2013ರಲ್ಲಿ ಠೇವಣಿ ಕಳೆದುಕೊಂಡಿದ್ದ ಬಿಜೆಪಿ ಈ ಬಾರಿ ತ್ರಿಪುರಾ ಗೆದ್ದಿದ್ದು ಹೇಗೆ?

Public TV
5 Min Read

ನವದೆಹಲಿ: ಗುಜರಾತ್ ಬಳಿಕ ಸಾಕಷ್ಟು ಕುತೂಹಲದಿಂದ ಎದುರು ನೋಡುತ್ತಿದ್ದ ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ತ್ರಿಪುರ, ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಅತ್ಯುತ್ತಮ ಸಾಧನೆ ಮಾಡಿ ಸರ್ಕಾರ ರಚನೆಯತ್ತ ದಾಪುಗಾಲು ಹಾಕಲು ಸಿದ್ದವಾಗಿದೆ. ಇದರ ಜೊತೆಗೆ ಮೇಘಾಲಯದಲ್ಲಿ ಅತಂತ್ರ ಪರಿಸ್ಥಿತಿ ಸೃಷ್ಟಿ ಯಾಗಿದ್ದು ಕೇಂದ್ರದಲ್ಲಿರುವ ಬಿಜೆಪಿ ತನ್ನ ವಿಜಯದ ಬುಟ್ಟಿಗೆ ಹಾಕಿಕೊಳ್ಳಲು ಪ್ಲಾನ್ ಸಿದ್ಧಪಡಿಸಿ ಈಗಾಗಲೇ ಅಖಾಡಕ್ಕೆ ಇಳಿದಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಸಾರಥ್ಯವಹಿಸಿದ ಮೇಲೆ ಬಿಜೆಪಿ ಇತ್ತಿಚಿನ ಗುಜರಾತ್ ಸೇರಿ ಬರೋಬ್ಬರಿ 19 ರಾಜ್ಯಗಳಲ್ಲಿ ಕಮಲ ಅರಳಿಸಿ ದಾಖಲೆ ಸೃಷ್ಟಿಸಿತ್ತು. ಈ ಹಿಂದೆ ಇಂದಿರಾಗಾಂಧಿ 18 ರಾಜ್ಯಗಳನ್ನು ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್ ಸೃಷ್ಟಿಸಿದ್ದ ದಾಖಲೆ ಯನ್ನು ಒಡೆದು ರಾಜಕೀಯ ಇತಿಹಾಸ ಮತ್ತೊಂದು ಮೈಲುಗಲ್ಲುನ್ನು ಈ ಚಾಣಕ್ಯ ಜೋಡಿ ನಿರ್ಮಿಸಿತ್ತು. 19 ರಾಜ್ಯಗಳಲ್ಲಿ ಗೆದ್ದಿದ್ದ ಬಿಜೆಪಿಯ ಈ ಚಾಣಕ್ಯ ಜೋಡಿಗೆ ಇಲ್ಲಿ ನಿಜವಾದ ಅಸಲಿ ಸವಾಲು ಎದುರಾಗಿತ್ತು.

ಈಶಾನ್ಯ ರಾಜ್ಯಗಳ ಪೈಕಿ ಈ ಮೂರು ರಾಜ್ಯಗಳಲ್ಲಿ ಬಿಜೆಪಿಯ ಅಸ್ತಿತ್ವವೇ ಇರಲಿಲ್ಲ. ಕಾರಣ ಕಳೆದ 25 ವರ್ಷಗಳಿಂದ ತ್ರಿಪುರ ದಲ್ಲಿ ಆಡಳಿತ ನಡೆಸುತ್ತಿರುವ ಎಡಪಕ್ಷದ ನೇತಾರ ಮಾಣಿಕ್ ಸರ್ಕಾರ, ನಾಗಲ್ಯಾಂಡ್ ನಾಗಾ ಪಿಪಲ್ಸ್ ಫ್ರಂಟ್ ಹಾಗೂ ಮೇಘಾಲಯ ದಲ್ಲಿ ಕಾಂಗ್ರೆಸ್ ದಶಕಗಳಿಂದ ಆಡಳಿತ ನಡೆಸುತ್ತಿತ್ತು. ಖಾತೆಗೂ ತೆಗೆಯದೆ ಶೂನ್ಯ ಸಂಪಾದನೆ ಜೊತೆಗೆ ಬಿಜೆಪಿ ಠೇವಣಿ ಕಳೆದುಕೊಂಡ ಉದಾಹರಣೆಯೂ ಇಲ್ಲಿ ಸಾಕಷ್ಟಿದೆ.

ಈ ಮೇಲಿನವು ಬಿಜೆಪಿ ಮುಂದಿದ್ದ ಸವಾಲುಗಳಾದರೆ, ಕಾಂಗ್ರೆಸ್ಸಿಗೆ ಇಲ್ಲಿ ಸ್ಥಾನ ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇತ್ತು. `ಕಾಂಗ್ರೆಸ್ ಮುಕ್ತ ಭಾರತ’ ಮಾಡಲು ಹೊರಟಿರುವ ಬಿಜೆಪಿಯ ನಾಯಕರಿಗೆ ಸೂಕ್ತ ಠಕ್ಕರ್ ನೀಡುವ ಜೊತೆಗೆ ಕೈಯಲ್ಲಿರುವ ನಾಲ್ಕು ರಾಜ್ಯಗಳ ಪೈಕಿ ಮೇಘಾಲಯ ಉಳಿಸಿಕೊಳ್ಳಲೇ ಬೇಕಾದ ಪರಿಸ್ಥಿತಿ ಕೈ ನಾಯಕರಿಗೆ ಇತ್ತು. ಈ ಮಧ್ಯೆ ರಾಜಸ್ಥಾನ ಹಾಗೂ ಮಧ್ಯಪ್ರದೇಶ ಉಪಚುನಾವಣೆ ಗೆಲುವಿನ ಬಳಿಕ ಕಾಂಗ್ರೆಸ್ ಒಂದಿಷ್ಟು ಉತ್ಸಾಹದಲ್ಲಿ ರಣಕಣ ಪ್ರವೇಶಿಸಿ ಹೋರಾಟ ನಡೆಸಿತ್ತು.

ಈ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ತ್ರಿಪುರದ ಐಪಿಎಫ್‍ಟಿ, ನಾಗಾಲ್ಯಾಂಡ್ ನ ಎನ್‍ಪಿಎಫ್, ಮೇಘಾಲಯದ ಎನ್‍ಪಿಪಿಯಂತಹ ಬಲಿಷ್ಠ ಪ್ರಾದೇಶಿಕ ಹೋರಾಟಕ್ಕೆ ಇಳಿದಿದ್ದು ಗೆಲುವಿನ ಹಾದಿ ಯಾರಿಗೂ ಸುಗಮವಾಗಿರಲಿಲ್ಲ. ಈ ತೀವ್ರ ಪೈಪೋಟಿಯಲ್ಲಿ ಅಂತಿಮವಾಗಿ ಎರಡು ರಾಜ್ಯಗಳಲ್ಲಿ ಮೋದಿ, ಶಾ ಜೋಡಿ ತಮ್ಮ ದಂಡಯಾತ್ರೆಯ ಮೂಲಕ 19 ರಿಂದ 21ಕ್ಕೆ ತನ್ನ ರಾಜ್ಯವನ್ನು ವಿಸ್ತರಿಸಿಕೊಂಡಿದ್ದಾರೆ.

ಬಾಕಿ ಉಳಿದಿರುವ ಮೇಘಾಲಯ ದಲ್ಲಿ ಸರ್ಕಾರ ರಚನೆಗೆ ಪ್ಲಾನ್ ರೂಪಿಸುತ್ತಿದ್ದು ಬಹುತೇಕ ಸರ್ಕಾರ ರಚಿಸುವ ಸಾಧ್ಯತೆ ಇದೆ. ಈ ಮೂರು ರಾಜ್ಯಗಳ ಪೈಕಿ ಅತ್ಯಂತ ಕಠಿಣ ಎಂದೇ ಭಾವಿಸಿ ಠೇವಣಿ ಕಳೆದುಕೊಂಡಿದ್ದ ಬಿಜೆಪಿ ತ್ರಿಪುರದಲ್ಲಿ ಖಾತೆ ತೆರೆಯಲು ಸಾಧ್ಯವಾಗಿದ್ದು ಹೇಗೆ ಎನ್ನುವುದು ರಾಜಕೀಯ ಆಸಕ್ತಿಗಳು ಕೇಳುತ್ತಿರುವ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

1. ಅಭಿವೃದ್ಧಿ ಮಂತ್ರ
ತನ್ನ ಬುಟ್ಟಿಯಲ್ಲಿರುವ ಕೇಂದ್ರದ ಅಭಿವೃದ್ಧಿ ಮಂತ್ರವನ್ನು ಬಿಜೆಪಿ ಅತ್ಯಂತ ಯಶಸ್ವಿಯಾಗಿ ಇಲ್ಲಿ ಬಳಸಿಕೊಂಡಿದೆ. ಈ ಹಿಂದೆ ಯುಪಿಎ ಸರ್ಕಾರದಲ್ಲಿ ಘೋಸಿಸಲ್ಪಟ್ಟ ಯೋಜನೆಗಳು ಬಿಜೆಪಿ ಅವಧಿಯಲ್ಲಿ ಪೂರ್ಣಗೊಂಡಿದ್ದು ಅವುಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಬಿಜೆಪಿ ಯಶಸ್ವಿಯಾಗಿ ಮಾಡಿತ್ತು.

ದಶಕಗಳ ಬೇಡಿಕೆಯಾಗಿದ್ದ ತ್ರಿಪುರಾ ನವದೆಹಲಿ ರೈಲು ಸಂಪರ್ಕ 2016 ಮೇ ನಲ್ಲಿ ಪೂರ್ಣಗೊಂಡಿತ್ತು. ಹೀಗೇ ಕೇಂದ್ರ ಸರ್ಕಾರದ ಸಾಧನಗಳ ಜೊತೆ, ಚಲೋ ಪಾಲ್ಟಾಯ್ ಎಂಬ ಘೋಷಣೆಯೊಂದಿಗೆ ಇಪ್ಪತೈದು ವರ್ಷಗಳಿಂದ ಅಧಿಕಾರ ನಡೆಸುತ್ತಿದ್ದ ಎಡಪಂಥಿಯ ಸರ್ಕಾರದ ವಿರುದ್ಧ ಚುನಾವಣಾ ಪ್ರಚಾರದ ಉದ್ದಕ್ಕೂ ಆಂದೋಲನ ನಡೆಸಿತು. ತನ್ನ ಪ್ರಣಾಳಿಕೆಯಲ್ಲಿ ಭರಪೂರ ಕೊಡುಗೆಗಳನ್ನು ಬಿಜೆಪಿ ಘೋಷಿಸಿತು. ವಿಶೇಷ ಏನೆಂದರೆ ಕೇಂದ್ರದ 52 ಮಂತ್ರಿಗಳನ್ನು ಬಿಜೆಪಿ ಪ್ರಚಾರಕ್ಕೆ ಬಳಸಿಕೊಂಡಿತ್ತು.

ತ್ರಿಪುರಾದಲ್ಲಿ ಪುಟ್ಟ ರಾಜ್ಯದಲ್ಲಿ ಏಳು ಲಕ್ಷಕ್ಕೂ ಹೆಚ್ಚು ಮಂದಿಗೆ ನಿರುದ್ಯೋಗ ಸಮಸ್ಯೆಯಿತ್ತು. ಈ ಸಮಸ್ಯೆ ಪರಿಹರಿಸಲು ವಿಷನ್ ಡಾಕ್ಯುಮೆಂಟ್ – 2018 ಹೆಸರಿನಲ್ಲಿ ಯುವಕರಿಗೆ ಪ್ರತಿ ಮನೆಯಲ್ಲೂ ಉದ್ಯೋಗ ಭರವಸೆ ನೀಡಿತ್ತು. ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಕಲ್ಪಿಸುವ, ಮಹಿಳೆಯರಿಗೆ ಪದವಿ ತನಕ ಉಚಿತ ಶಿಕ್ಷಣ, ಏಳನೇ ವೇತನ ಆಯೋಗ ಜಾರಿಗೋಳಿಸುವುದು, ಪ್ರವಾಸೋದ್ಯಮ ಅಭಿವೃದ್ಧಿ, ಸಾರಿಗೆ ಉತ್ತೇಜನ, ಡಿಜಿಟಲ್ ತ್ರಿಪುರ ಮಾಡುವ ಕನಸನ್ನು ಜನರಲ್ಲಿ ಬಿತ್ತಿತ್ತು.

2. ಆರ್ ಎಸ್‍ಎಸ್
ಪ್ರತಿ ಚುನಾವಣೆಯಲ್ಲೂ ಬಿಜೆಪಿ ಬೆನ್ನೆಲುಬಾಗಿ ನಿಲ್ಲುವ ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆ ಇಲ್ಲೂ ಮಹತ್ವದ ಪಾತ್ರ ವಹಿಸಿದೆ. ತ್ರಿಪುರಾದಲ್ಲಿ ದನದ ಮಾಂಸ ತಿನ್ನುವವವರ ಸಂಖ್ಯೆ ಹೆಚ್ಚಿದೆ. ಆಹಾರ ಪದ್ದತಿ ವಿಚಾರದಲ್ಲಿ ಬಿಜೆಪಿ ತ್ರಿಪುರ ಜನರಿಗೆ ವಿರೋಧವಾಗಿದ್ದರೂ ಅದನ್ನು ಲೆಕ್ಕಿಸದೇ ಜನ ಬಿಜೆಪಿಗೆ ಮತ ಒತ್ತಲು ಕಾರಣವಾಗಿದ್ದು ತಳಮಟ್ಟದಲ್ಲಿ ಆರ್ ಎಸ್‍ಎಸ್ ಮಾಡಿದ ಸಂಘಟನಾ ಕಾರ್ಯ ಎಂದು ಈಗ ವಿಶ್ಲೇಷಿಸಲಾಗುತ್ತಿದೆ.

ಆರ್ ಎಸ್‍ಎಸ್ ತ್ರಿಪುರಾದಲ್ಲಿ ಇದ್ದರೂ ಅದರ ಪ್ರಭಾವ ಅಷ್ಟೇನು ಇರಲಿಲ್ಲ. ಆದರೆ ಕಾಂಗ್ರೆಸ್ ಮುಕ್ತ ಭಾರತದ ಕನಸು ಕಂಡಿದ್ದ ಸಂಘಪರಿವಾರದ ನಾಯಕರು ಕಳೆದ ಎರಡು ವರ್ಷಗಳಿಂದ ಆರ್ ಎಸ್‍ಎಸ್ ಸಂಘಟನೆಯನ್ನು ಬಲಪಡಿಸುತ್ತಿದ್ದರು. ಈ ಚುನಾವಣೆಯ ಬಳಿಕ ಬೂತ್ ಬೇಸ್, ಕೇಡರ್ ಬೇಸ್ ನಲ್ಲಿ ಸಂಘಟನೆ ರೂಪಿಸಿ ಯುವ ಜನರನ್ನು ಸೆಳೆಯುವಲ್ಲಿ ಆರ್‍ಎಸ್‍ಎಸ್ ಯಶಸ್ವಿಯಾಗಿತ್ತು.

2014ರ ಲೋಕಸಭೆಯ ಎರಡೂ ಸ್ಥಾನಗಳನ್ನು ಸಿಪಿಎಂ ಗೆದ್ದಿತ್ತು. ಸಿಪಿಎಂ 64.8% ಮತ ಪಡೆದಿದ್ದರೆ, ಕಾಂಗ್ರೆಸ್ 15.4% ಮತಗಳನ್ನು ಪಡೆದಿತ್ತು. ಬಿಜೆಪಿ 5.8% ಮತಗಳನ್ನು ಪಡೆದಿತ್ತು. 2013 ರ ಚುನಾವಣೆಯಲ್ಲಿ ಬಿಜೆಪಿ 50 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಎಲ್ಲ ಕ್ಷೇತ್ರಗಳಲ್ಲಿ ಸೋತಿದ್ದು ಮಾತ್ರವಲ್ಲದೇ 49ರಲ್ಲಿ ಠೇವಣಿಯನ್ನು ಕಳೆದುಕೊಂಡಿತ್ತು.

2014 ಲೋಕಸಭೆಯಲ್ಲಿ ಪ್ರಚಾರ ಜನಬ್ದಾರಿ ನಿರ್ವಹಿಸಿದ್ದ ಆರ್  ಎಸ್‍ಎಸ್‍ನ ಬಿಪ್ಲಾಬ್ ಕುಮಾರ್ ದೇಬ್ ಅವರನ್ನ ತ್ರಿಪುರಾ ಉಸ್ತುವಾರಿಗಾಗಿ ಕಳುಹಿಸಲಾಗಿತ್ತು. ದೇಬ್ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ನಿಂದ ಜಿಲ್ಲಾ ಮಟ್ಟದ ವರೆಗೂ ಆರ್‍ಎಸ್‍ಎಸ್ ಸಂಘಟನೆ ಮಾಡಿತ್ತು. ಯುವ ಮೋರ್ಚಾ, ಮಹಿಳಾ ಮೋರ್ಚಾ, ಎಸ್ಸಿ, ಎಸ್ಟಿ, ಓಬಿಸಿ ರೈತ ಮೊರ್ಚಾಗಳನ್ನು ಬಲಪಡಿಸುವ ಮೂಲಕ ಚಿಕ್ಕ ರಾಜ್ಯದಲ್ಲಿ ದೊಡ್ಡಮಟ್ಟದ ಪ್ರಚಾರ ಹಾಗೂ ಸಂಘಟನೆಗೆ ಸದ್ದಿಲ್ಲದೇ ಎರಡು ವರ್ಷ ಕಾರ್ಯ ಮಾಡುತಿತ್ತು. ಇದಿಷ್ಟೇ ಅಲ್ಲದೇ ಪ್ರತಿ 60 ಮತದಾರರಿಗೆ ಒಬ್ಬರಂತೆ ಉಸ್ತುವಾರಿಗಳ ನೇಮಕ ಮಾಡಲಾಗಿತ್ತು. ಪ್ರತಿ ಐದು ಬೂತ್‍ಗಳಿಗೆ ಒಬ್ಬ ವಿಸ್ತಾರಕರನ್ನು ನೇಮಿಸಲಾಗಿತ್ತು. ಪಕ್ಕದ ಅಸ್ಸಾಂ ನಿಂದ 400 ಜನರು ವಿಸ್ತಾರಕನ್ನು ಕರೆತಂದು ಸಾಮಾಜಿಕ ಮಾಧ್ಯಮ ಹಾಗೂ ರೈಲು, ಬಸ್ ಗಳಲ್ಲಿ ಪ್ರಧಾನಿ ಮೋದಿ ಭಾವಚಿತ್ರವಿರುವ ಟೀ ಶರ್ಟ್ ಧರಿಸಿ ಕರ ಪತ್ರ ಹಂಚಿದ್ದರು.

3. ಐಪಿಎಫ್‍ಟಿ ಯೊಂದಿಗೆ ಮೈತ್ರಿ
ಇಪ್ಪತೈದು ವರ್ಷಗಳಿಂದ ಅಧಿಕಾರ ನಡೆಸುತ್ತಿದ್ದ ಮಾಣಿಕ್ ಸರ್ಕಾರ, ಹಾಗೂ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ವಿರುದ್ಧ ಸೆಣಸಲು ಬಿಜೆಪಿ, ಐಪಿಎಫ್‍ಟಿ ಸಹಕಾರ ಪಡೆದುಕೊಂಡಿತ್ತು. ಈ ಮೂಲಕ ಸ್ಥಳೀಯ ಸಮುದಾಯಗಳನ್ನು ತನ್ನೊಳಗೇ ಸೇರಿಸಿಕೊಳ್ಳುವ ಪ್ರಯತ್ನ ಮಾಡಿತ್ತು. ಇದರ ಜೊತೆ ಕಾಂಗ್ರೆಸ್ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿತ್ತು. ಕಳೆದ ಬಾರಿ ಹದಿನೆಂಟು ಸ್ಥಾನಗಳನ್ನು ಪಡೆದಿದ್ದ ಸಿಪಿಎಂ ಓಟ್ ಕತ್ತರಿಸುವ ಪ್ಲಾನ್ ಬಿಜೆಪಿದಾಗಿತ್ತು. ಬುಡಕಟ್ಟು ಜನರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಒಟ್ಟು ಇಪ್ಪತ್ತು ಸ್ಥಾನಗಳ ಪೈಕಿ ಕೇವಲ ಹನ್ನೊಂದು ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಿ ಬಾಕಿ ಒಂಭತ್ತು ಸ್ಥಾನಗಳನ್ನ ಐಪಿಎಫ್‍ಟಿ ನೊಂದಿಗೆ ಮೈತ್ರಿ ಮಾಡಿಕೊಂಡಿತ್ತು, ಬಿಜೆಪಿ ಈ ಪ್ಲಾನ್ ಭರ್ಜರಿಯಾಗೇ ವರ್ಕೌಟ್ ಆಗಿದ್ದು ಇಪ್ಪತ್ತು ಸ್ಥಾನಗಳಲ್ಲಿ ಬಿಜೆಪಿ ಉತ್ತಮ ಫಸಲು ಪಡೆದಿದೆ. ಬುಡಕಟ್ಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಲಿಷ್ಠ ವಾಗಿರದೇ ಇದ್ದಿದ್ದು ಬಿಜೆಪಿಗೆ ಮತ್ತೊಂದು ವರದಾನವಾಗಿತ್ತು. ಆಡಳಿತ ವಿರೋಧಿ ಅಲೆಯೂ ಒಂದು ಕಾರಣವಾಗಿದ್ದ ಕಾರಣ ಬಿಜೆಪಿ ಇಲ್ಲಿ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರಿದೆ.

Share This Article
Leave a Comment

Leave a Reply

Your email address will not be published. Required fields are marked *