ಉತ್ತರ, ದಕ್ಷಿಣ ಎಂದು ಯಾವುದೇ ತಾರತಮ್ಯ ಮಾಡಿಲ್ಲ – ಬಜೆಟ್ ಟೀಕೆಗೆ ಸಿಎಂ ತಿರುಗೇಟು

Public TV
2 Min Read

ಬೆಂಗಳೂರು: ಬಜೆಟ್ ಬಗ್ಗೆ ಟೀಕೆ ಮಾಡುತ್ತಿರುವ ಬಿಜೆಪಿ ನಾಯಕರಿಗೆ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಬಿಜೆಪಿ ಅವರಿಗೆ ನನ್ನ ಬಜೆಟ್ ಅರ್ಥವೇ ಮಾಡಿಕೊಂಡಿಲ್ಲ. ಏನೇನೋ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣದಲ್ಲಿ ಮಾತನಾಡಿದ ಸಿಎಂ ಎಚ್‍ಡಿಕೆ, ಉತ್ತರ, ದಕ್ಷಿಣ ಎಂದು ಯಾವುದೇ ತಾರತಮ್ಯ ಮಾಡಿಲ್ಲ. ನನ್ನ ಬಜೆಟ್ ನ ಸೂಕ್ಷ್ಮ ವಿಚಾರಗಳನ್ನ ಅರ್ಥ ಮಾಡಿಕೊಳ್ಳದೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಿದ್ದಾರೆ. ಮೋದಿ 4 ವರ್ಷಗಳಲ್ಲಿ ಬೆಲೆ ಜಾಸ್ತಿ ಮಾಡಿದಾಗ ಯಾರು ಮಾತನಾಡಿಲ್ಲ. ಆದರೆ ಈಗ ಎಲ್ಲರೂ ಮಾತನಾಡುತ್ತಿದ್ದಾರೆ. 34 ಸಾವಿರ ಕೋಟಿ ನಾನು ದರೋಡೆಕೋರಿಗೆ ಕೊಡುತ್ತಿಲ್ಲ. ನನ್ನ ಮನೆಗೆ ತೆಗೆದುಕೊಂಡು ಹೋಗುತ್ತಿಲ್ಲ. ಜನರ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇನೆ. ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇನೆ. ಮಾಜಿ ಸಿಎಂ ಸಿದ್ದರಾಮಯ್ಯರ ಯಾವ ಯೋಜನೆಯನ್ನು ನಿಲ್ಲಿಸಿಲ್ಲ. ಹೀಗಿದ್ದರು ಬಿಜೆಪಿ ನಾಯಕರು ಲಂಗು ಲಗಾಮು ಇಲ್ಲದೆ ಮಾತನಾಡುತ್ತಾರೆ. ಎಲ್ಲದ್ದಕ್ಕೂ ಅಧಿವೇಶನದಲ್ಲಿ ಉತ್ತರ ಕೊಡುತ್ತೇನೆ. ನಾನು ಓಡಿ ಹೋಗೋದಿಲ್ಲ ಎಂದರು.

ನಾನು ಅನ್ನದಾತನ ಮುಖ್ಯಮಂತ್ರಿ, ಆದರೆ ಮಾಧ್ಯಮಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ತಪ್ಪು ಸುದ್ದಿಗಳಿಂದ ದಾರಿ ತಪ್ಪಿಸಬಾರದು. ಸಾಲಮನ್ನಾದಿಂದ ಕೇವಲ ಒಕ್ಕಲಿಗರಿಗೆ ಸಹಾಯ ಆಗುವುದಿಲ್ಲ. ಎಲ್ಲಾ ಭಾಗದ ರೈತರಿಗ ಅನುಕೂಲವಾಗುತ್ತೆ. ಸುಳ್ಳು ಮಾಹಿತಿ ನೀಡಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಬೇಡಿ ಎಂದು ಮನವಿ ಮಾಡಿದರು.

ಇದೇ ವೇಳೆ ಒಕ್ಕಲಿಗರಿಗೆ ಹೆಚ್ಚು ಸಹಾಯ ಆಗುತ್ತೆ ಎಂಬ ಅಂಕಿ – ಅಂಶ ನೀಡಿದವರ ವಿರುದ್ಧ ಕ್ರಮ ತೆಗೆದುಕೊಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಯಾರ ಮೇಲೆ ಕ್ರಮ ತೆಗೆದುಕೊಳ್ಳಲಿ. ಮಾಧ್ಯಮಗಳ ಮೇಲೆ ಕೇಸ್ ಹಾಕಬೇಕು ಅಷ್ಟೇ. ಹೀಗಾಗಿ ಸತ್ಯ ಸುದ್ದಿ ಪ್ರಸಾರ ಮಾಡಿ ಎಂದು ಮನವಿ ಮಾಡಿದರು. ಇದೇ ವೇಳೆ ರೈತರಿಗೂ ಮನವಿ ಮಾಡಿದ ಸಿಎಂ ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನೀವು ಆತ್ಮಹತ್ಯೆ ಮಾಡಿಕೊಂಡರೆ ಸಾಲಮನ್ನಾ ಮಾಡಿದ್ದು ಪ್ರಯೋಜನ ಆಗುವುದಿಲ್ಲ. ನಿಮ್ಮೆಲ್ಲರ ಅಭಿವೃದ್ಧಿಗೆ ನಾನು ಕೆಲಸ ಮಾಡುತ್ತೇನೆ ಎಂದರು.

ಮಾಜಿ ಡಿಸಿಎಂ ಆರ್.ಅಶೋಕ್ ವಿರುದ್ಧ ಕಿಡಿಕಾರಿದ ಸಿಎಂ, ಅಶೋಕ ಚಕ್ರವರ್ತಿಗಳು ಬೆಂಗಳೂರಿಗೆ ಏನು ಮಾಡಿಲ್ಲ. ಈ ಕುರಿತು ಚರ್ಚೆಗೆ ನಾನು ಸಿದ್ಧ. ಅಧಿವೇಶನದಲ್ಲೇ ಎಲ್ಲರಿಗೂ ಉತ್ತರ ಕೊಡುತ್ತೇನೆ. ಟ್ವಿಟ್ಟರ್ ನಲ್ಲಿ ಬಿಜೆಪಿ ನಾಯಕರ ವಿರೋಧಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಿಎಂ, ನನ್ನ ಹೆಸರು ಕೆಡಿಸಬೇಕು ಎಂದು ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *