ಕಮಲ್ ಭೇಟಿಯಾದ ಕೇಜ್ರಿವಾಲ್: ಇಬ್ಬರ ನಡುವೆ ಏನು ಮಾತುಕತೆ ನಡೆದಿದೆ?

Public TV
2 Min Read

ಚೆನ್ನೈ: ಸ್ವಂತ ಪಕ್ಷ ಸ್ಥಾಪಿಸುವ ಅಧಿಕೃತ ಸೂಚನೆಯನ್ನು ನೀಡಿರುವ ತಮಿಳು ನಟ ಕಮಲ್ ಹಾಸನ್‍ರ ರಾಜಕೀಯ ನಡೆಗಳು ಕುತೂಹಲವನ್ನು ಹುಟ್ಟಿಸುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದು ಕಮಲ್ ಮನೆಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭೇಟಿ ನೀಡಿದ್ದು ಹೊಸ ರಾಜಕೀಯ ಚಿಂತನೆಗಳಿಗೆ ಕಾರಣವಾಗಿದೆ.

ದೆಹಲಿ ಸಿಎಂ ಅರವಿಂದ್ ಕ್ರೇಜಿವಾಲ್‍ರನ್ನು ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವತಃ ಕಮಲ್ ಹಿರಿಯ ಪುತ್ರಿ ಅಕ್ಷರ ಹಾಸನ್ ಸ್ವಾಗತಿಸಿದರು. ಕಳೆದ ಒಂಬತ್ತು ದಿನಗಳಿಂದ ಮಹಾರಾಷ್ಟ್ರದಲ್ಲಿ ಧ್ಯಾನವನ್ನು ಕೈಗೊಂಡಿದ್ದ ಕೇಜ್ರಿವಾಲ್ ಧ್ಯಾನದ ವಿರಾಮದಲ್ಲಿ ಚೆನ್ನೈಗೆ ಭೇಟಿ ನೀಡಿದ್ದರು.

ನಾನು ಕಮಲ್ ಹಾಸನ್ ಅವರ ಉತ್ತಮ ಕಾರ್ಯಗಳ ಬಹುದೊಡ್ಡ ಅಭಿಮಾನಿಯಾಗಿದ್ದು, ಪ್ರಸ್ತುತ ದೇಶದಲ್ಲಿ ಹಲವು ಕೋಮು ಶಕ್ತಿಗಳು ಬಲ ಪಡೆದುಕೊಳ್ಳುತ್ತಿವೆ ಎಂಬ ಭಾವನೆಯನ್ನು ಜನರು ವ್ಯಕ್ತಪಡಿಸಿದ್ದಾರೆ. ನಮ್ಮಿಬ್ಬರ ಭೇಟಿಯಲ್ಲಿ ಉತ್ತಮ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಕೇಜ್ರಿವಾಲ್ ತಿಳಿಸಿದರು.

ನಂತರ ಮಾತನಾಡಿದ ಕಮಲ್, ನನ್ನ ಮನೆ ಹಲವು ದಿನಗಳಿಂದ ರಾಜಕೀಯ ಚಟುಟಿಕೆಗಳ ತಾಣವಾಗಿದೆ. ನಮ್ಮ ತಂದೆಯ ಅವಧಿಯಲ್ಲಿಯೂ ಇದೇ ರೀತಿ ಇತ್ತು. ನಾನು ಅದನ್ನು ದೂರ ಮಾಡಿದ್ದೆ. ಆದರೆ ಇಂದು ರಾಜಕೀಯ ಪ್ರವೇಶವನ್ನು ಪಡೆಯುತ್ತಿರುವ ನನಗೆ ಕೆಲವು ಸಲಹೆಗಳನ್ನು ನೀಡಲು ಅರವಿಂದ್ ಕೇಜ್ರಿವಾಲ್ ಆಗಮಿಸಿದ್ದರು ಎಂದು ಹೇಳಿದರು.

ಕಮಲ್ ರಾಜಕೀಯ ಪ್ರವೇಶ ಖಚಿತವಾದ ನಂತರ ಭೇಟಿ ಮಾಡುತ್ತಿರುವ ಎರಡನೇ ಮುಖ್ಯಮಂತ್ರಿ ಕೇಜ್ರಿವಾಲ್ ಆಗಿದ್ದು, ಈ ಮೊದಲು ಕೇರಳ ಸಿಎಂ ಪಿಣರಾಯಿ ವಿಜಯನ್‍ರನ್ನು ಭೇಟಿ ಮಾಡಿ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿದ್ದರು. ಈ ಹಿಂದೆ ಕಮಲ್ ಹಾಗೂ ಕೇಜ್ರಿವಾಲ್ ಭೇಟಿ 2015 ರ ಸಿನಿಮಾ ಚಿತ್ರೀಕರಣ ಸಮಯದಲ್ಲಿ ನಡೆದಿತ್ತು.

ಪ್ರಸ್ತುತ ಕಮಲ್ ತಮಿಳು ಅವತರಣಿಕೆಯ ಬಿಗ್‍ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಕಳೆದ ಕೆಲವು ತಿಂಗಳಿಂದ ತಮಿಳುನಾಡಿನ ರಾಜಕೀಯದಲ್ಲಿ ಕಾಣಿಸಿಕೊಂಡಿರುವ ಅಸ್ಥಿರತೆಯ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡುವ ಮೂಲಕ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

ಕೆಲ ದಿನಗಳ ಹಿಂದೆ ಮಾಧ್ಯಮಗಳು ಕಮಲ್ ರಾಜಕೀಯ ಪ್ರವೇಶದ ಕುರಿತು ಪ್ರಶ್ನಿಸಿದಾಗ, ನಾನು ಈ ಕುರಿತು ಮಹತ್ವದ ಚಿಂತನೆಗಳನ್ನು ನಡೆಸುತ್ತಿದ್ದು, ಯಾವುದಾದರು ರಾಜಕೀಯ ಪಕ್ಷವು ತನ್ನ ಚಿಂತನೆಗೆ ಸೂಕ್ತ ಎನಿಸುವ ವೇದಿಕೆಯನ್ನು ಒದಗಿಸಿಕೊಡುವ ಸಾಧ್ಯತೆಗಳಿವೆಯೇ ಎಂದು ಮಾಧ್ಯಮಗಳಿಗೆ ಮರು ಪ್ರಶ್ನಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *