ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆಯುವ ಕೆಲಸಕ್ಕೆ ಕೈ ಹಾಕಲ್ಲ: ಶೋಭಾ ಕರಂದ್ಲಾಜೆ

Public TV
1 Min Read

ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆಯುವ ಕೆಲಸಕ್ಕೆ ಬಿಜೆಪಿ ಕೈ ಹಾಕುವುದಿಲ್ಲ. ಕಾಂಗ್ರೆಸ್ ಅಥವಾ ಜೆಡಿಎಸ್ ನಲ್ಲಿ ವ್ಯತ್ಯಾಸ ಆದರೆ ಅದು ಅವರ ಪಕ್ಷದ ಸಮಸ್ಯೆ. ನಾವು ಅವರ ಪಕ್ಷದ ಯಾವುದೇ ಆಂತರಿಕ ವಿಚಾರಕ್ಕೆ ಕೈ ಹಾಕಲ್ಲ. ಅವರಿಗೆ ಅವರ ಶಾಸಕರ ಮೇಲೆ ವಿಶ್ವಾಸ ಇಲ್ಲದೇ ಕೂಡಿ ಹಾಕಿದ್ದಾರೆ. ಅವರನ್ನು ಗೆಲ್ಲಿಸಿದ ಜನರ ವಿಜಯೋತ್ಸವದಲ್ಲಿ ಕೂಡಾ ಈ ಶಾಸಕರು ಭಾಗವಹಿಸದೇ ಉಳಿದಿದ್ದಾರೆ ಎಂದು ಸಂಸದೆ ಹಾಗು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ವ್ಯಂಗ್ಯ ಮಾಡಿದ್ದಾರೆ.

ರಾಜ್ಯದ ಏಕೈಕ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದ್ದು, ಈ ಕಾರಣಕ್ಕಾಗಿಯೇ ನಾವು ಸ್ಪೀಕರ್ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದೆ. ಈ ಸರ್ಕಾರ ಎಷ್ಟು ದಿನ ನಡೆಯುತ್ತದೆ ಎಂದು ನಾವೂ ನೋಡುತ್ತಿದ್ದೇವೆ. ಎಷ್ಟು ಕ್ಷೇತ್ರಗಳಲ್ಲಿ ಜೆಡಿಎಸ್ ಠೇವಣಿ ಕಳೆದುಕೊಂಡಿದ್ದೆ ಎಂಬುದನ್ನು ನೋಡಿಕೊಂಡು ಮುಖ್ಯಮಂತ್ರಿಗಳು ಪ್ರಧಾನಿ ಮೋದಿಯವರ ಬಗ್ಗೆ ಮಾತನಾಡಬೇಕು ಎಂದು ಕಿಡಿಕಾರಿದ್ರು.

ಕಾಂಗ್ರೆಸ್ ಪಕ್ಷ ಹೇಗೆ ಯೂಸ್ ಆಂಡ್ ಥ್ರೋ ಮಾಡುತ್ತದೆ ಎಂಬುದಕ್ಕೆ ನಿನ್ನೆಯ ಕಾರ್ಯಕ್ರಮ ಸಾಕ್ಷಿಯಾಗಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ನಡೆಸಿಕೊಂಡ ರೀತಿಯೇ ಉದಾಹರಣೆಯಾಗಿದೆ. ಕೇವಲ ಕುರುಬರ ಮತವನ್ನು ಪಡೆಯಲು ಮಾತ್ರ ಅವರನ್ನು ಬಳಕೆ ಮಾಡಿಕೊಳ್ಳಲಾಗಿದೆ. ಮೊನ್ನೆಯ ತನಕ ಸಿದ್ದರಾಮಯ್ಯ ಅವರನ್ನು ಯಾವ ರೀತಿ ಬಳಸಿಕೊಂಡು ನಡು ನೀರಿನಲ್ಲಿ ಕೈಬಿಟ್ಟಿದೆ ಎಂಬುವುದು ಎಲ್ಲರಿಗೂ ತಿಳಿಸಿದೆ. ಆದರೆ ಬಿಜೆಪಿ ಪಕ್ಷಕ್ಕೆ ಸಿದ್ದರಾಮಯ್ಯ ಅವರ ಮೇಲೆ ಯಾವುದೇ ಸಾಫ್ಟ್ ಕಾರ್ನರ್ ಇಲ್ಲ ಎಂದು ಇದೇ ವೇಳೆ ಸ್ಪಷ್ಟನೆ ನೀಡಿದರು.

ಇಂದು ನಗರದ ಶಾಂಗ್ರಿಲಾ ಹೋಟೆಲ್ ನಲ್ಲಿ ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿಗಳ ಸಭೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿಟಿ ರವಿ, ಕೇಂದ್ರ ಸಚಿವ ಅನಂತಕುಮಾರ್ ಸೇರಿದಂತೆ ಪರಾಜಿತ ಎಲ್ಲ ಅಭ್ಯರ್ಥಿಗಳು ಭಾಗಿಯಾಗಿದ್ರು.

Share This Article
Leave a Comment

Leave a Reply

Your email address will not be published. Required fields are marked *