ಡೈರಿ ಬಾಂಬ್ ಪ್ರತೀಕಾರಕ್ಕೆ ಕಾಂಗ್ರೆಸ್ ಸಜ್ಜು- 2 ದಿನದಲ್ಲಿ ಬಿಜೆಪಿ ಬಂಡವಾಳ ಬಯಲು ಮಾಡ್ತೀವಿ ಎಂದ ಕೈ ನಾಯಕರು

Public TV
2 Min Read

ದಾವಣಗೆರೆ/ಬೆಂಗಳೂರು: ತಮ್ಮ ಮೇಲಿನ ಡೈರಿ ಬಾಂಬ್ ಪ್ರತೀಕಾರಕ್ಕೆ ಕಾಂಗ್ರೆಸ್ ಸಜ್ಜಾಗಿದೆ. ಇನ್ನೆರಡು ದಿನದಲ್ಲಿ ಬಿಜೆಪಿ ಹಾಗೂ ಯಡಿಯೂರಪ್ಪ ಬಂಡವಾಳ ಬಯಲಾಗುತ್ತೆ ಅಂತಾ ದಾವಣಗೆರೆಯಲ್ಲಿ ವಿಎಸ್ ಉಗ್ರಪ್ಪ ಬಾಂಬ್ ಹಾಕಿದ್ದಾರೆ. ಇನ್ನು ಹೆಚ್‍ಎಂ ರೇವಣ್ಣ ಕೂಡಾ ಬಿಜೆಪಿ ವಿರುದ್ಧ ಡೈರಿ ಬಾಂಬ್ ಸಿಡಿಸೋದಾಗಿ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತರ ಮೂಲಕ ಬಿಜೆಪಿ ಮೇಲೆ ಡೈರಿ ಬಾಂಬ್ ಹಾಕಲು ತಯಾರಿ ನಡೆಸಿದ್ದಾರೆ.

ಮುಂದಿನ ಎರಡು-ಮೂರು ದಿನಗಳಲ್ಲಿ ಬಿಜೆಪಿಯ ಕರ್ಮಕಾಂಡ ಬಯಲು ಮಾಡುತ್ತೇವೆ. ನಮ್ಮ ಬಳಿಯೂ ಡೈರಿಗಳಿವೆ, ಅವುಗಳನ್ನು ಶೀಘ್ರವೇ ಬಿಡುಗಡೆ ಮಾಡುತ್ತೆವೆ ಎಂದು ಸಿಎಂ ಆಪ್ತ, ಎಂಎಲ್‍ಸಿ ಹೆಚ್.ಎಂ. ರೇವಣ್ಣ ಹೇಳಿದ್ದಾರೆ.

ನೆಲಮಂಗಲದ ಬೀರೇಶ್ವರ ಜಾತ್ರೆಯಲ್ಲಿ ಪಾಲ್ಗೊಂಡು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ರೇವಣ್ಣ, ಐಟಿ ಇಲಾಖೆ ಹಾಗೂ ಒಬ್ಬ ವ್ಯಕ್ತಿಯ ನಡುವಿನ ವಿಷಯ ಹೊರಹಾಕಲು ಬಿಜೆಪಿ ಕುತಂತ್ರ ಮಾಡಿದೆ. ಬಿಜೆಪಿಯವರು ಇಲಾಖೆಯನ್ನ ದುರುಪಯೋಗಪಡಿಸಿಕೊಂಡಿರುವುದು ಈ ಡೈರಿ ಬಿಡುಗಡೆ ವಿಚಾರದಲ್ಲಿ ಸಾಬೀತಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಮಸಿ ಬಳಿಯುವ ನಿಟ್ಟಿನಲ್ಲಿ ಯಡಿಯೂರಪ್ಪ ಹಾಗೂ ಬಿಜೆಪಿ ಹುಟ್ಟುಹಾಕಿರುವ ಕಟ್ಟುಕಥೆಯ ಕುತಂತ್ರ ಎಂದು ರೇವಣ್ಣ ಯಡಿಯೂರಪ್ಪ ವಿರುದ್ಧ ಹರಿಹಾಯ್ದರು.

ದಾವಣಗೆರೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ ಕೂಡ ಇದೇ ರೀತಿ ಬಾಂಬ್ ಸಿಡಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಬಿಜೆಪಿಯವರ ಹಾಗೂ ಯಡಿಯೂರಪ್ಪ ನವರ ಬಂಡವಾಳ ಬಯಲಾಗಲಿದೆ. ಬಿಜೆಪಿಯವರು ಹೈಕಮಾಂಡ್ ಗೆ ಎಷ್ಟು ಹಣವನ್ನು ನೀಡಿದ್ದಾರೆ ಎನ್ನುವ ಮಾಹಿತಿ ಸಹ ಇದೆ. ಬಿಜೆಪಿಯವರ ಡೈರಿಯು ಸಹ ಬಿಡುಗಡೆ ಮಾಡಲಾಗುತ್ತದೆ ಎನ್ನುವ ಸುಳಿವು ನೀಡಿದ್ರು.

ಕೇಂದ್ರ ಸಚಿವ ಅನಂತ್ ಕುಮಾರ್ ಹಾಗೂ ಯಡಿಯೂರಪ್ಪ ನಡುವಿನ ಸಂಭಾಷಣೆ ಸ್ಪಷ್ಟವಾಗಿದೆ. ಜನರು ಬುದ್ಧಿವಂತರು, ಮುಂದಿನ ಚುನಾವಣೆಯಲ್ಲಿ ಯಾರು ಯೋಗ್ಯರು ಎನ್ನುವುದನ್ನು ಅವರೇ ನಿರ್ಧಾರ ಮಾಡುತ್ತಾರೆ ಅಂದ್ರು.

ಗೋವಿಂದರಾಜು ರವರ ಮನೆ ಮೇಲೆ ಐಟಿ ರೇಡ್ ಅಗಿ ಒಂದು ವರ್ಷ ಕಳೆದಿದೆ. ಈಗ ಡೈರಿ ಹೇಗೆ ಸಿಕ್ಕಿತು? ಎನ್ನುವ ಪ್ರಶ್ನೆ ಕಾಡುತ್ತಿದೆ. ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಡೀ ದೇಶದಲ್ಲಿ ಚೆಕ್ ಮುಖಾಂತರ ಹಣವನ್ನು ಪಡೆದು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದ ಮುಖ್ಯಮಂತ್ರಿ ಏನಾದ್ರು ಇದ್ದರೆ ಅದು ಯಡಿಯೂರಪ್ಪ ಮಾತ್ರ ಎಂದು ವಿಎಸ್ ಉಗ್ರಪ್ಪ ಲೇವಡಿ ಮಾಡಿದ್ರು.

 

Share This Article
Leave a Comment

Leave a Reply

Your email address will not be published. Required fields are marked *