ಥಳಿಸಿದ್ರು ದೂಡಿದ್ರು – ಓಡಿ ಹೋದ್ರೂ ಹಿಂಬಾಲಿಸಿ ಕಲ್ಲೆಸೆದ ಗುಂಪು

Public TV
2 Min Read

– ಇಬ್ಬರು ಪೊಲೀಸರಿಗೆ ಗಾಯ, ವಿಡಿಯೋ ವೈರಲ್

ಕೋಲ್ಕತ್ತಾ: ಲಾಕ್‍ಡೌನ್ ಜಾರಿಗೊಳಿಸಲು ಹೋದ ಪೊಲೀಸರ ಮೇಲೆ ಜನರು ಕಲ್ಲುಗಳಿಂದ ಹಲ್ಲೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಹೌರ ಜಿಲ್ಲೆಯಲ್ಲಿ ನಡೆದಿದೆ.

ಕೋಲ್ಕತ್ತಾದ ಹತ್ತಿರವಿರುವ ಹೌರ ಜಿಲ್ಲೆ ಕೊರೊನಾ ಹಾಟ್‍ಸ್ಟಾಟ್ ಆಗಿದೆ. ಈ ಹಿನ್ನೆಲೆಯಲ್ಲಿ ಹೌರ ಜಿಲ್ಲೆಯ ಟಿಕಿಯಪುರದ ಮಾರುಕಟ್ಟೆಯಲ್ಲಿ ಜಾಸ್ತಿ ಜನಸಮೂಹ ಸೇರಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹೇಳಿದ್ದಾರೆ. ಈ ವೇಳೆ ಜನಸಮೂಹ ಪೊಲೀಸರ ಮೇಲೆ ದಾಳಿ ಮಾಡಿದೆ.

ಗುಂಪನ್ನು ಚದುರಿಸಲು ಪ್ರಯತ್ನಿಸಿದ ಪೊಲೀಸರ ಮೇಲೆ ಜನರ ಒಟ್ಟಿಗೆ ಕಲ್ಲುಗಳನ್ನು ತೂರಿ ಹಲ್ಲೆ ಮಾಡಿದ್ದಾರೆ. ಜೊತೆಗೆ ಅವರನ್ನು ಸ್ವಲ್ಪ ದೂರ ಓಡಿಸಿಕೊಂಡು ಬಂದಿದ್ದಾರೆ. ಆ ಸಮಯದಲ್ಲಿ ಪೊಲೀಸರು ಟಿಕಿಯಪುರದ ಪೊಲೀಸ್ ಚೌಕಿಗೆ ಓಡಿ ಬಂದಿದ್ದಾರೆ. ಆದರೂ ಸುಮ್ಮನಗಾದ ಜನಸಮೂಹ ಪೊಲೀಸ್ ಚೌಕಿಯ ಮೇಲೂ ಕಲ್ಲು ತೂರಿದೆ. ಈ ಘಟನೆಯಲ್ಲಿ ಎರಡು ಪೊಲೀಸ್ ವಾಹನಗಳು ಜಖಂ ಆಗಿವೆ.

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹೌರ ಜಿಲ್ಲೆ ಕೊರೊನಾ ಹಾಟ್‍ಸ್ಟಾಟ್ ಆಗಿದೆ. ರಾಜ್ಯದಲ್ಲಿ ಒಟ್ಟು 697 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದರೆ, ಅದರಲ್ಲಿ 79 ಪ್ರಕರಣಗಳು ಹೌರ ಜಿಲ್ಲೆಯಲ್ಲಿ ವರದಿಯಾಗಿವೆ. ಹೀಗಾಗಿ ಇದನ್ನು ಸೂಕ್ಷ್ಮ ಸ್ಥಳ ಎಂದು ಗುರುತಿಸಿ ಹೆಚ್ಚಿನ ನಿಗಾ ವಹಿಸಲಾಗಿದೆ. ಈ ದಾಳಿಯ ನಂತರ ಟಿಕಿಯಪುರಕ್ಕೆ ಹೆಚ್ಚನ ಪೊಲೀಸ್ ಪಡೆಯನ್ನು ಕಳುಹಿಸಿ ಲಾಕ್‍ಡೌನ್ ಜಾರಿ ಮಾಡಲಾಗಿದೆ.

ಪಶ್ಚಿಮ ಬಂಗಾಳ ರಾಜ್ಯ ವಿಧಾನಸಭೆಯಲ್ಲಿ ಹೌರಾ ಜಿಲ್ಲೆಯನ್ನು ಪ್ರತಿನಿಧಿಸುವ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಸಚಿವರಾಗಿರುವ ರಾಜೀವ್ ಬ್ಯಾನರ್ಜಿ ಈ ವಿಚಾರದ ಬಗ್ಗೆ ಮಾತನಾಡಿ, ಈ ಘಟನೆ ಅತ್ಯಂತ ದುರದೃಷ್ಟಕರ ಮತ್ತು ಹಿಂಸಾಚಾರಕ್ಕೆ ಕಾರಣವಾದ ಜನಸಮೂಹದ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕೋಲ್ಕತ್ತಾದ ದಕ್ಷಿಣ ಭಾಗದಲ್ಲಿರುವ ಬೆಹಾಲಾದಲ್ಲೂ ಪೊಲೀಸರ ಮೇಲೆ ದಾಳಿ ಮಾಡಲಾಗಿದೆ. ಈ ಪ್ರದೇಶದಲ್ಲಿ ಲಾಕ್‍ಡೌನ್ ಇದ್ದರು ಬೈಕಿನಲ್ಲಿ ಹೊರಗೆ ಬಂದ ಯುವಕನನ್ನು ಪೊಲೀಸರು ತಡೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ ಎಂದು ವರದಿಯಾಗಿದೆ. ಆದರೆ ಯುವಕನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *