ರಾಹುಲ್ ಜೆಟ್‌ ಪ್ರಶ್ನೆಗೆ ಬಿಜೆಪಿ ಪಾಕ್ ಪೋಸ್ಟರ್ – ಬಿರಿಯಾನಿ ತಿಂದವರು ಯಾರು? ಅಂತ ಕಾಂಗ್ರೆಸ್ ಕೌಂಟರ್

Public TV
2 Min Read

– ಪಹಲ್ಗಾಮ್ ಹತ್ಯೆಗೆ ಮೋದಿ ನಿರ್ಲಕ್ಷ್ಯ ಕಾರಣನಾ?

ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿ, ಆಪರೇಷನ್ ಸಿಂಧೂರ (Operation Sindoor) ಸಂಬಂಧ ಕಾಂಗ್ರೆಸ್-ಬಿಜೆಪಿ ಮಧ್ಯೆ ವಾಕ್ಸಮರ ಮುಂದುವರಿದಿದೆ.

ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ನಾವು ಎಷ್ಟು ವಾರ್‌ಜೆಟ್‌ಗಳನ್ನು (Fighter Jet) ಕಳೆದುಕೊಂಡಿದ್ದೇವೆ..? ವಿದೇಶಾಂಗ ಸಚಿವರ ಮೌನ ಶಾಪದಂತಿದೆ ಅಂತ ನಿನ್ನೆಯಷ್ಟೇ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ವಾಗ್ದಾಳಿ ನಡೆಸಿದ್ದರು. ಇದಕ್ಕೆ ಬಿಜೆಪಿ (BJP) ಕೌಂಟರ್ ಕೊಟ್ಟಿದ್ದು, ನಿಮ್ಮ ಪ್ರಶ್ನೆ ಪಾಕಿಸ್ತಾನದ ಸೇನಾ ನಾಯಕತ್ವದ ರೀತಿ ಇದೆ. ದೇಶ ಸೇನಾ ಕಾರ್ಯಾಚರಣೆಯನ್ನ ಟೀಕಿಸಿ, ಪಾಕಿಸ್ತಾನವನ್ನು ಪ್ರಶಂಸಿಸುವ ನಿಮ್ಮ ನಡೆ ಅಚ್ಚರಿಯೇನಲ್ಲ ಬಿಡಿ ಎಂದು ತಿರುಗೇಟು ನೀಡಿದೆ.

ನಿಮಗೆ ಪಾಕಿಸ್ತಾನದ (Pakistan) ಅತ್ಯುನ್ನತ ನಾಗರಿಕ ಪ್ರಶಸ್ತಿ ʻನಿಶಾನ್-ಎ-ಪಾಕಿಸ್ತಾನಿʼ ಕೊಡ್ಬೇಕು ಅಂತ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.

ಇದರಿಂದ ಕೆರಳಿರುವ ಕಾಂಗ್ರೆಸ್ ನಾಯಕರು, ಮೊರಾರ್ಜಿ ದೇಸಾಯಿಗೆ ಕೊಟ್ಟಂತೆಯೇ ʻನಿಶಾನ್ -ಎ- ಪಾಕಿಸ್ತಾನಿʼ ಪ್ರಶಸ್ತಿಯನ್ನು ಅವರ ನಾಯಕರಾದ ಅಡ್ವಾಣಿ ಹಾಗೂ ಕರೆಯದೇ ಇದ್ದರೂ ಪಾಕ್ ಪ್ರಧಾನಿ ನವಾಜ್ ಷರೀಫ್ ಮನೆಯಲ್ಲಿ ಬಿರಿಯಾನಿ ತಿಂದು ಬಂದರಲ್ಲ ಅಂಥವರಿಗೆ ಕೊಡ್ಬೇಕು ಎಂದು ಕೌಂಟರ್‌ ಕೊಟ್ಡಿದೆ.

ಅಲ್ಲದೆ, ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಗ್ಗೆ ಪಾಕಿಸ್ತಾನಕ್ಕೆ ಮೊದಲೇ ಮಾಹಿತಿ ರವಾನಿಸಿದ್ದೆವು ಅಂತ ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. ಈ ರೀತಿ ಮಾಹಿತಿ ಕೊಟ್ಟಿದ್ದಕ್ಕೇ ಮೋಸ್ಟ್ ವಾಂಟೆಡ್ ಉಗ್ರರಾದ ಅಜರ್ ಮಸೂದ್, ಹಫೀಜ್ ಸಯೀದ್ ಎಸ್ಕೇಪ್ ಆದರು. ಹಾಗಾಗಿ, ಜೈಶಂಕರ್ ಅವರೇ ʻಪಾಕ್ ಮಾಹಿತಿದಾರʼ ಅಂತ ಕಾಂಗ್ರೆಸ್ ಮಾಧ್ಯಮ ಮುಖ್ಯಸ್ಥ ಪವನ್ ಖೇರಾ ವಾಗ್ದಾಳಿ ನಡೆಸಿದ್ದಾರೆ.

ಇತ್ತ, ಬಳ್ಳಾರಿಯ ಹೊಸಪೇಟೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಹಲ್ಗಾಮ್ ದಾಳಿ ಕುರಿತು ಪ್ರಧಾನಿ ಮೋದಿ ವಿರುದ್ಧ ಕೆಂಡಕಾರಿದ್ದಾರೆ. ಪಹಲ್ಗಾಮ್‌ನಲ್ಲಿ ಮೋದಿ ಸರ್ಕಾರ ಸೆಕ್ಯೂರಿಟಿ ಕೊಟ್ಟಿಲ್ಲ. ಹೀಗಾಗಿ ಅಲ್ಲಿ ಜನರ ಕೊಲೆಯಾಯ್ತು. ಉಗ್ರರ ದಾಳಿ ಬಗ್ಗೆ ಮೋದಿಗೆ ಮೊದಲೇ ಗೊತ್ತಿತ್ತು. ಅದಕ್ಕೇ ತಮ್ಮ ಭೇಟಿ ಕ್ಯಾನ್ಸಲ್ ಮಾಡಿಕೊಂಡ್ರು. ಆದರೆ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಗಾಂಧೀಜಿ ಅವರು ದೇಶಕ್ಕಾಗಿ ಪ್ರಾಣಕೊಟ್ಟಿದ್ದಾರೆ. ಕಾಂಗ್ರೆಸಿಗರಿಗೆ ದೇಶವೇ ಮೊದಲು. ಆದರೆ, ಬಿಜೆಪಿಗರಿಗೆ ಮೋದಿಯೇ ಮೊದಲು. ಸರ್ವಪಕ್ಷ ಸಭೆಯಲ್ಲಿ ಯುದ್ಧಕ್ಕೆ ಸಮ್ಮತಿ ಕೊಟ್ಟಿದ್ದೆವು. ಆದರೆ, ಸರ್ವಪಕ್ಷ ಸಭೆಗೆ ಚಕ್ಕರ್ ಹಾಕಿದ ಮೋದಿ ಬಿಹಾರದ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದರು ಅಂತ ವಾಗ್ದಾಳಿ ನಡೆಸಿದ್ದಾರೆ.

Share This Article