ಕಮಲದ ಗುರುತಿಗೆ ಮತ ಹಾಕುವಂತೆ ಮತಯಾಚನೆ ಮಾಡ್ತೀವಿ: ರಾಮನಗರ ಬಿಜೆಪಿ ಮುಖಂಡರು

Public TV
1 Min Read

ರಾಮನಗರ: ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಭ್ಯರ್ಥಿ ಚಂದ್ರಶೇಖರ್ ಕೈ ಕೊಟ್ಟ ಹಿನ್ನೆಲೆಯಲ್ಲಿ ಕಮಲದ ಗುರುತಿಗೆ ಮತ ನೀಡುವಂತೆ ಮಾತಯಾಚನೆ ಮಾಡಲು ಮುಖಂಡರು ಹಾಗೂ ಕಾರ್ಯಕರ್ತರು ನಿರ್ಧರಿಸಿದ್ದಾರೆ.

ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ರಾತ್ರೋ ರಾತ್ರಿ ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಅಭ್ಯರ್ಥಿಗೆ ಬೆಂಬಲ ಸೂಚಿಸಿ, ಬಿಜೆಪಿ ಕೈಕೊಟ್ಟ ಹಿನ್ನೆಲೆಯಲ್ಲಿ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರ ತುರ್ತು ಸಭೆಯನ್ನು ನಗರದ ಬಿಜೆಪಿ ಕಚೇರಿಯಲ್ಲಿ ಕರೆಯಲಾಗಿತ್ತು. ತುರ್ತು ಸಭೆಗೆ ರಾಮನಗರ ಜಿಲ್ಲಾಧ್ಯಕ್ಷ ಎಂ. ರುದ್ರೇಶ್, ರಾಜ್ಯ ಕಾರ್ಯದರ್ಶಿ ಮುನಿರಾಜುಗೌಡ ಹಾಗೂ ಮಾಜಿ ಸಚಿವ ಸೋಮಶೇಖರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.

ಸಭೆಯ ನಂತರ ಮಾತನಾಡಿದ ಮುನಿರಾಜು ಗೌಡ, ರಾಮನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಹೊರ ಹೋಗಿರಬಹುದು. ಆದರೆ ಮತದಾರರಲ್ಲಿ ಕಮಲದ ಗುರುತಿಗೆ ಮತ ನೀಡಿ ಅಂತಾ ಮತದಾರರಲ್ಲಿ ಮನವಿ ಮಾಡುತ್ತೇವೆ. ಬಹಿರಂಗ ಪ್ರಚಾರ ಮುಗಿದ ಹಿನ್ನೆಲೆಯಲ್ಲಿ ಮನೆ, ಮನೆಗೆ ತೆರಳಿ ಬಿಜೆಪಿಗೆ ಮತ ಹಾಕಿ ಎಂದು ಮತಯಾಚನೆ ನಡೆಸುತ್ತೇವೆ. ನಮಗೋಸ್ಕರವಲ್ಲದಿದ್ದರೂ ಅಭ್ಯರ್ಥಿ ವಿರುದ್ಧ ಹೋರಾಟಕ್ಕಾದರೂ ಈ ರೀತಿ ನಾವು ಮಾಡುತ್ತೇವೆ. ಕಲ್ಲುಬಂಡೆಗಳಂತಿರುವ ಡಿಕೆ ಸಹೋದರರು, ಮಣ್ಣಿನ ಮಕ್ಕಳ ಸಹವಾಸ ಮಾಡಿದ್ದಾರೆ. ಅವರಿಗೆ ಗೊತ್ತಿಲ್ಲ ಕಲ್ಲಿನ ಜೊತೆ ಮಣ್ಣಿನ ಅಡಿ ಅವರು ಸಿಲುಕಿಕೊಳ್ಳುತ್ತಾರೆ ಎಂದರು.

ಬಿಜೆಪಿ ಮಾಜಿ ಶಾಸಕ ಸಿ.ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿ, ಚಂದ್ರಶೇಖರ್ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುವ ಮೂಲಕ, ಬಿಜೆಪಿ ಹಾಗೂ ಪಕ್ಷಕ್ಕೆ ಮತ ಹಾಕಲು ಸಿದ್ಧರಿದ್ದ ಮತದಾರರಿಗೆ ಮೋಸ ಮಾಡಿದ್ದಾರೆ. ಈಗ ಅವರು ಬಿಜೆಪಿಗೆ ಕೈ ಕೊಟ್ಟಿರಬಹುದು, ಆದರೆ ಮುಂಬರುವ ದಿನಗಳಲ್ಲಿ ಅವರು ರಾಜಕೀಯವಾಗಿ ಸಾಕಷ್ಟು ಅನುಭವಿಸುತ್ತಾರೆ. ನಂಬಿಕೆ ದ್ರೋಹಿಗಳಿಗೆ ಹಾಗೂ ಕಾಂಗ್ರೆಸ್ ಸಂಸ್ಕೃತಿ ಬೆಳೆಸಿಕೊಂಡವರಿಗೆ ಸರಿಯಾದ ಪಾಠವಾಗಲಿದೆ ಎಂದು ತಿಳಿಸಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *