ಆಪರೇಷನ್ ಕಮಲಕ್ಕೆ ಕೈ ಹಾಕಿಲ್ಲ, ಅವರಾಗಿಯೇ ಬಂದರೆ ಬೇಡ ಅನ್ನಲ್ಲ: ರಮೇಶ್ ಜಿಗಜಿಣಗಿ

Public TV
1 Min Read

ಕಲಬುರಗಿ: ಬಿಜೆಪಿಯು ಆಪರೇಷನ್ ಕಮಲಕ್ಕೆ ಕೈ ಹಾಕಿಲ್ಲ, ಅವರಾಗಿಯೇ ಪಕ್ಷಕ್ಕೆ ಬರುವವರನ್ನು ಬೇಡ ಅನ್ನಲು ಸಾಧ್ಯವಿಲ್ಲವೆಂದು ಕೇಂದ್ರ ಸರ್ಕಾರದ ಕುಡಿಯುವ ನೀರು ಹಾಗೂ ಸ್ವಚ್ಛತಾ ಖಾತೆ ರಾಜ್ಯ ಸಚಿವ ರಮೇಶ್ ಜಿಗಜಿಣಗಿ ಹೇಳಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನ ಬೀಳಿಸಿ, ಆಪರೇಶನ್ ಕಮಲ ಮಾಡುವ ಮೂಲಕ ಅಧಿಕಾರಕ್ಕೆ ಬರಬೇಕು ಎನ್ನುವ ಇರಾದೆ ಇಲ್ಲ. ಅವರ ಪಕ್ಷದಿಂದ ಬೇಸತ್ತು, ನಮ್ಮ ಪಕ್ಷ ಸೇರಿದರೆ ನಾವು ಅಷ್ಟೇ ಸ್ವಾಗತ ಮಾಡುತ್ತೇವೆ. ರಾಜ್ಯ ಸಮ್ಮಿಶ್ರ ಸರ್ಕಾರ ಅನೈತಿಕ ಸರ್ಕಾರವಾಗಿದ್ದು, ಇಂಥಹ ಸರ್ಕಾರ ಬಹಳಷ್ಟು ದಿನ ನಡೆಯಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಗಳು ಸ್ಥಗಿತಗೊಂಡಿದ್ದು, ಸಿಎಂ ಕುಮಾರಸ್ವಾಮಿ ಕೇವಲ ದಕ್ಷಿಣ ಕರ್ನಾಟಕ ಅಂತಾ ತಿರುಗಾಡುತ್ತಾ, ಉತ್ತರ ಕರ್ನಾಟಕವನ್ನ ಮರೆತಿದ್ದಾರೆ. ಇಲ್ಲಿನ ಜನ ಹಾಗೂ ಜಾನುವಾರುಗಳು ಮಳೆಯಿಲ್ಲದೇ ತತ್ತರಿಸಿಹೋಗಿವೆ. ಇಂತಹ ಭಾಗಗಳಲ್ಲಿ ಅವರಿಗೆ ಮಾಡಲು ಏನು ದಾಡಿ ಎಂದು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು. ಸಿಎಂ ಕೇವಲ ದಕ್ಷಿಣ ಕರ್ನಾಟಕ ಅಂತಾ ಸುತ್ತುತ್ತಾ ಇದ್ದರೆ, ಇತ್ತ ಯಾವೊಬ್ಬ ಉಸ್ತುವಾರಿ ಸಚಿವರು ತಮಗೆ ಜಿಲ್ಲೆಗಳ ಸಮಸ್ಯೆಗಳ ಉಸಾಬರಿನೇ ಬೇಡ ಅನ್ನುವ ಮಟ್ಟಕ್ಕೆ ಇಳಿದಿದ್ದಾರೆ. ಯಾರು ಸಹ ಜನರ ಸಮಸ್ಯೆಗಳನ್ನ ಆಲಿಸುತ್ತಿಲ್ಲ ಎಂದು ಆರೋಪಿಸಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಳೆಯ ಕೆಲವೊಬ್ಬರಿಗೆ ಟಿಕೆಟ್ ನೀಡುತ್ತಿಲ್ಲ ಎಂಬ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಟಿಕೆಟ್ ಕೊಟ್ಟರೇ ಸ್ಪರ್ಧೆ ಮಾಡುತ್ತೇನೆ. ಟಿಕೆಟ್ ಸಿಕ್ಕಿಲ್ಲ ಅಂದರೆ ನಮಸ್ಕಾರ ಮಾಡಿ ಹತ್ತು ರೂಪಾಯಿ ದಾನ ಮಾಡಿ, ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *