ನೀರಿಲ್ಲದ್ದಕ್ಕೆ ದಾವಣಗೆರೆ ಆಸ್ಪತ್ರೆಯಲ್ಲಿ ಆಪರೇಷನ್ ಇಲ್ಲ!

Public TV
1 Min Read

ದಾವಣಗೆರೆ: ಇತ್ತೀಚಿನ ದಿನನಗಳಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿಲ್ಲ ಎಂದು ಆರೋಪಗಳು ಕೇಳಿ ಬರುತ್ತಿದ್ದರೆ, ದಾವಣಗೆರೆಯ ಇಎಸ್‍ಐ ಆಸ್ಪತ್ರೆಯಲ್ಲಿ ನೀರಿನ ಕೊರತೆಯಿಂದಾಗಿ ವೈದ್ಯಾಧಿಕಾರಿಗಳು ಆಪರೇಷನ್ ಮಾಡೋದನ್ನೇ ಮುಂದೂಡುತ್ತಿದ್ದಾರೆ.

ಹೌದು. ಕಳೆದ 15 ದಿನಗಳಿಂದ ನಗರದ ಇಎಸ್‍ಐ ಆಸ್ಪತ್ರೆಗೆ ನೀರಿನ ಸಮಸ್ಯೆಯಾಗಿದೆ. ಆಸ್ಪತ್ರೆಯಲ್ಲಿ ನೀರು ಸಿಗದೇ ರೋಗಿಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ವಾರದಿಂದಲೂ ಯಾರೊಬ್ಬರಿಗೂ ಅಪರೇಷನ್ ಮಾಡದ ಕಾರಣ ರೋಗಿಗಳಿಗೆ ನರಕಯಾತನೆ ಪಡುತ್ತಿದ್ದಾರೆ. ವೈದ್ಯರ ಬಳಿ ಅಪರೇಷನ್ ಮಾಡಿ ಅಂತ ಕೇಳಿದ್ರೆ ನಾಳೆ, ನಾಡಿದ್ದು ಎಂದು ದಿನ ದೂಡುತ್ತ ಬಂದಿದ್ದಾರೆ. ಇದರಿಂದ ಕೆಲ ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಈ ಸಮಸ್ಯೆಗೆ ಪರಿಹಾರವಿಲ್ಲವೇ ಎಂದು ಪಬ್ಲಿಕ್ ಟಿವಿ ಇಎಸ್‍ಐ ಆಸ್ಪತ್ರೆಯ ಸೂಪರಿಡೆಂಟ್ ಪ್ರಕಾಶ್ ಅವರನ್ನು ಪ್ರಶ್ನಿಸಿದ್ದಕ್ಕೆ, ನಾವು ಏನು ಮಾಡಲು ಸಾಧ್ಯ? ಈ ಬಗ್ಗೆ ಪಾಲಿಕೆ ಮೇಯರ್ ಅವರಿಗೆ ಕೇಳಿದ್ರೆ ಎರಡು ಟ್ಯಾಂಕರ್ ಮಾತ್ರ ಉಚಿತ ನೀಡುತ್ತೇವೆ. ನಂತರ ಪ್ರತಿ ಟ್ಯಾಂಕರ್ ಗೆ 675 ರೂಪಾಯಿ ಪಾವತಿ ಮಾಡಿ ನೀರು ಬಿಡಿಸಿಕೊಳ್ಳಿ ಎಂದು ತಿಳಿಸುತ್ತಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ನೀರು ಸಿಗುತ್ತಿಲ್ಲ. ಅಲ್ಲದೆ ನಮ್ಮ ಆಸ್ಪತ್ರೆಯಲ್ಲಿ ಇದ್ದ ಕೊಳವೆ ಬಾವಿ ಬತ್ತಿ ಹೋಗಿದ್ದರಿಂದ ನೀರು ಸಿಗದೇ ಅನಿವಾರ್ಯವಾಗಿ ನಾವು ಕೆಲಸ ಮಾಡುವುದನ್ನ ನಿಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯ ಕೃಷಿಕರಿಗೆ ಇಲ್ಲಿಯವರೆಗೆ ನೀರಿನ ಸಮಸ್ಯೆಯಾಗಿತ್ತು. ಆದರೆ ಈಗ ನೀರಿನ ಎಫೆಕ್ಟ್ ಆಸ್ಪತ್ರೆಯ ಮೇಲೆ ದುಷ್ಪರಿಣಾಮ ಬೀರಿದೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ.

 

Share This Article
Leave a Comment

Leave a Reply

Your email address will not be published. Required fields are marked *