ಮಳೆ ಅವಾಂತರ – ನೀರಿನಲ್ಲಿ ಕೊಚ್ಚಿ ಹೋದ ಹಸುಗಳು, ಕೆರೆಯಲ್ಲಿ ಸಿಲುಕಿದ ಕುದುರೆ

Public TV
2 Min Read

ಬೆಂಗಳೂರು: ರಾಜಧಾನಿ ಸೇರಿದಂತೆ ರಾಜ್ಯದ ಹಲವು ಕಡೆ ಭಾರೀ ಮಳೆಯಾಗಿದೆ. ಈ ಹಿನ್ನೆಲೆ ಜನರು ಆತಂಕದಲ್ಲಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಹಲವರು ತಮ್ಮ ಮನೆ ಮತ್ತು ಹಸುಗಳನ್ನು ಕಳೆದುಕೊಂಡಿದ್ದಾರೆ.

ಮಳೆಯ ಅವಾಂತರಗಳೇನು?
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗದ ವಿದ್ಯಾನಗರದ 13ನೇ ಕ್ರಾಸ್‍ನಲ್ಲಿ ಮನೆಯೊಂದು ಜಲಾವೃತವಾಗಿತ್ತು. ಮನೆಯಲ್ಲಿದ್ದ 4 ತಿಂಗಳ ಮಗು, ಬಾಣಂತಿ ಹಾಗೂ ಕುಟುಂಬ ಸದಸ್ಯರನ್ನು ರಾತ್ರಿ ಬೋಟ್ ಮೂಲಕ ಅಗ್ನಿಶಾಮಕ ದಳ ರಕ್ಷಿಸಿದೆ. ಮನೆಯಲ್ಲಿ 5 ಅಡಿಗೂ ಹೆಚ್ಚು ನೀರು ತುಂಬಿ ಪರದಾಡುವಂತಾಗಿತ್ತು.

ಕೊಚ್ಚಿ ಹೋದ ಹಸುಗಳು
ಮಳೆ ಅವಾಂತರಕ್ಕೆ ಶಿವಮೊಗ್ಗದ ಮುದ್ದಿನಕೊಪ್ಪದ ಚಿಕ್ಕೇರಿ ಕೆರೆ ತುಂಬಿ ಹರಿಯುತ್ತಿದೆ. ಕೆರೆ ಏರಿ ಸಮೀಪ ಮೇಯಲು ಬಂದಿದ್ದ ಹಸುಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ.

ಕೆರೆ ಮಧ್ಯೆ ಸಿಲುಕಿದ ಕುದುರೆಗಳು
ಶಿವಮೊಗ್ಗದ ಸೋಮಿನಕೊಪ್ಪ ಕೆರೆ ಮಳೆಯಿಂದಾಗಿ ತುಂಬಿದೆ. ಕೆರೆ ಮಧ್ಯೆಯಲ್ಲಿ 5 ಕುದುರೆಗಳು ಸಿಲುಕಿ ಪರದಾಡಿದ್ದು, ಬಳಿಕ ಸ್ಥಳೀಯರು ಕುದುರೆಗಳನ್ನು ರಕ್ಷಿಸಿದ್ದಾರೆ.

ಜಲಾವೃತಗೊಂಡ ಸೇತುವೆ
ದಾವಣಗೆರೆಯಲ್ಲಿ ಸತತ ಮಳೆಗೆ ಅಜಾದ್ ನಗರದ ಬಳಿ ಇರುವ ಹರಪ್ಪನಹಳ್ಳಿಯಿಂದ ದಾವಣಗೆರೆ ಸಂಪರ್ಕಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೇತುವೆ ಮೇಲೆ 3-4 ಅಡಿಗಳಷ್ಟು ನೀರು ನಿಂತಿದ್ದು ಜನರು, ವಾಹನ ಸವಾರರು ಪರದಾಡುವಂತಾಗಿದೆ. ಹರಿಹರ ತಾಲೂಕಿನ ದೇವರಬೆಳೆಗೆರೆಗೆ ಸೇರುವ ಹಳ್ಳ ತುಂಬಿ ಹರಿಯುತ್ತಿದ್ದು, ಸಂಕ್ಲಿಪುರ-ಗುಳದಹಳ್ಳಿ ಸಂಪರ್ಕ ಕಡಿತಗೊಂಡಿದೆ.  ಇದನ್ನೂ ಓದಿ: ಕೆಂಪೇಗೌಡ ಏರ್‌ಪೋರ್ಟ್‍ಗೆ ಬಾಂಬ್ ಬೆದರಿಕೆ ಕರೆ

ಉತ್ತಮ ಮಳೆಯಿಂದ ಉಚ್ಚಂಗಿದುರ್ಗದಿಂದ ಹರಪ್ಪನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮುಳುಗಡೆ ಆಗಿದೆ. ಉಚ್ಚಂಗಿ ದುರ್ಗ ಬಳಿ ಇರುವ ಹಳ್ಳ ಸಂಪೂರ್ಣ ಭರ್ತಿಯಾಗಿದ್ದು, ಜನ ರಸ್ತೆ ದಾಟಲು ಹರಸಾಹಸ ಪಡುವಂತಾಗಿತ್ತು. ಉಚ್ಚಂಗಿದುರ್ಗದ ಬೆಟ್ಟದಲ್ಲಿ ಜಲಪಾತವೇ ಸೃಷ್ಟಿಯಾಗಿದೆ.

ಮನೆ ಕುಸಿತ
ನಿರಂತರ ಮಳೆಗೆ ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ರಜಪೂತ ಗಲ್ಲಿಯಲ್ಲಿ ಮನೆಯೊಂದು ಕುಸಿದು ಬಿದ್ದಿದೆ. ಸದ್ಯ ಮನೆಯಲ್ಲಿ ಯಾರು ವಾಸವಿಲ್ಲದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ. ಅಲ್ಲದೇ ಹಾಲಗಿ ಗ್ರಾಮದ ಸರ್ಕಾರಿ ಶಾಲೆ ಸಂಪೂರ್ಣ ಜಲಾವೃತಗೊಂಡಿದೆ. ಕಟ್ಟಡವೂ ಶಿಥಿಲಗೊಂಡಿದ್ದು, ಆತಂಕದಲ್ಲೇ ವಿದ್ಯಾರ್ಥಿಗಳು ಪಾಠ ಕಲಿಯುವಂತಾಗಿದೆ.

ರಸ್ತೆಯೋ, ಕೆರೆಯೋ?
ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಭರ್ಜರಿ ಮಳೆ ಆಗ್ತಿದ್ದು, ಭಟ್ಕಳ ನಗರ ಭಾಗದಲ್ಲಿರುವ ಸಂಶುದ್ಧೀನ್ ಸರ್ಕಲ್ ಸಂಪೂರ್ಣ ಜಲಾವೃತವಾಗಿದೆ. ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.

ಮರ ಬಿದ್ದು ಹಸು ಸಾವು
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪ ಹಸುವೊಂದು ಮೇಯಲು ಬಂದಿತ್ತು. ಆದರೆ ಹಸು ಮೇಲೆ ಬೃಹತ್ ಮರ ಬಿದ್ದು, ಅದು ಸ್ಥಳದಲ್ಲೇ ಸಾವನ್ನಪ್ಪಿದೆ. ಇದನ್ನೂ ಓದಿ: ಮುಂದುವರಿದ ಮಳೆ ಅಬ್ಬರ: ಉಡುಪಿ, ಶಿವಮೊಗ್ಗ, ದಾವಣಗೆರೆ, ಹಾವೇರಿಯಲ್ಲಿ ಶಾಲೆಗಳಿಗೆ ರಜೆ 

ಮಳೆಯಲ್ಲೇ ರಥೋತ್ಸವ
ಕೊಪ್ಪಳ ತಾಲೂಕಿನ ಮೈನಳ್ಳಿ ಗ್ರಾಮದಲ್ಲಿ ಮಳೆಯ ನಡುವೆಯೇ ಗ್ರಾಮದೇವತೆ ರಥೋತ್ಸವ ನಡೆದಿದೆ. ಮೈನಳ್ಳಿ ಗ್ರಾಮದೇವತೆ ಬುಡ್ಡಮ್ಮ ದೇವಿ ಜಾತ್ರೆಯನ್ನು ಮಳೆಯಲ್ಲೂ ಜನರು ಬಿಡದೇ ಆಚರಿಸಿ ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *