ಇದ್ದಕ್ಕಿದ್ದಂತೆ ಕಾನ್ವಾಯ್‌ ನಿಲ್ಲಿಸಿ ರಸ್ತೆಯ ಬದಿ ಅಂಗಡಿಗೆ ತೆರಳಿ ಝಲ್ಮುರಿ ಸವಿದ ಮೋದಿ

2 Min Read

ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಸ್ತೆಬದಿಯ ಅಂಗಡಿಯೊಂದರಲ್ಲಿ ಝಲ್ಮುರಿ(Jhalmuri) ಸವಿದು ಸುದ್ದಿಯಾಗಿದ್ದಾರೆ.

ಬುಡಕಟ್ಟು ಜನಾಂಗದ ಪ್ರಾಬಲ್ಯ ಹೊಂದಿರುವ ಜಿಲ್ಲೆಯಾದ ಜಾರ್‌ಗ್ರಾಮ್‌ನಲ್ಲಿ(Jhargram) ಚುನಾವಣಾ ರ‍್ಯಾಲಿಯನ್ನು ಮುಗಿಸಿದ ಬಳಿಕ ಪ್ರಧಾನಿಯವರು ಹೆಲಿಪ್ಯಾಡಿಗೆ ಹೋಗುತ್ತಿದ್ದರು. ಮಾರ್ಗದಲ್ಲಿ ಸಾಗುತ್ತಿದ್ದಾಗ ಕಾಲೇಜ್ ಮೋರ್ (College Mor) ಎಂಬಲ್ಲಿ ಪ್ರಧಾನಿಯವರ ಕಾನ್ವಾಯ್ ಇದ್ದಕ್ಕಿದ್ದಂತೆ ನಿಂತಿತು.

ತಮ್ಮ ವಾಹನದಿಂದ ಕೆಳಗಿಳಿದ ಮೋದಿ ಅವರು ಅನಿರಿಕ್ಷಿತವಾಗಿ ರಸ್ತೆ ಬದಿಯಿದ್ದ ಅಂಗಡಿಗೆ ಭೇಟಿ ನೀಡಿ ಖಾರವಾಗಿರುವ (Spicy) ಝಲ್ಮುರಿ ತಯಾರಿಸಿಕೊಡುವಂತೆ ಕೇಳಿದರು. ಮಾತನಾಡುತ್ತಾ ಝಲ್ಮುರಿಗೆ ಎಷ್ಟಾಗುತ್ತದೆ ಎಂದು ಕೇಳಿದರು. ಇದಕ್ಕೆ ವ್ಯಾಪಾರಿ 10 ರೂ. ಆಗುತ್ತದೆ ಎಂದು ತಿಳಿಸಿದ್ದಾರೆ.

ಮೋದಿ ಅವರು ಹಣ ನೀಡಲು ಮುಂದಾದಾಗ ವ್ಯಾಪಾರಿ ಹಣವನ್ನು ಪಡೆಯಲು ನಿರಾಕರಿಸಿದ್ದಾರೆ. ಆದರೆ ಮೋದಿಯವರು ಹಣವನ್ನು ತೆಗೆದಕೊಳ್ಳಬೇಕು ಎಂದು ಒತ್ತಾಯಿಸಿ 10 ರೂ. ನೀಡಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ ನರಮೇಧಕ್ಕೆ 1 ವರ್ಷ – ಪ್ರವಾಸಿಗರ ರಕ್ಷಣೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು?

ಝಲ್ಮುರಿ ಸವಿದ ಬಳಿಕ ತುಂಬಾ ರುಚಿಯಾಗಿದೆ ಎಂದು ಮೆಚ್ಚುಗೆ ಸೂಚಿಸಿದರು. ಝಲ್ಮುರಿ ಸವಿಯುತ್ತಲೇ ಮೋದಿ ಅವರು ಅಲ್ಲಿ ನೆರೆದಿದ್ದ ಸ್ಥಳೀಯ ಮಹಿಳೆಯರು ಮತ್ತು ಮಕ್ಕಳೊಂದಿಗೆ ಮಾತನಾಡಿದರು. ಅಲ್ಲದೇ ತಾವು ಸವಿಯುತ್ತಿದ್ದ ಝಲ್ಮುರಿಯನ್ನು ಅಲ್ಲಿನ ಮಕ್ಕಳಿಗೆ ಹಂಚಿದರು.

ಪ್ರಧಾನಿ ಮೋದಿ ಸ್ಥಳೀಯರೊಂದಿಗೆ ಸಂವಾದ ನಡೆಸುತ್ತಿದ್ದಾಗ ಅಲ್ಲಿದ್ದ ಜನ “ಜೈ ಶ್ರೀ ರಾಮ್”, “ನರೇಂದ್ರ ಮೋದಿ ಜಿಂದಾಬಾದ್” ಮತ್ತು “ಭಾರತ್ ಮಾತಾ ಕಿ ಜೈ” ಎಂಬ ಘೋಷಣೆಗಳು ಮೊಳಗುತ್ತಿದ್ದವು.

ಮೋದಿ ಅವರು ಇಂದು ಪುರುಲಿಯಾ, ಝಾರ್ಗ್ರಾಮ್, ಮೇದಿನಿಪುರ ಮತ್ತು ಬಿಷ್ಣುಪುರದಲ್ಲಿ ಸರಣಿ ರ‍್ಯಾಲಿಯಲ್ಲಿ ಪಾಲ್ಗೊಂಡು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.

ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡ ಮೋದಿ, ಇಂದು ಬಂಗಾಳದಲ್ಲಿ ನಡೆದ ನಾಲ್ಕು ರ‍್ಯಾಲಿಗಳ ನಡುವೆ ಜಾರ್‌ಗ್ರಾಮ್‌ನಲ್ಲಿ ರುಚಿಕರವಾದ ಝಲ್ಮುರಿ ಸವಿದೆ” ಎಂದು ಬರೆದುಕೊಂಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು ಏಪ್ರಿಲ್ 29, 2026 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಏನಿದು ಝಲ್ಮುರಿ?
ಇದು ಕೋಲ್ಕತ್ತಾದ ಅತ್ಯಂತ ಜನಪ್ರಿಯ ಬೀದಿಬದಿಯ ತಿಂಡಿ. ಮಂಡಕ್ಕಿ ಕತ್ತರಿಸಿದ ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಕಡಲೆಕಾಯಿ, ಮಸಾಲೆ ಪುಡಿಗಳು ಮತ್ತು ಮುಖ್ಯವಾಗಿ ಸಾಸಿವೆ ಎಣ್ಣೆಯನ್ನು ಬೆರೆಸಿ ಇದನ್ನು ತಯಾರಿಸಲಾಗುತ್ತದೆ. ಕರ್ನಾಟಕದ ‘ಮಸಾಲೆ ಮಂಡಕ್ಕಿ’ ಅಥವಾ ‘ಚುರುಮುರಿ’ಗೆ ಇದು ಹೋಲಿಕೆಯಾಗುತ್ತದೆ.

Share This Article