ತಡವಾಗಿದ್ರೂ ಪರವಾಗಿಲ್ಲ, ಉತ್ತಮ ಗುಣಮಟ್ಟದ ಮನೆ ನೀಡ್ತೀವಿ: ಎಂಟಿಬಿ

Public TV
2 Min Read

– ಜುಲೈ ಅಂತ್ಯಗೊಳಗೆ ಕೊಡಗು ನಿರಾಶ್ರಿತರಿಗೆ ಮನೆ ಹಸ್ತಾಂತರ

ಮಡಿಕೇರಿ: ಜುಲೈ ಅಂತ್ಯದ ಒಳಗಡೆ ಕೊಡಗು ನಿರಾಶ್ರಿತರಿಗೆ ಮನೆ ಹಸ್ತಾಂತರ ಮಾಡುತ್ತೇವೆ. ತಡವಾಗಿದ್ದರೂ ಪರವಾಗಿಲ್ಲ, ಉತ್ತಮ ಗುಣಮಟ್ಟದ ಮನೆ ನೀಡುತ್ತೇವೆ ಎಂದು ಮನೆ ಕಾಮಗಾರಿ ವಿಕ್ಷಣೆ ಬಳಿಕ ವಸತಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಜಂಬೂರು ಗ್ರಾಮಕ್ಕೆ ಇಂದು ಭೇಟಿ ನೀಡಿದ್ದರು. ಕಳೆದ ಬಾರಿ ಕೊಡಗು ಜಿಲ್ಲೆಯಲ್ಲಿ ಆದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರ ಮನೆಗಳನ್ನು ಕಟ್ಟುಕೊಡುತ್ತಿದ್ದು, ಈ ಮನೆಗಳ ಕಾಮಗಾರಿ ವಿಕ್ಷಣೆಯನ್ನು ಮಾಡಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಡವಾಗಿದ್ದರೂ ಪರವಾಗಿಲ್ಲ, ಉತ್ತಮ ಗುಣಮಟ್ಟದ ಮನೆ ನಿಡುತ್ತಿದ್ದೇವೆ. ಕಾಮಗಾರಿ ವಿಳಂಬ ಆಗಿದೆ. ಮೂಲಸೌಕರ್ಯ ಕಲ್ಪಿಸಿದ ಕೂಡಲೇ ಸಂತ್ರಸ್ತರಿಗೆ ಮನೆಗಳನ್ನು ಹಸ್ತಾಂತರ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಕರ್ಣಂಗೇರಿ, ಮದೆನಾಡುವಿನ ಎರಡು ಕಡೆ ನಿರ್ಮಾಣವಾಗಿರುವ ಮನೆಗಳನ್ನು ಹಸ್ತಾಂತರವಾಗಲಿದೆ. ಮನೆ ನೋಡಿ ನನಗೆ ತುಂಬಾ ಖುಷಿಯಾಗಿದೆ. ನಮ್ಮ ಸಮ್ಮಿಶ್ರ ಸರ್ಕಾರದ ವತಿಯಿಂದ ನಿರಾಶ್ರಿತರಿಗೆ ಉತ್ತಮ ಮನೆ ನೀಡೋದು ನಮ್ಮ ಉದ್ದೇಶ ಅಷ್ಟೇ ಎಂದು ಎಂಟಿಬಿ ತಿಳಿಸಿದರು.

ಸಿಎಂ ಗ್ರಾಮ ವಾಸ್ತವ್ಯಕ್ಕೆ ವಸತಿ ಸಚಿವರು ಫುಲ್ ಮಾರ್ಕ್ಸ್‌ ಕೊಟ್ಟಿದ್ದು, ಗ್ರಾಮದ ವಾಸ್ತವ ಸಮಸ್ಯೆ ಅರಿಯಲು ಸಿಎಂ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಎಲ್ಲೋ ಕುಳಿತು ಆಡಳಿತ ಮಾಡಿದರೆ ಸಮಸ್ಯೆ ಗೊತ್ತಾಗಲ್ಲ ಎಂಬುದು ಸಿಎಂಗೆ ಗೊತ್ತಿದೆ. ಹೀಗಾಗಿ ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ ಸಮಸ್ಯೆ ಅರಿಯುತ್ತಿದ್ದಾರೆ. ಈ ಹಿಂದೆ ಸಿಎಂ ಆಗಿದ್ದಾಗ ಕೂಡ ಅವರು ಗ್ರಾಮ ವಾಸ್ತವ್ಯ ಮಾಡಿದ್ದರು. ವಿರೋಧ ಪಕ್ಷಗಳಿಗೆ ವಿರೋಧ ಮಾಡೋದೆ ಕೆಲಸ. ಅವರ ವಿರೋಧ ಹೇಳಿಕೆ ಕಾಮನ್ ಎಂದ ಬಿಜೆಪಿಗೆ ಮಾತಿಗೆ ಚಾಟಿ ಬೀಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಶಕ್ತಿ ಕುಗ್ಗಿಲ್ಲ. ಅವರ ವ್ಯಾಪ್ತಿಯ ಕೆಲಸವನ್ನು ಅವರು ಚೆನ್ನಾಗಿ ಮಾಡುತ್ತಿದಾರೆ. ಸಿದ್ದರಾಮಯ್ಯ ಅವರು ರಾಜ್ಯದ ಜನರಿಗೆ ಏನೇನು ಒಳ್ಳೆ ಕಾರ್ಯ ಮಾಡಿದ್ದಾರೆ ಎಂದು ಗೊತ್ತಿದೆ. ಜನರು ಅದನ್ನು ತಿಳಿದುಕೊಂಡಿದ್ದಾರೆ. ಬಿಜೆಪಿ ನಾಯಕರ ಹೇಳಿಕೆ ಸುಖಾ ಸುಮ್ಮನೆ. ಸಮ್ಮಿಶ್ರ ಸರ್ಕಾರದಲ್ಲಿ ಏನೂ ಸಮಸ್ಯೆ ಇಲ್ಲ. ಸಿದ್ದರಾಮಯ್ಯ, ಕುಮಾರಸ್ವಾಮಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಮ್ಮ ನಾಯಕರ ಪರ ಬ್ಯಾಟಿಂಗ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *