ನಾಲ್ಕನೇ ದಿನ ಹೈಕೋರ್ಟ್‍ನಲ್ಲಿ ಹಿಜಬ್ ವಿಚಾರಣೆ – ಅರ್ಜಿದಾರರ ಪರವಾಗಿ ವಕೀಲ ಕಾಮತ್ ಪ್ರಬಲ ವಾದ

By
2 Min Read

ಬೆಂಗಳೂರು: ಹಿಜಬ್ ವಿವಾದದ ಬಗ್ಗೆ ಹೈಕೋರ್ಟ್‍ನಲ್ಲಿ ನಾಲ್ಕನೇ ದಿನದ ವಿಚಾರಣೆ ಇಂದು ನಡೆಯಿತು. ಐದು ಅರ್ಜಿಗಳನ್ನು ಏಕಕಾಲದಲ್ಲಿ ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್ ಪೀಠ, ಸುದೀರ್ಘ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿತು.

ಇಂದು ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ವಾದ ಮಂಡಿಸಿದ್ರು. ವಿದ್ಯಾರ್ಥಿನಿಯರು ಹಿಜಬ್ ಧರಿಸುವುದು ಧಾರ್ಮಿಕ ಹಕ್ಕು ಅಲ್ಲ ಎಂದು ಸರ್ಕಾರ ಹೇಳಿರೋದು ತಪ್ಪು. ಸರ್ಕಾರಕ್ಕೆ ಈ ರೀತಿ ಹೇಳಲು ಯಾವುದೇ ಹಕ್ಕಿಲ್ಲ. ಧಾರ್ಮಿಕ ನಂಬಿಕೆಗಳನ್ನು ಪಾಲನೆ ಮಾಡುವವರ ಭಾವನೆಗಳಿಗೆ ಸರ್ಕಾರ ಬೆಲೆಯೇ ಕೊಡುತ್ತಿಲ್ಲ. ವಿದ್ಯಾರ್ಥಿನಿಯರು ಕಳೆದ ಹಲವು ವರ್ಷಗಳಿಂದ ಹಿಜನ್ ಧರಿಸಿಯೇ ತರಗತಿಗಳಿಗೆ ಬರುತ್ತಿದ್ದಾರೆ. ಆಡಳಿತ ಮಂಡಳಿಯೂ ಈ ಹಿಂದೆ ಪ್ರಶ್ನೆ ಮಾಡಿರಲಿಲ್ಲ. ಹಿಜಬ್ ಬ್ಯಾನ್ ಮಾಡಿರೋದು ಕಾಲೇಜು ಅಭಿವೃದ್ಧಿ ಸಮಿತಿ ಅಲ್ಲ. ಇದು ಎಂಎಲ್‍ಎ ಸಮಿತಿ. ಸರ್ಕಾರದ ಆದೇಶ ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ್ದಲ್ಲ ಅನ್ನೋದಾದ್ರೆ ಈ ಆದೇಶವನ್ನು ತಕ್ಷಣವೇ ರದ್ದು ಮಾಡಬೇಕು ಎಂದು ವಾದ ಮಂಡಿಸಿದ್ರು. ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಸುರಕ್ಷಿತವಾಗಿದ್ದಾರೆ: ಮೋದಿ

ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯಕ್ಕೆ ಧಕ್ಕೆ ತಂದರೆ ಮೂಲಭೂತ ಆಚರಣೆಗಳನ್ನು ನಿರ್ಬಂಧಿಸಲು ಅವಕಾಶ ಇದೆ. ಆದರೆ ಧಾರ್ಮಿಕತೆ, ನೈತಿಕತೆಯ ಕಾರಣ ನೀಡಿ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುವಂತಿಲ್ಲ. ಕುರಾನ್‍ನಲ್ಲಿ ಹಿಜಬ್ ಬಗ್ಗೆ ವಿವರಣೆ ಇದೆ. ತಲೆ, ಕತ್ತು ಮುಚ್ಚಿಕೊಳ್ಳಬೇಕೆಂದು ಹೇಳಲಾಗಿದೆ. ಯೂನಿಫಾರಂ ಬಣ್ಣದ ಹಿಜಬ್ ಧರಿಸಿದ್ರೆ ಸಮಸ್ಯೆ ಆಗಲ್ಲ. ಧಾರ್ಮಿಕ ಹಕ್ಕುಗಳನ್ನು ಸರ್ಕಾರ ರಕ್ಷಣೆ ಮಾಡಬೇಕಿದೆ ಎಂದು ವಾದ ಮಂಡನೆ ಮಾಡಿದ್ರು. ಇದನ್ನೂ ಓದಿ: ಹಿಜಬ್ ಬೆಂಬಲಿಸಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆ!

ಹಿಜಬ್ ಮೂಲಭೂತ ಆಚರಣೆ ಎಂದು ಕೇರಳ, ಮದ್ರಾಸ್ ಹೈಕೋರ್ಟ್ ತೀರ್ಪಲ್ಲಿ ಹೇಳಲಾಗಿದೆ. ಶಿರೂರು ಮಠಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಉಡುಪು, ಆಹಾರ ಧಾರ್ಮಿಕ ಮೂಲಭೂತ ಹಕ್ಕಿನ ಭಾಗ ಎಂದು ಸುಪ್ರೀಂಕೋರ್ಟ್ ಹೇಳಿದೆ. ಧಾರ್ಮಿಕ ಆಚರಣೆಯನ್ನು ನಿರ್ಧರಿಸುವುದು ಹೊರಗಿನವರ ಹಕ್ಕಲ್ಲ. ಕೇರಳದಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಗೆ ಹಿಜಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗಿತ್ತು. ಸಿಬಿಎಸ್‍ಇ ಶಾಲೆಗಳಲ್ಲಿಯೂ ಹಿಜಬ್ ಧರಿಸಲು ಅವಕಾಶ ಇದೆ. ಇಲ್ಲಿಯೂ ಮೂಲಭೂತ ಹಕ್ಕಿನ ರಕ್ಷಣೆ ಆಗಬೇಕು ಎಂದು ದೇವದತ್ ಕಾಮತ್ ವಾದ ಮಂಡಿಸಿದ್ರು. ಇದನ್ನೂ ಓದಿ: ನಾನು ಮತ್ತೆ ಶಾಸಕನಾದ್ರೆ ಮುಸ್ಲಿಮರು ಟೋಪಿ ತೆಗೆದು ತಿಲಕ ಇಡುವಂತೆ ಮಾಡ್ತೀನಿ: ಬಿಜೆಪಿ ಶಾಸಕ

ಈ ಮಧ್ಯೆ ಸಾಮಾಜಿಕ ಕಲ್ಯಾಣಕ್ಕಾಗಿ ಧಾರ್ಮಿಕ ಮೂಲಭೂತ ಆಚರಣೆಯನ್ನು ನಿರ್ಬಂಧಿಸಬಹುದೇ..? ಮೂಲಭೂತ ಧಾರ್ಮಿಕ ಆಚರಣೆಗಳು ಪರಮೋಚ್ಛವೇ..? ಅಥವಾ ಆ ಆಚರಣೆಗಳ ಮೇಲೆ ನಿರ್ಬಂಧ ಹೇರಬಹುದೇ..? ಎಂದು ನ್ಯಾಯಪೀಠ ಕೇಳಿತು. ಸರ್ಕಾರ ಹಿಜಬ್ ನಿರ್ಬಂಧಕ್ಕೆ ಕಾನೂನು ಸುವ್ಯವಸ್ಥೆ ಕಾರಣ ನೀಡಿದೆಯೇ…? ಸರ್ಕಾರ ಹಾಗೆಂದು ಹೇಳಿದರೆ ನಿಮ್ಮ ವಾದ ಪರಿಶೀಲಿಸುತ್ತೇವೆ ಎಂದ ನ್ಯಾಯಪೀಠ ವಿಚಾರಣೆಯನ್ನು ನಾಳೆ ಮಧ್ಯಾಹ್ನಕ್ಕೆ ಮುಂದೂಡಿತು. ಇದನ್ನೂ ಓದಿ: ನಾನು ಹಿಜಬ್ ಬಗ್ಗೆ ಮಾತಾಡುವವನೇ, ನಾನ್ಯಾಕೆ ಕ್ಷಮೆ ಕೇಳಬೇಕು – ಡಿಕೆಶಿಗೆ ಜಮೀರ್ ಟಾಂಗ್

Share This Article
Leave a Comment

Leave a Reply

Your email address will not be published. Required fields are marked *