ಬಳ್ಳಾರಿ: ಶಾಸಕ ಶ್ರೀರಾಮುಲು ಉದ್ಭವ ಮೂರ್ತಿಯೇ? ಅವರು ಬದಾಮಿಯಲ್ಲಿ ಹುಟ್ಟಿದ್ದಾರಾ? ಇಲ್ಲವೇ ಮೊಳಕಾಲ್ಮೂರಿನಲ್ಲಿ ಹುಟ್ಟಿದ್ದಾರಾ ಎಂದು ಪ್ರಶ್ನಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಜಿಲ್ಲೆಯ ಹಂಪಸಾಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ, ಉಗ್ರಪ್ಪ ಅವರು ಹೊರಗಿನವರು ಅಂತಾ ಹೇಳುವುದಕ್ಕೆ ಶ್ರೀರಾಮುಲು ಅವರಿಗೆ ನೈತಿಕತೆಯೇ ಇಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರು ಬದಾಮಿ ಹಾಗೂ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಹಾಗಾದರೆ ಅವರೇನು ಅಲ್ಲಿ ಹುಟ್ಟಿದ್ದರಾ ಎಂದು ಪ್ರಶ್ನಿಸಿದ್ದಾರೆ.
ಈ ಉಪಚುನಾವಣೆ ಅನಗತ್ಯವಾಗಿ ಬಂದಿದೆ. ಉಪ ಚುನಾವಣೆ ಬರಲು ಕಾರಣ ಯಾರು ಎಂದು ಪ್ರಶ್ನಿಸಿದ ಮಾಜಿ ಸಿಎಂ, ಬಿಜೆಪಿ ಅಭ್ಯರ್ಥಿ ಜೆ.ಶಾಂತ ಅವರು ಆಂಧ್ರಪ್ರದೇಶದ ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ಈ ಎಲ್ಲ ಅಂಶಗಳನ್ನು ಮರೆತು ಉಗ್ರಪ್ಪ ಹೊರಗಿನವರು ಎನ್ನುವುದು ಸರಿಯಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸುವ ಶ್ರೀರಾಮುಲು ಅವರು ಯಾವತ್ತೂ ಪೂರ್ಣ ಅವಧಿ ಮುಗಿಸಲ್ಲ. ಅವರು ಶಾಸಕರಾಗದಿದ್ದರೇ ವಿಧಾನಸಭೆ ನಡೆಯುದಿಲ್ಲವೇ? ಯಾವ ಪುರುಷಾರ್ಥಕ್ಕಾಗಿ ಲೋಕಸಭೆಗೆ ರಾಜೀನಾಮೆ ನೀಡಿ ಶಾಸಕರಾದರು ಎನ್ನುವ ಪ್ರಶ್ನೆಗೆ ಉತ್ತರಿಸಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv