ಬುಮ್ರಾ ವಿರುದ್ಧ ಕಾಲು ಕೆರೆದುಕೊಂಡು ಜಗಳಕ್ಕೆ ನಿಂತ 19ರ ಯುವ ಬ್ಯಾಟರ್‌!

Public TV
2 Min Read

ಸಿಡ್ನಿ: ಭಾರತ – ಆಸ್ಟ್ರೇಲಿಯಾ ನಡುವಿನ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿ ಈ ಬಾರಿ ವಿವಾದಗಳಿಂದಲೇ ಹೆಚ್ಚಾಗಿ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಕೊಹ್ಲಿ ವಿರುದ್ಧ ಜಗಳ ಮಾಡಿಕೊಂಡಿದ್ದ 19 ವರ್ಷದ ಆಸೀಸ್‌ ಬ್ಯಾಟರ್‌, ಇಸೀಗ ಬುಮ್ರಾ (Jasprit Bumrah) ವಿರುದ್ಧ ಕಿರೀಕ್‌ ಮಾಡಿಕೊಂಡಿದ್ದಾರೆ. ಕೇವಲ 2ನೇ ಪಂದ್ಯ ಆಡುತ್ತಿರುವ ಸ್ಯಾಮ್ ಕಾನ್‌ಸ್ಟಾಸ್ (Sam Konstas) ಭಾರತದ ಅನುಭವೀ ಆಟಗಾರ ಜಸ್ಪ್ರೀತ್ ಬುಮ್ರಾ ವಿರುದ್ಧ ಅನಗತ್ಯವಾಗಿ ಕಿರಿಕ್‌ ಮಾಡಲು ಮುಂದಾಗಿದ್ದಾರೆ.

ಆಸೀಸ್‌ ಆಟಗಾರರ (Australia Cricketer) ಕಿರಿಕ್‌ ಇಂದು ನಿನ್ನೆಯದ್ದಲ್ಲ.. ಕಾಂಗರೂ ಪಡೆ ಜಗಳ ಆಡದೇ ಇರುವ ತಂಡ ಜಗತ್ತಿನಲ್ಲಿ ಯಾವುದಾದರೂ ಇದ್ಯಾ? ಅದೇ ಪ್ರವೃತ್ತಿಯನ್ನ ಇದೀಗ ಯುವ ಬ್ಯಾಟರ್ ಸ್ಯಾಮ್‌ ಕಾನ್‌ಸ್ಟಾಸ್‌ ಮುಂದುವರಿಸಿದ್ದಾರೆ. ಈ ಹಿಂದೆ ಸಚಿನ್‌ ತೆಂಡೂಲ್ಕರ್‌ ಹಾಗೂ ವಿರಾಟ್‌ ಕೊಹ್ಲಿ (Virat Kohli) ವಿಚಾರದಲ್ಲೂ ಅನೇಕ ಬಾರಿ ಆಟಗಾರರು ಕಿರಿಕ್‌ ತೆಗೆದಿದ್ದಾರೆ. ಇದೀಗ ಕಾನ್ಸ್‌ಸ್ಟಾಸ್‌ ಬುಮ್ರಾ ಜೊತೆಗೆ ಬೇಕಂತಲೆ ಕಿರಿಕ್‌ ತೆಗೆದಂತೆ ಕಂಡುಬಂದಿದ್ದು, ಟೀಂ ಇಂಡಿಯಾ ಅಭಿಮಾನಿಗಳಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಚಾಂಪಿಯನ್‌ ಬೌಲರ್‌ ಬುಮ್ರಾ ವಿಕೆಟ್ ಕೀಳುವ ಸಾಮರ್ಥ್ಯ ತಿಳಿದ ಯಾವ ಬ್ಯಾಟರ್ ಕೂಡ ಅವರನ್ನು ಕೆಣಕಲು ಹೋಗಲ್ಲ. ಆದ್ರೆ ಇನ್ನೂ 2ನೇ ಪಂದ್ಯವನ್ನಷ್ಟೇ ಆಡುತ್ತಿರುವ ಕಾನ್‌ಸ್ಟಾಸ್‌ ಈ ದುಸ್ಸಾಹಸ ಮಾಡಿದ್ದಾರೆ. ಮೆಲ್ಬೋರ್ನ್‌ ಪಂದ್ಯ ಪ್ರಾರಂಭವಾಗುವ ಮೊದಲೇ ಬುಮ್ರಾ ವಿರುದ್ಧ ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡಿದ್ದ ಕಾನ್‌ಸ್ಟಾಸ್‌ ಪ್ರಥಮ ಇನ್ನಿಂಗ್ಸ್ ನಲ್ಲಿ ಹೇಳಿದಂತೆ ಮಾಡಿದ್ದರು. ಬುಮ್ರಾ ಎಸೆತಗಳನ್ನು ಬೌಂಡರಿ, ಸಿಕ್ಸರ್‌ಗಟ್ಟಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು. ಆದ್ರೆ 2ನೇ ಇನ್ನಿಂಗ್ಸ್‌ನಲ್ಲಿ ಸ್ಯಾಮ್‌ ಆಟಕ್ಕೆ ಬುಮ್ರಾ ಬ್ರೇಕ್‌ ಹಾಕಿದರು. ಕಾನ್‌ಸ್ಟಾಸ್ ಅವರನ್ನ ಕ್ಲೀನ್ ಬೌಲ್ಡ್ ಮಾಡಿದ್ದ ಬುಮ್ರಾ, ಅವರದ್ದೇ ರೀತಿಯಲ್ಲಿ ಸಂಭ್ರಮಿಸಿ ತಿರುಗೇಟು ಕೊಟ್ಟಿದ್ದರು.

ಅಲ್ಲದೇ ಆ ಪಂದ್ಯದಲ್ಲಿ ಕಾನ್‌ಸ್ಟಾಸ್‌ ಮತ್ತು ಕೊಹ್ಲಿ ನಡುವೆ ನಡೆದ ಡಿಕ್ಕಿ ಡ್ರಾಮಾ ಇಡೀ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿತ್ತು. ಅಲ್ಲದೇ ಕೊಹ್ಲಿಗೆ ಐಸಿಸಿ ಪಂದ್ಯ ಶುಲ್ಕದಲ್ಲಿ 20% ದಂಡ ವಿಧಿಸಿತ್ತು. ಇಡೀಗ ಪಂದ್ಯ ನಡೆಯುತ್ತಿರುವ ಸಿಡ್ನಿ ಮೈದಾನ ಕಾನ್‌ಸ್ಟಾಸ್‌ ತವರು ನೆಲ. ಹೀಗಾಗಿ ಇಲ್ಲಿ ಲೋಕಲ್ ಬಾಯ್ ಆಗಿರುವ ಕಾನ್ ಸ್ಟಾಸ್ ಆತ್ಮವಿಶ್ವಾಸ ತುಸು ಹೆಚ್ಚೇ ಇರುವಂತೆ ಭಾಸವಾಗುತ್ತಿದೆ. ಪ್ರಥಮ ದಿನದ ಆಟ ಮುಗಿಯುತ್ತಾ ಬರುತ್ತಿದ್ದಂತೆ ಬುಮ್ರಾ ಜೊತೆಗೆ ಕಾಲು ಕೆರೆದುಕೊಂಡು ಜಗಳಕ್ಕೆ ನಿಂತಿದ್ದಾರೆ.

ಕೊನೇ ಎಸೆತಕ್ಕೂ ಮುನ್ನ ಭಾರೀ ಹೈಡ್ರಾಮಾ
ದಿನದ ಅಂತ್ಯಕ್ಕೆ ಒಂದೇ ಒಂದು ಎಸೆತ ಬಾಕಿಯಿತ್ತು. ಆಸ್ಚ್ರೇಲಿಯಾದ ಮತ್ತೊಬ್ಬ ಆರಂಭಿಕ ಆಟಗಾರ ಉಸ್ಮಾನ್ ಖವಾಜ ಅವರು ಬುಮ್ರಾ ಬೌಲಿಂಗ್ ಮಾಡಲು ರನ್ ಅಪ್ ತೆಗೆದುಕೊಳ್ಳುತ್ತಿದ್ದಾಗ ಆಟವಾಡಲು ಸಿದ್ಧರಾಗಿರಲಿಲ್ಲ. ಇದಕ್ಕೆ ಬುಮ್ರಾ ಅವರು ಆಕ್ಷೇಪಿಸಿದರು. ಆಗ ಅನಗತ್ಯವಾಗಿ ಮಧ್ಯೆ ಪ್ರವೇಶಿಸಿದ ಕಾನ್ ಸ್ಟಾಪ್ ಬುಮ್ರಾ ಅವರನ್ನು ಬೌಲಿಂಗ್ ಮಾಡದಂತೆ ತಡೆದರು. ಈ ವೇಳೆ ಬುಮ್ರಾ ಅವರು ಕಾನ್ ಸ್ಟಾಸ್ ಗೆ ಏನು ಸಮಸ್ಯೆ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಕೊಂಚ ಮಾತಿನ ಚಕಮಕಿಯೂ ನಡೆಯಿತು. ತಕ್ಷಣವೇ ಅಂಪೈರ್‌ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಮುಂದಿನ ಎಸೆತದಲ್ಲೇ ಬುಮ್ರಾ, ಖವಾಜ ವಿಕೆಟ್‌ ಕಿತ್ತು ಸ್ಯಾಮ್‌ ಎದುರು ಸಂಬ್ರಮಿಸಿದರು.

Share This Article