EXCLUSIVE: ನಿಜವಾಗಿಯೂ ನಮ್ಮ ಬಳಿ ಮೈಸೂರಲ್ಲಿ ಒಂದೇ ಒಂದು ಸೈಟ್‌ ಇದೆಯಷ್ಟೆ: ಸಿದ್ದರಾಮಯ್ಯ

Public TV
2 Min Read

– ನಾನೇಕೆ ರಾಜೀನಾಮೆ ಕೊಡಲಿ

ಬೆಂಗಳೂರು: ನನಗೆ ಸೈಟು, ಜಮೀನುಗಳ ಮೇಲೆ ಆಸಕ್ತಿಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಷ್ಟಪಡಿಸಿದರು.

‘ಪಬ್ಲಿಕ್‌ ಟಿವಿ’ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ಜಮೀನನ್ನ ಮುಡಾದವರು ತೆಗೆದುಕೊಂಡಿದ್ದಾರೆ. ಅದಕ್ಕೆ ನೀವು ಪರಿಹಾರ ರೂಪದಲ್ಲಿ ನಿಯಮಾವಳಿಗಳ ಪ್ರಕಾರ ಕೊಡಿ ಅಂತಾ ಕೇಳಿದ್ದೇವೆ. ಕಾನೂನು ಪ್ರಕಾರ ಹೋದರೆ ಲ್ಯಾಂಡ್‌ ಟು ಲ್ಯಾಂಡ್‌ ಕೊಡಬೇಕು. ಅವರು 50:50 ಪ್ರಕಾರ ಕೊಡ್ತೀವಿ ಅಂತಾ ಹೇಳಿದ್ದಾರೆ. ಆಯ್ತು ಹಾಗೆಯೇ ತಗೋ ಅಂತಾ ನನ್ನ ಪತ್ನಿಗೆ ತಿಳಿಸಿದ್ದೆ ಎಂದು ತಿಳಿಸಿದರು.

ಪ್ರಶ್ನೆ: ಆ ಜಾಗದ ಮೇಲೆ ನಿಮಗೆ ಆಸೆ ಇದೆಯಾ?
ಈಗಲೂ ನನಗೆ ಆ ಜಾಗದ ಮೇಲೆ ಆಸೆ ಇಲ್ಲ. ಮುಡಾ ನಿರ್ಧಾರ ತೆಗೆದುಕೊಂಡಿದೆ. ಅದು ನಾನು ಅಧಿಕಾರದಲ್ಲಿ ಇದ್ದಾಗ ತೆಗೆದುಕೊಂಡಿದ್ದಲ್ಲ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ತೆಗೆದುಕೊಂಡಿದ್ದು. ಬಿಜೆಪಿ-ಜೆಡಿಎಸ್‌ನವರು ಹೇಳಿಕೆ ಕೊಡೋದಕ್ಕೆ ಶುರು ಮಾಡಿದರು. ಅದಕ್ಕೆ ನಾವು ನ್ಯಾಯಾಂಗ ಸಮಿತಿಯನ್ನು ನೇಮಕ ಮಾಡಿ ನೇಮಿಸಿ ತನಿಖೆಗೆ ಆದೇಶಿಸಿದ್ದೇವೆ. ಆ ಸಮಿತಿ ತೀರ್ಮಾನಿಸಿ ವರದಿ ಕೊಡಲಿ. ವರದಿಯಂತೆ ಕಾನೂನು ಪ್ರಕಾರ ನಡೆದುಕೊಳ್ಳೋಣ ಅಂತಾ ನಾವು ಮಾಡಿದೆವು ಎಂದು ವಿವರಿಸಿದರು.

ಪ್ರಶ್ನೆ: ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರೆ?
ಇದು ಕಾನೂನು ಬಾಹಿರ. ಅದು ಸಂವಿಧಾನ ವಿರೋಧಿ. ಪ್ರಾಸಿಕ್ಯೂಷನ್‌ ಆಗಲಿ ಅಥವಾ ಆಗದೇ ಇರಲಿ, ನಾನು ರಾಜೀನಾಮೆ ಕೊಡಲ್ಲ. ಪ್ರಾಸಿಕ್ಯೂಷನ್‌ ಕೊಡುವುದೇ ಕಾನೂನು ಬಾಹಿರ. ನಾನೇಕೆ ರಾಜೀನಾಮೆ ಕೊಡಲಿ? ಸುಳ್ಳು ಆಪಾದನೆ ಮೇಲೆ ಪ್ರಾಸಿಕ್ಯೂಷನ್‌ಗೆ ಕೊಟ್ಟರೆ ನಾನೇಕೆ ರಾಜೀನಾಮೆ ನೀಡಲಿ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ-ಜೆಡಿಎಸ್‌ನವರು ಷಡ್ಯಂತ್ರ ಮಾಡಿದ್ದಾರೆ. ಕೇಂದ್ರ ಸರ್ಕಾರ, ರಾಜಭವನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲ ಜನರಿಗೆ ಗೊತ್ತು ಎಂದು ತಿಳಿಸಿದರು.

ಮೈಸೂರಲ್ಲಿ ನಮಗೆ ಇರುವುದು ಒಂದೇ ಒಂದು ಸೈಟ್‌ ಇದೆಯಷ್ಟೆ. ಅದರಲ್ಲಿ ಮನೆ ಕಟ್ಟುತ್ತಿದ್ದೇವೆ. ತೋಟದ ಮನೆಯಿದೆ. ಕೂಡ್ನಳ್ಳಿ ಹತ್ತಿರ ಒಂದು ತೋಟ ಇದೆ. ಅದು ತಂದೆಯಿಂದ ಬಂದಿದ್ದು. ಮೈಸೂರಲ್ಲಿ 3 ಲಕ್ಷ ಬಾಡಿಗೆ ಬರುವ ಮನೆಯಷ್ಟೇ ಇದೆ. ಜನಸೇವೆ ಮಾಡೋಕೆ ಬಂದವರು ನಾವು.

ಮುಡಾದವರು ಸೈಟ್‌ ಕೊಟ್ಟಿದ್ದೀವಿ ಅಂತಾರೆ. ವಾಪಸ್‌ ತೆಗೆದುಕೊಳ್ಳುತ್ತೇನೆಂದರೆ ತೆಗೆದುಕೊಳ್ಳಲಿ. ನಾವು ಕೋರ್ಟ್‌ನಲ್ಲಿ ಫೈಟ್‌ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

Share This Article