ಹಿಟ್ಲರ್ ಪಕ್ಷ ಎಂದು ಕರೆಸಿಕೊಳ್ಳಲು ನಮಗೆ ಹೆಮ್ಮೆಯಿದೆ- ಕಾಂಗ್ರೆಸ್‌ಗೆ ವಿಜಯೇಂದ್ರ ಟಾಂಗ್

Public TV
3 Min Read

ತುಮಕೂರು: ಕಾಂಗ್ರೆಸ್ (Congress) ಪಕ್ಷದವರು ಬಿಜೆಪಿಯನ್ನು ಹಿಟ್ಲರ್ ಪಕ್ಷ (Hitler Party) ಎಂದು ಟೀಕೆ ಮಾಡುತ್ತಾರೆ. ಹಾಗೆ ಕರೆಸಿಕೊಳ್ಳುವುದಕ್ಕೆ ನಮಗೆ ಹೆಮ್ಮೆಯಿದೆ ಎಂದು ಬಿಜೆಪಿ (BJP) ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ (B. Y. Vijayendra) ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದರು.

ತುಮಕೂರು (Tumakuru) ಜಿಲ್ಲೆಯ ಗುಬ್ಬಿಯಲ್ಲಿ ನಡೆದ ಬಿಜೆಪಿ ಓಬಿಸಿ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಇಷ್ಟು ವರ್ಷ ಆಡಳಿತ ನಡೆಸಿದ್ದರೂ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿದ್ದ ಹಿಂಸಾಚಾರವನ್ನು ತಡೆಯಲು ಆಗಲಿಲ್ಲ. ಆದರೆ ಪ್ರಧಾನಿ ಮೋದಿ ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370ನ್ನು (Article 370) ಕಿತ್ತೊಗೆಯುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ. ನಿಮಗೆ ಯಾಕೆ ಇದನ್ನು ಮಾಡಲು ಆಗಲಿಲ್ಲ. ನೀವು ಹಿಟ್ಲರ್ ಪಕ್ಷ ಎಂದು ಕರೆಯುತ್ತಿದ್ದೀರಲ್ಲಾ, ಆ ಬಿಜೆಪಿ ಪಕ್ಷ ಇದನ್ನು ಮಾಡಿ ತೋರಿಸಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಬೆಂಗಳೂರಿಗೆ ಆರೋಗ್ಯಕ್ಕಾಗಿ ವಿಶೇಷ ವ್ಯವಸ್ಥೆ ರೂಪಿಸಲಾಗುತ್ತಿದೆ: ಬೊಮ್ಮಾಯಿ

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಡಳಿತಕ್ಕೆ ಬಂದು ಎಂಟೂವರೆ ವರ್ಷ ತುಂಬಿದೆ. ಆದರೆ ವಿರೋಧ ಪಕ್ಷದವರಿಗೆ ಬಿಜೆಪಿ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಆರೋಪ ಮಾಡಲು ಆಗುತ್ತಿಲ್ಲ. ಒಂದೇ ಒಂದು ರಜೆ ತೆಗೆದುಕೊಳ್ಳದೆ ಮೋದಿ ಕೆಲಸ ಮಾಡುತ್ತಿದ್ದಾರೆ. ವಿಶ್ವದ ಎಲ್ಲಾ ಅಗ್ರಗಣ್ಯ ನಾಯಕರನ್ನು ಬದಿಗೊತ್ತಿ ನಮ್ಮ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ರಾಹುಲ್ ಗಾಂಧಿಯವರು ಜಮ್ಮುವಿನಲ್ಲಿರುವ ಲಾಲ್ ಚೌಕ್‌ನಲ್ಲಿ ಭಾರತದ ಧ್ವಜ ಹಾರಿಸಿದರು. ಅವರು ಅಲ್ಲಿ ಧ್ವಜ ಹಾರಿಸಲು ಸಾಧ್ಯವಾದದ್ದು ಪ್ರಧಾನಿ ಮೋದಿಯವರ (Narendra Modi) ಕೆಲಸದಿಂದ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸ್ವಲ್ಪ ಉಸಿರಾಡುತ್ತಿದೆ. ಆದರೆ ಆರುವ ದೀಪ ಜೋರಾಗಿ ಉರಿಯುತ್ತದೆ ಎಂದು ಹಿರಿಯರು ಒಂದು ಮಾತು ಹೇಳುತ್ತಾರೆ. ಅಂತಹ ಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ. ಜೆಡಿಎಸ್ (JDS) ಪಕ್ಷದವರು ರಾಜ್ಯದಲ್ಲಿ ಹೇಗಾದರೂ ಹಂಗ್ ಅಸೆಂಬ್ಲಿ ಆಗಲಿ ಎಂದು ಕಾಯುತ್ತಿದ್ದಾರೆ. ಹೀಗಾಗಿ ಫ್ಲೆಕ್ಸ್‌ ಗಳಲ್ಲಿ ಕುಮಾರಸ್ವಾಮಿಯವರು (H.D.Kumaraswamy) ಕೈ ಕಟ್ಟಿ ಗಂಭೀರವಾಗಿ ನೋಡುತ್ತಿದ್ದಾರೆ. ಅದು ರಾಜ್ಯದ ಅಭಿವೃದ್ಧಿ ಬಗ್ಗೆ ಅಲ್ಲ. ಕಾಂಗ್ರೆಸ್‌ನವರಿಗೆ ಜಾಸ್ತಿ ಸೀಟ್ ಬರುತ್ತದೋ? ಬಿಜೆಪಿಗೆ ಜಾಸ್ತಿ ಸೀಟ್ ಬರುತ್ತದೋ? ನಾವು ಯಾರ ಜೊತೆ ಹೋಗಬೇಕು ಎಂದು ಯೋಚನೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಬೊಮ್ಮಾಯಿಯವರೇ, ನಡುಬಗ್ಗಿಸಿ ಇನ್ನೆಷ್ಟು ದಿನ ನಿಲ್ತೀರಿ? ಸ್ವಾಭಿಮಾನಿಯಾಗಿ ಧ್ವನಿ ಎತ್ತಿ: ಜೆಡಿಎಸ್

ಕೇವಲ ನಗರಕ್ಕೆ ಸೀಮಿತವಾಗಿದ್ದ ಬಿಜೆಪಿ ಪಕ್ಷವನ್ನು ಗ್ರಾಮೀಣ ಭಾಗಕ್ಕೂ ಮುಟ್ಟಿಸಿದ ಕೀರ್ತಿ ಯಡಿಯೂರಪ್ಪನವರದ್ದು. ಇವತ್ತು ಯಡಿಯೂರಪ್ಪನವರು (B.S.Yediyurappa) ಮುಖ್ಯಮಂತ್ರಿಯೂ ಅಲ್ಲ, ಪಕ್ಷದ ಅಧ್ಯಕ್ಷರೂ ಅಲ್ಲ. ವಿರೋಧ ಪಕ್ಷಗಳು ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದಂತೆ, ಮನೆಗೆ ಹೋಗಿ ಮಲಗಿ ಬಿಡುತ್ತಾರೆ ಅಂದುಕೊಂಡಿದ್ದರು. ಆದರೆ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾ ಇದ್ದಹಾಗೆಯೇ ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಹೋರಾಟ ಮಾಡುತ್ತೇನೆ ಎಂದರು. ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ವಾತಾವರಣ ಇದೆ. ಹೀಗಾಗಿ ನಾವು ಯಾರೂ ಮೈಮರೆಯಬಾರದು. ಪಕ್ಷವನ್ನು ಅಧಿಕಾರಕ್ಕೆ ತರುವವರೆಗೂ ಹೋರಾಟ ನಿಲ್ಲಿಸಬಾರದು ಎಂದು ಹೇಳಿದರು. ಇದನ್ನೂ ಓದಿ: ತಮಿಳಿನ ಮತ್ತೊಂದು ಸಿನಿಮಾ ಶೂಟಿಂಗ್ ನಲ್ಲಿ ಶಿವರಾಜ್ ಕುಮಾರ್

ಕಳೆದ ಕೆಲವು ದಿನಗಳ ಹಿಂದೆ ನಾವೆಲ್ಲಾ ನಾಯಕರು ಸೇರಿ ಒಂದು ಸಭೆ ಮಾಡಿದ್ದೆವು. ರಾಜ್ಯದಲ್ಲಿ ಹಿಂದೆ ಯಾವತ್ತೂ ಬಿಜೆಪಿ ಗೆದ್ದಿರದ ಮತ್ತು ಮುಂದಿನ ಬಾರಿ ಗೆಲ್ಲಬಹುದಾದ ಕ್ಷೇತ್ರಗಳನ್ನು ಆ ಸಭೆಯಲ್ಲಿ ಪಟ್ಟಿ ಮಾಡಿದೆವು. ಬಿಜೆಪಿ ಮುಂದಿನ ಬಾರಿ ಗೆಲ್ಲಬಹುದಾದ ಕ್ಷೇತ್ರಗಳ ಪಟ್ಟಿಯಲ್ಲಿ ಗುಬ್ಬಿ ಕ್ಷೇತ್ರದ ಹೆಸರನ್ನ ಮೊದಲು ಬರೆದಿದ್ದೇವೆ. ಗುಬ್ಬಿ ಮತದಾರರೂ ಕೂಡ ಮೊದಲ ಬಾರಿ ಬಿಜೆಪಿ ಬಾವುಟವನ್ನು ಹಾರಿಸಲು ಸಜ್ಜಾಗಿದ್ದಾರೆ. ಮತದಾರರೇನೋ ಸಜ್ಜಾಗಿದ್ದಾರೆ. ಆದರೆ ವೇದಿಕೆ ಮೇಲೆ ಕುಳಿತಿರುವ ನಮ್ಮ ಮುಖಂಡರು ಮೊದಲು ಒಂದಾಗಬೇಕು. ನಮ್ಮ ನಮ್ಮ ಹೆಸರುಗಳಿಗೆ ಜೈಕಾರ ಹಾಕಿಸಿಕೊಳ್ಳುವ ಮುನ್ನ, ಭಾರತೀಯ ಜನತಾ ಪಾರ್ಟಿಗೆ ಜಯವಾಗಲಿ ಎನ್ನುವ ಜೈಕಾರ ಹಾಕಬೇಕು. ಆಗ ಖಂಡಿತ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಭೋರ್ಗರೆವ ತೀರದಲ್ಲಿ ಹೊಯ್ಗೆಯ ಅರಮನೆ!

ಯಾವ ರೀತಿ ಗಡಿಯಲ್ಲಿ ದೇಶ ಕಾಯುವ ಯೋಧ, ತನ್ನ ಕುಟುಂಬದ ಬಗ್ಗೆ ಯೋಚನೆ ಮಾಡದೇ, ಹೆಂಡತಿ ಮಕ್ಕಳ ಬಗ್ಗೆ ಯೋಚನೆ ಮಾಡದೇ ಹೋರಾಟ ಮಾಡುತ್ತಾನೋ, ಅದೇ ರೀತಿ ನಮ್ಮ ಕಾರ್ಯಕರ್ತರು ಕೂಡ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ಸಲುವಾಗಿ ಕೆಲಸ ಮಾಡಬೇಕಿದೆ. ಗುಬ್ಬಿ ಕ್ಷೇತ್ರದಲ್ಲಿ ಕೂಡ ಶಾಸಕರು ಆಯ್ಕೆಯಾಗಿ ಬರಬೇಕು. ಅಭ್ಯರ್ಥಿಗಳು ಯಾರು ಎಂದು ಯೋಚನೆ ಮಾಡದೇ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದರು. ಇದನ್ನೂ ಓದಿ: ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

Share This Article
Leave a Comment

Leave a Reply

Your email address will not be published. Required fields are marked *