದೆ ತಮ್ಮ ಅಂತರಾಷ್ಟ್ರೀಯ ಪದಕ ವಿಜೇತಕರಿಗೆ ಕೇಂದ್ರ ಸರ್ಕಾರವು ನೀಡುವ ಆರೋಗ್ಯ ಯೋಜನೆಗಳು, ಶಾಲಾ ಪಠ್ಯಕ್ರಮದಲ್ಲಿ ಕ್ರೀಡೆಯ ಅಳವಡಿಕೆ ಹಾಗೂ ಹಲವು ದೀರ್ಘಾವಧಿ ಸಮಸ್ಯೆಗಳ ಬಗ್ಗೆ ತಮ್ಮ ಪ್ರಸ್ತಾಪಿಸುತ್ತಿದ್ದರು.

ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿರುದ್ಧ ಗುಜರಾತ್ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿಪಕ್ಷ ನಾಯಕರು ರಾಜ್ಯಸಭೆಯಲ್ಲಿ ಗದ್ದಲ ಎಬ್ಬಿಸಿದರು. ಮೋದಿ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕೆಂದು ಘೋಷಣೆ ಕೂಗುವ ಮೂಲಕ ಸದನಕ್ಕೆ ಅಡ್ಡಿಪಡಿಸಿದರು.

ಸಚಿನ್ ತೆಂಡೂಲ್ಕರ್ ಸದನದಲ್ಲಿ ಎದ್ದು ನಿಂತು ಹತ್ತು ನಿಮಿಷಗಳ ಕಾಲ ಎದ್ದು ನಿಂತು ಮಾತನಾಡುವ ಅವಕಾಶಕ್ಕಾಗಿ ಕಾದು ನಿಂತಿದ್ದರು. ಆದರೆ ಸದನದಲ್ಲಿ ಉಂಟಾದ ವಿರೋಧ ಪಕ್ಷಗಳ ತೀವ್ರ ಕೋಲಾಹಲ, ಗದ್ದಲಗಳಿಂದಾಗಿ ಸಭಾಪತಿಗಳಾದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸದನವನ್ನು ಮುಂದೂಡಿದರು.

ಈ ವೇಳೆ ಉಪರಾಷ್ಟ್ರಪತಿಗಳು ಸದನದ ಸದಸ್ಯರ ಜೊತೆ ಗದ್ದಲ ನಿಲ್ಲಿಸಿ ಎಂದು ಕೇಳಿಕೊಂಡರು. ದೇಶವೇ ನಮ್ಮನ್ನು ನೋಡುತ್ತಿದೆ, ಪ್ರಮುಖ ಕ್ರೀಡಾ ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕಿದೆ. ಆದರೆ ಕನಿಷ್ಠ ಪಕ್ಷ ಕ್ರೀಡಾ ಸ್ಫೂರ್ತಿ ಮೆರೆದು ಗೌರವ ನೀಡಲು ವಿನಂತಿಸಿಕೊಂಡರು. ಅದರೂ ವಿಪಕ್ಷಗಳು ತಮ್ಮ ಗದ್ದಲ ಮುಂದುವರೆಸಿದ್ದರು.

ರಾಜ್ಯಸಭಾ ವಿರೋಧಿ ಪಕ್ಷಗಳ ನಡೆ ಎಲ್ಲರ ಟೀಕೆಗೆ ಗುರಿಯಾಗಿದ್ದು, ಹಲವು ಗಣ್ಯರು ಈ ಕುರಿತು ತಮ್ಮ ಬೇಸರವನ್ನು ವ್ಯಕ್ತಪಡಿಸಿ ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *