ಭಾರತದೊಂದಿಗೆ ಒಟ್ಟಾಗಿ ಕೆಲಸ ಮಾಡುವ ಬದ್ಧತೆ ಇದೆ- ಮೋದಿ ಭೇಟಿ ಬಳಿಕ ಕೆನಡಾ ಪ್ರಧಾನಿ ಹೇಳಿಕೆ

Public TV
2 Min Read

ರೋಮ್: ಇಟಲಿಯಲ್ಲಿ ಜೂನ್ 13 ರಿಂದ 15 ರವರೆಗೆ ನಡೆದ G7 ಶೃಂಗಸಭೆಯಲ್ಲಿ (G7 Summit) ಪ್ರಧಾನಿ ಮೋದಿ ಮತ್ತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ (Justin Trudeau) ನಡುವಿನ ಔಪಚಾರಿಕ ಭೇಟಿ ಅನೇಕರನ್ನು ಅಚ್ಚರಿಗೊಳಿಸಿತು. ನರೇಂದ್ರ ಮೋದಿ ಅವರು ಕೆನಡಾದ ಪ್ರಧಾನಿಯೊಂದಿಗಿನ ಭೇಟಿಯ ಫೋಟೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ಸಂಚಲನ ಉಂಟಾಯಿತು.

ಕಳೆದ ಹಲವು ತಿಂಗಳುಗಳಿಂದ ಭಾರತ ಮತ್ತು ಕೆನಡಾ ನಡುವಿನ ಉದ್ವಿಗ್ನತೆ ಉತ್ತುಂಗದಲ್ಲಿರುವಾಗಲೇ ಉಭಯ ನಾಯಕರು ಪರಸ್ಪರ ಭೇಟಿಯಾಗಿದ್ದಾರೆ. ಆದರೆ ಭೇಟಿ ವೇಳೆ ಜಸ್ಟಿನ್ ಟ್ರುಡೊಗೆ ಪ್ರಧಾನಿ ಮೋದಿ (Narendra Modi) ಏನು ಹೇಳಿದರು. ಉಭಯ ನಾಯಕರ ನಡುವಿನ ಈ ಸಂಕ್ಷಿಪ್ತ ಭೇಟಿಯಲ್ಲಿ ಏನಾಯಿತು ಎಂಬುದರ ಕುರಿತು ಇಲ್ಲಿಯವರೆಗೆ ಯಾರಿಗೂ ಯಾವುದೇ ಮಾಹಿತಿ ಇರಲಿಲ್ಲ. ಆದರೆ ಈಗ ಸ್ವತಃ ಜಸ್ಟಿನ್ ಟ್ರುಡೋ ಅವರೇ ಬಹಿರಂಗಪಡಿಸಿದ್ದಾರೆ.

ಜಸ್ಟಿನ್ ಟ್ರುಡೋ ಹೇಳಿದ್ದೇನು..?: ಜಿ7 ಶೃಂಗಸಭೆಯ ನೆಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ ಕೆನಡಾದ ಪ್ರಧಾನಿ, ಕೆಲವು ಅತ್ಯಂತ ಪ್ರಮುಖ ಸಮಸ್ಯೆಗಳನ್ನು ನಿಭಾಯಿಸಲು ಭಾರತದೊಂದಿಗೆ ಒಟ್ಟಾಗಿ ಕೆಲಸ ಮಾಡುವ ಬದ್ಧತೆ ಇದೆ ಎಂದು ಹೇಳಿದ್ದಾರೆ.

ಶುಕ್ರವಾರ ಸಂಜೆ ಇಟಲಿಯಲ್ಲಿ ನಡೆದ ಸಭೆಯಲ್ಲಿ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಸಂಕ್ಷಿಪ್ತವಾಗಿ ಚರ್ಚಿಸಿದ್ದೇವೆ. ಈ ಸಂದರ್ಭದಲ್ಲಿ ಟ್ರುಡೊ ಅವರು ಮರು ಆಯ್ಕೆಯಾದ ಮೋದಿ ಅವರನ್ನು ಅಭಿನಂದಿಸಿದರು ಎಂದು ಕೆನಡಾದ ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ. ಇದನ್ನೂ ಓದಿ: ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ Melodi ಎಂದ ಇಟಲಿ ಪ್ರಧಾನಿ

ನವೆಂಬರ್ 2023 ರಲ್ಲಿ ಭಾರತದಲ್ಲಿ ನಡೆದ ಜಿ 20 ಸಮ್ಮೇಳನದಲ್ಲಿ ಭಾಗವಹಿಸಿ ಕೆನಡಾದ ಪ್ರಧಾನಿ ತಮ್ಮ ದೇಶಕ್ಕೆ ಹಿಂದಿರುಗಿದ ತಕ್ಷಣ, ಅವರು ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಆರೋಪವನ್ನು ಭಾರತದ ಮೇಲೆ ಹೊರಿಸಿ ಸಂಚಲನವನ್ನು ಸೃಷ್ಟಿಸಿದ್ದರು. ಭಾರತ ತಕ್ಷಣವೇ ಅವರ ಆರೋಪಗಳನ್ನು ಆಧಾರರಹಿತ ಎಂದು ತಿರಸ್ಕರಿಸಿತು. ಅಂದಿನಿಂದ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಉತ್ತುಂಗಕ್ಕೇರಿತು. ಆದರೆ G7ನಲ್ಲಿ ಇಬ್ಬರು ನಾಯಕರ ದಿಢೀರ್ ಭೇಟಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.

Share This Article