ಕುಡಿಯಲು ನೀರು ಕೊಟ್ಟಿದ್ದಾರೆ ಎಂದು ಸಂಭ್ರಮಿಸಲು ಸಾಧ್ಯವಿಲ್ಲ: ಎಚ್‍ಡಿಡಿ

Public TV
1 Min Read

ನವದೆಹಲಿ: ಕುಡಿಯಲು ನೀರು ಕೊಟ್ಟಿದ್ದಾರೆ ಎಂದು ಸಂಭ್ರಮಿಸಲು ಸಾಧ್ಯವಿಲ್ಲ, ನಮ್ಮ ಪಾಲಿನ ನೀರಿನ ಮೇಲೆ ನಮಗೆ ಸಂಪೂರ್ಣವಾದ ಹಕ್ಕು ಇದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ ನೀಡಿದ್ದಾರೆ.

ಮಹದಾಯಿ ನ್ಯಾಯಾಧಿಕರಣದ ಐತೀರ್ಪು ಕುರಿತು ಮಾತನಾಡಿದ ಅವರು, ತೀರ್ಪನ್ನು ನಾನು ಅಧ್ಯಯನ ಮಾಡಲು ಸಾಧ್ಯವಾಗಿಲ್ಲ. ಬೆಂಗಳೂರಿಗೆ ತೆರಳಿದ ಮೇಲೆ ಸಂಕೀಪ್ತವಾಗಿ ಅಧ್ಯಯನ ಮಾಡುತ್ತೇನೆ. ಈಗ ಸದ್ಯ ಕುಡಿಯುವ ನೀರು ಕೊಟ್ಟಿದ್ದಾರೆಂದು ಸಂಭ್ರಮಿಸಲು ಸಾಧ್ಯವಿಲ್ಲ, ನಮ್ಮ ಪಾಲಿನ ನೀರಿನ ಮೇಲೆ ಸಂಪೂರ್ಣವಾಗಿ ಹಕ್ಕು ಚಲಾಯಿಸುವ ಅಧಿಕಾರವನ್ನು ನಾವು ಹೊಂದಿದ್ದೇವೆ ಎಂದು ತಿಳಿಸಿದರು.

ಅಲ್ಲದೇ ಗೋವಾ ಸುಪ್ರೀಂ ಕೋರ್ಟ್ ಗೆ ಹೋಗುವ ಸಾಧ್ಯತೆ ಇದ್ದು, ನಾವು ಕೂಡ ಮುಂದಿನ ಕಾನೂನು ಹೋರಾಟ ಮಾಡಬೇಕಾಗುತ್ತದೆ. ಈ ಮೊದಲು ಕಾವೇರಿ ವಿಷಯದಲ್ಲೂ ತೀರ್ಪನ್ನು ಓದಿ ಹಿರಿಯ ವಕೀಲ ನಾರೀಮನ್ ಜೊತೆ ಚರ್ಚಿಸಿದ್ದೆ. ತೀರ್ಪಿನ ಅಧ್ಯಯನ ಮಾಡಿದ ನಂತರ ಮುಂದೆ ಯಾವ ಕ್ರಮ ಕೈಗೊಳ್ಳಬೇಕೆಂದು ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.

ಈ ವೇಳೆ ಏರ್ ಶೋ ಸ್ಥಳಾಂತರ ಕುರಿತು ಪ್ರತಿಕ್ರಿಯಿಸಿ, ಬೆಂಗಳೂರಿನಲ್ಲಿ ಏರ್ ಶೋ ಚೆನ್ನಾಗಿ ನಡೆಯುತ್ತಿದ್ದು, ಏರ್ ಶೋ ವಿಶ್ವ ಮಟ್ಟದಲ್ಲಿಯೂ ಹೆಸರುಗಳಿಸಿದೆ. ಕೇಂದ್ರ ಸರ್ಕಾರ ಸರಿಯಾದ ಕಾರಣವನ್ನು ನೀಡದೆ ಸ್ಥಳ ಬದಲಾವಣೆ ಮಾಡುವುದು ಸರಿಯಲ್ಲ. ಈ ಕುರಿತು ಖುದ್ದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಪತ್ರ ಬರೆಯುತ್ತೇನೆ. ಅಲ್ಲದೇ ಕೇಂದ್ರದಲ್ಲಿ ಅನಂತಕುಮಾರ್ ಅವರಂಥ ಹಿರಿಯ ಸಚಿವರಿದ್ದರೂ ಹೀಗಾಗುತ್ತಿದೆ. ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದನಿಸುತ್ತಿದೆ. ಬೆಂಗಳೂರಿನಲ್ಲಿರುವ ಸೌಲಭ್ಯ ಬೇರೆಕಡೆ ಸಿಗಲು ಸಾಧ್ಯವಿಲ್ಲ. ಹೀಗಾಗಿ ಅಷ್ಟು ಸುಲಭವಾಗಿ ಏರ್ ಶೋ ಸ್ಥಳಾಂತರ ಮಾಡಲು ಸಾಧ್ಯವಿಲ್ಲ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=jzou-8fgwlc

Share This Article
Leave a Comment

Leave a Reply

Your email address will not be published. Required fields are marked *