ಹಾಸನ: ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ವಾಯುಪಡೆ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೋಹನ್ ಕುಮಾರ್ (28) ಆತ್ಮಹತ್ಯೆ ಮಾಡಿಕೊಂಡ ಯೋಧ. ಇವರು ಹಾಸನ ಜಿಲ್ಲೆ ಆಲೂರು ತಾಲೂಕಿನ ಕದಾಳು ಗ್ರಾಮದ ನಿವಾಸಿಯಾಗಿದ್ದು, ಎಂಟು ವರ್ಷಗಳಿಂದ ಹರಿಯಾಣದ ಶಿರಸ ಎಂಬಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಶುಕ್ರವಾರ ಕಚೇರಿಯಲ್ಲೇ ರೈಫಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಮೋಹನ್ ಡೆತ್ನೋಟ್ ಬರೆದಿಟ್ಟು ಶೌಚಗೃಹದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಇನ್ನೂ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೋಹನ್ ತಂದೆ ಕೂಡ ಹಾಲಿ ಸಿಆರ್ ಪಿಎಫ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೋಹನ್ ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಇಂದು ಸ್ವಗ್ರಾಮಕ್ಕೆ ಪಾರ್ಥೀವ ಶರೀರ ಆಗಮಿಸಲಿದ್ದು, ಸಂಜೆ ಅಂತ್ಯಕ್ರಿಯೆ ನಡೆಯಲಿದೆ.
ಡೆತ್ನೋಟ್:
ಪ್ರೀತಿಯ ಅಮ್ಮ ಮತ್ತು ಅಪ್ಪನಿಗೆ ನನ್ನ ನಮಸ್ಕಾರಗಳು. ಹುಟ್ಟಿನಿಂದ ಇಲ್ಲಿಯವರೆಗೆ ನಾನು ನಿಮಗೋಸ್ಕರ ಏನು ಮಾಡುವುದಕ್ಕೆ ಆಗಿಲ್ಲ. ಅಪ್ಪ-ಅಮ್ಮನಿಗೆ ಒಳ್ಳೆಯ ಮಗನಾಗದೇ ನಿಮಗೆ ಮೋಸಮಾಡಿದ್ದೇನೆ. ಅಣ್ಣನಿಗೆ ಒಳ್ಳೆಯ ತಮ್ಮನಾಗದೇ, ಕೊನೆಗೆ ಹೆಂಡತಿಗೆ ಒಳ್ಳೆಯ ಗಂಡನಾಗಿಲ್ಲ ಅನಿಸುತ್ತಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ, ಇಷ್ಟುದಿನ ಒಂದು ದಿನವೂ ಕೂಡ ನನ್ನನ್ನು ನೋಯಿಸದೆ ನೋಡಿಕೊಂಡಿದ್ದಕ್ಕೆ ನಿಮಗೆ ಚಿರಋಣಿಯಾಗಿರುತ್ತೇನೆ.
ನಿಮ್ಮ ಮನ ಮನಸ್ಸನ್ನು ನೋಯಿಸಿದ್ದಕ್ಕೆ ನಾನು ಕ್ಷಮೆ ಕೋರುತ್ತೇನೆ. ಮುಂದಿನ ಜನ್ಮ ಇದ್ದರೆ ನನಗೆ ನಿಮ್ಮ ಪ್ರೀತಿಯೇ ಸಿಗಲಿ. ಇನ್ನೂ ಮುಂದೆ ನಿಮಗೆ ಯಾವುದೇ ರೀತಿಯ ತೊಂದರೆ ಬರುವುದಿಲ್ಲ. ಅಮ್ಮ, ಅಣ್ಣ, ಅಪ್ಪ, ಯಾವಾಗಲೂ ನಾನು ನಿಮ್ಮ ಮನಸ್ಸಿನಲ್ಲಿಯೇ ಇರುತ್ತೇನೆ. ಮರೆಯದೇ ಕ್ಷಮಿಸಿ ನೆನಪಾದರೆ. Love you amma, love u chinnu take care. I will be soon ನನ್ನಿಂದ ಯಾರಿಗೂ ತೊಂದರೆಯಾಗಬಾರದು ಎಂದು ನೋವಿನಲ್ಲಿ ಬರೆದಿದ್ದಾರೆ.