ಸುಮಲತಾ ಎಂದೂ ಕೂಡ ಮಂಡ್ಯದ ಗೌಡ್ತಿ ಅಲ್ಲ: ಕೆ.ಟಿ.ಶ್ರೀಕಂಠೇಗೌಡ

Public TV
1 Min Read

ಮಂಡ್ಯ: ನಟಿ ಸುಮಲತಾ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯಿಸಿ ಜೆಡಿಎಸ್ ಎಂಎಲ್‍ಸಿ ಕೆ.ಟಿ.ಶ್ರೀಕಂಠೇಗೌಡ ನಟಿ ಸುಮಲತಾ ಎಂದೂ ಕೂಡ ಮಂಡ್ಯದ ಗೌಡ್ತಿ ಅಲ್ಲ, ಅವರ ಮೂಲ ಆಂಧ್ರಪ್ರದೇಶ ಎಂದು ವ್ಯಂಗ್ಯವಾಡಿದ್ದಾರೆ.

ಸುಮಲತಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ, ಸುಮಲತಾ ಎಂದೂ ಕೂಡ ಮಂಡ್ಯದ ಗೌಡ್ತಿ ಅಲ್ಲ. ಮೂಲತಃ ಆಂಧ್ರದವರಾದ ಅವರು ಮಂಡ್ಯದಿಂದ ಹೇಗೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ ಎನ್ನುವ ರೀತಿ ಪರೋಕ್ಷವಾಗಿ ಟೀಕಿಸಿದ್ದಾರೆ.

ರೆಬೆಲ್ ಸ್ಟಾರ್ ಅಂಬರೀಶ್ ಅವರು ಬದುಕಿದ್ದಾಗ ರಾಜಕಾರಣ ನನಗೆ ಸಾಕು. ನನ್ನ ಮನೆಗೆ ರಾಜಕಾರಣ ಬೇಡ ಅಂತ ಸ್ಪಷ್ಟವಾಗಿ ಹೇಳಿದ್ದರು. ಈ ಹಿಂದೆ ಮಂಡ್ಯ ಕ್ಷೇತ್ರದಿಂದ ನಟಿ ರಮ್ಯಾರನ್ನು ಕಣಕ್ಕಿಳಿಸಿ ಅವರ ಕೆಲಸ ನೋಡಿ ಆಗಿದೆ. ಎಷ್ಟರ ಮಟ್ಟಕ್ಕೆ ನಮ್ಮ ಕೆಲಸ ಮಾಡಿಕೊಟ್ಟರು ಅಂತ ಗೊತ್ತು ಎಂದು ವ್ಯಂಗ್ಯವಾಡಿದ್ದಾರೆ.

ಅಂಬರೀಶ್ ಅವರು ಕಡೆ ದಿನಗಳಲ್ಲಿ ಮಂಡ್ಯದಿಂದ ಏಕೆ ಚುನಾವಣೆಗೆ ನಿಲ್ಲಲಿಲ್ಲ? ಜನ ಸೋಲಿಸ್ತಾರೆ ಅಂತ ಅಂಬಿಗೆ ಚೆನ್ನಾಗಿಯೇ ಗೊತ್ತಿತ್ತು. ಅದಕ್ಕೆ ಅಂಬಿ ಕ್ಷೇತ್ರಕ್ಕೆ ಬರಲಿಲ್ಲ. ನಾವು ರಮ್ಯಾರಿಂದ ಪಾಠ ಕಲಿತಿದ್ದೇವೆ. ರಾಜಕಾರಣ ಹುಡುಗಾಟ ಅಲ್ಲ. ಜನರ ನೋವಿಗೆ ಸ್ಪಂದಿಸೋರು ನಮಗೆ ಬೇಕು. ಜನಪ್ರತಿನಿಧಿಗಳ ಆಯ್ಕೆ ವಿಚಾರದಲ್ಲಿ ಮಂಡ್ಯ ಜನ ಸಾಕಷ್ಟು ನೋವು ಉಂಡಿದ್ದಾರೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ ಎಲ್ಲೋ ಕೂತು ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತೇನೆ ಎನ್ನುವವರನ್ನ ಮಂಡ್ಯ ಜನ ಗೆಲ್ಲಿಸಲ್ಲ. ದೇವೇಗೌಡರ ಕುಟುಂಬ ಸೇವೆಯಿಂದ ಮಂಡ್ಯ ಬೆಳೆದು ಬಂದಿದೆ. ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧಿಸುವಲ್ಲಿ ಅರ್ಥವಿದೆ. ನಿಖಿಲ್ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ರಾಜಕಾರಣ ಮಾಡಿದ್ದಾರೆ. ಆದ್ರೆ ಸುಮಲತಾ ಗೆದ್ದ ಮೇಲೆ ಅವರನ್ನ ಎಲ್ಲಿ ಹುಡುಕಲು ಸಾಧ್ಯ. ಮಂಡ್ಯ ಕ್ಷೇತ್ರ ಕಾಂಗ್ರೆಸ್ಸಿಗೆ ಹೋಗುತ್ತೋ, ಜೆಡಿಎಸ್‍ಗೆ ಸಿಗುತ್ತೋ ನನಗೆ ಗೊತ್ತಿಲ್ಲ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *