ರಾಯಚೂರು: ಇಂದು ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮ ಸಹೋದರನಿಗೆ ಮತ ಹಾಕುವಂತೆ ಹಣ ಹಂಚಲು ಹೋಗಿದ್ದ ರಾಯಚೂರಿನ ಮಾನ್ವಿ ಜೆಡಿಎಸ್ ಶಾಸಕ ರಾಜಾ ವೆಂಕಟಪ್ಪ ನಾಯಕ್ ಗೆ ಮತದಾರರು ಛೀಮಾರಿ ಹಾಕಿ ವಾಪಸ್ ಕಳುಹಿಸಿದ್ದಾರೆ.
ಮಾನ್ವಿ ಪುರಸಭೆ 19 ನೇ ವಾರ್ಡ್ ಗೆ ಶಾಸಕನ ಸಹೋದರ ರಾಜಾ ಮಹೇಂದ್ರ ನಾಯಕ್ ಜೆಡಿಎಸ್ ನಿಂದ ಸ್ಪರ್ಧಿಸಿದ್ದಾರೆ. ಹೀಗಾಗಿ ಮತದಾರರನ್ನು ಸೆಳೆಯಲು ಹಣ ಹಂಚಲು ಹೋಗಿದ್ದ ಶಾಸಕರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕರಾಗಿ ಹಣ ಹಂಚಲು ಬಂದಿದ್ದಿರಾ ಅಂತ ಜನ ಛೀಮಾರಿ ಹಾಕಿದ್ದಾರೆ. ಮಧ್ಯರಾತ್ರಿ ಹಣ ಹಂಚಲು ಹೋದ ಶಾಸಕರನ್ನ ಮತದಾರರು ಬೈದು ಕಳುಹಿಸಿದ್ದಾರೆ.
ಶತಕ ಬಾರಿಸಿದ ಬೆನ್ನಲ್ಲೇ ದೋಸ್ತಿ ಸರ್ಕಾರಕ್ಕೆ ಮತ್ತು ವಿಪಕ್ಷ ಬಿಜೆಪಿಗೆ ಲೋಕಲ್ ಟೆಸ್ಟ್ ಶುರುವಾಗಿದೆ. ರಾಜ್ಯದ 22 ಜಿಲ್ಲೆಗಳಲ್ಲಿ ಮೊದಲ ಹಂತದ ಸ್ಥಳೀಯ ಸಂಸ್ಥೆ ಚುನಾವಣೆ ಆರಂಭವಾಗಿದೆ. ರಾಜ್ಯದ ಮೂರು ಮಹಾನಗರ ಪಾಲಿಕೆ ಸೇರಿ 102 ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆಯುತ್ತಿದೆ. ಬೆಳ್ಳಂಬೆಳಗ್ಗೆ ಜನ ಉತ್ಸಾಹದಿಂದ ಸಾಲುಗಟ್ಟಿ ನಿಂತು ಹಕ್ಕು ಚಲಾಯಿಸ್ತಿದ್ದಾರೆ. ಗದಗ, ಬೆಳಗಾವಿಯ ಗೋಕಾಕ್ನಲ್ಲಿ ಮತಯಂತ್ರಕ್ಕೆ ಪೂಜೆ ಸಲ್ಲಿದ ಬಳಿಕ ಮತದಾನ ಆರಂಭವಾಗಿದೆ. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿಯಿಂದ ಪರಸ್ಪರ ಕಲ್ಲು ತೂರಾಟ – ಇಬ್ಬರಿಗೆ ಗಾಯ, ಬಿಗಿ ಪೊಲೀಸ್ ಬಂದೋಬಸ್ತ್
ಉಡುಪಿ, ಮೈಸೂರು, ತುಮಕೂರು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ, 22 ಜಿಲ್ಲೆಗಳ 29 ನಗರಸಭೆ, 53 ಪುರಸಭೆ, 20 ಪಟ್ಟಣ ಪಂಚಾಯಿತಿಗಳಿಗೆ ಎಲೆಕ್ಷನ್ ನಡೆಯುತ್ತಿದೆ. ಒಟ್ಟು 2634 ವಾರ್ಡ್ಗಳಲ್ಲಿ 9,121 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದು ಅದೃಷ್ಟ ಪರೀಕ್ಷೆ ಮಾಡಿಕೊಳ್ತಿದ್ದಾರೆ. ಇನ್ನು ನಗರಸಭೆಯ 12, ಪುರಸಭೆಯ 17 ವಾರ್ಡ್ಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ. ಆದ್ರೆ ಪ್ರಕೃತಿ ವಿಕೋಪಕ್ಕೆ ತುತ್ತಾದ ಮಡಿಕೇರಿ 3 ಪಟ್ಟಣ ಪಂಚಾಯಿತಿಗಳಲ್ಲಿ ಚುನಾವಣೆ ಮುಂದೂಡಲಾಗಿದೆ. ಇದೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ ಬಳಕೆ ಮಾಡಲಾಗ್ತಿದೆ. ಸೆಪ್ಟೆಂಬರ್ 3ರಂದು ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv