ಅನೈತಿಕ ಚಟುವಟಿಕೆ ತಾಣದಲ್ಲೇ ಕೆಂಪೇಗೌಡರ ಪುತ್ಥಳಿ ಸ್ಥಾಪನೆ- ಸರ್ಕಾರದ ವಿರುದ್ಧ ಸಿಡಿದೆದ್ದ ಒಕ್ಕಲಿಗರು

Public TV
2 Min Read

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬರ ಸರ್ಕಾರ ಒಂದೊಂದು ಜಾತಿಯ ಸಮುದಾಯಕ್ಕೆ ಒಂದೊಂದು ಭಾಗ್ಯವನ್ನು ಕೊಟ್ಟಿದೆ. ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಭಾಗ್ಯ, ಅಲ್ಪ ಸಂಖ್ಯಾತರಿಗೆ ಶಾದಿ ಭಾಗ್ಯ, ಹಿಂದುಳಿದವರಿಗೆ ಲ್ಯಾಪ್ ಟಾಪ್ ಭಾಗ್ಯ ನೀಡಿದೆ. ಆದರೆ ಇದೀಗ ರಾಜ್ಯದ ದೊಡ್ಡ ಸಮುದಾಯವಾದ ಒಕ್ಕಲಿಗರಿಗೆ ಕಾಂಡೊಮ್ ಭಾಗ್ಯ ದಯಾಪಾಲಿಸಿದೆ.

ಹೌದು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಹೆಬ್ಬಾಳ ಜಂಕ್ಷನ್ ನಲ್ಲಿರೋ ಕಗ್ಗತ್ತಲ ಕಾಡಿನಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿಯನ್ನು ಅನಾವರಣಗೊಳಿಸಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಾಗಿ ಗಿಮಿಕ್ ಮಾಡಲು ಹೋದ ಕೃಷಿ ಸಚಿವ ಕೃಷ್ಣೆಭೈರೇಗೌಡ, ಬಿಡಿಎ ಕೆಂಪೇಗೌಡರಿಗೆ ಅಪಮಾನ ಮಾಡಿದೆ. ಹೀಗಾಗಿ ರಾಜ್ಯ ಒಕ್ಕಲಿಗರ ಸಂಘ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೊಡೆ ತಟ್ಟಿ ನಿಂತಿದೆ.

ಬೆಂಗಳೂರು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣಿಕರ್ತರಾದ ನಾಡುಪ್ರಭು ಕೆಂಪೇಗೌಡರ ಅಶ್ವರೂಢನ ಪುತ್ಥಳಿಯನ್ನು, ಬಿಡಿಎ ಅಭಿವೃದ್ಧಿಯನ್ನೇ ಕಾಣದ, ಅನೈತಿಕ ಚಟುವಟಿಕೆಗಳ ಗೂಡಾಗಿರೋ ಪಾರ್ಕ್‍ನಲ್ಲಿ ಅನಾವರಣಗೊಳಿಸಿದೆ. ಜೊತೆಗೆ ಈ ಜಾಗ ಅನೈತಿಕ ಹಾಗೂ ಅಸಭ್ಯ ವರ್ತನೆಗಳ ತಾಣವಾಗಿದೆ. ಬಿಡಿಎ ಈ ಜಾಗದಲ್ಲಿ ಪುತ್ಥಳಿ ಅನಾವರಣಕ್ಕೂ ಮುನ್ನ ಸ್ವಚ್ಛತೆ ಮಾಡದೇ, ಇಲ್ಲಿನ ಚಟುವಟಿಕೆಗಳಿಗೆ ಬ್ರೇಕ್ ಹಾಕದೇ ಕಾಂಡೊಮ್ ಗಳ ರಾಶಿ ಮಧ್ಯಯೇ ಪುತ್ಥಳಿಯನ್ನಟ್ಟಿದೆ. ಚುನಾವಣೆಯ ತರಾತುರಿಗೆ ಬಿದ್ದ ಬಿಡಿಎ, ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಕೆಂಪೇಗೌಡರ ಪ್ರತಿಮೆಯನ್ನು ಉದ್ಘಾಟನೆ ಮಾಡಿದ್ದಾರೆ. ಯಾರ ಬೇಡಿಕೆಯೂ ಇಲ್ಲದೇ ಬೆಂಗಳೂರಿಗರನ್ನು ಸೆಳೆಯಲು ಹೋಗಿ ಮಹಾ ಎಡವಟ್ಟು ಮಾಡಿದೆ. ಹೀಗಾಗಿ ರಾಜ್ಯ ಒಕ್ಕಲಿಗರ ಸಂಘ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ ಎಂದು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೋ.ಎಂ.ನಾಗರಾಜ್ ಹೇಳಿದ್ದಾರೆ.

ಹೆಬ್ಬಾಳ ಜಂಕ್ಷನಲ್ಲಿ ನಿರ್ಮಾಣವಾಗಿರೋ ನಾಡಪ್ರಭುವಿನ ಪುತ್ಥಳಿ ಜಾಗವನ್ನು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪಾರ್ಕ್ ಅಂತಾ ಕರೆಯುತ್ತಿದೆ. ಅಸಲಿಗೆ ಇದು ಪಾರ್ಕ್ ಅಲ್ಲ, ಕಸದ ಡಂಪಿಂಗ್ ಯಾರ್ಡ್ ಆಗಿದೆ. ಈ ಜಾಗದಲ್ಲಿ ಯಾವುದೇ ಸೆಕ್ಯುರಿಟಿ ಇಲ್ಲ. ಸ್ವಚ್ಫತೆಯಂತೂ ಮೊದಲೇ ಇಲ್ಲ. ಸುಮಾರು 3 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾಗಿರೋ ಕೆಂಪೇಗೌಡರ ಅಶ್ವರೂಢನ ಪುತ್ಥಳಿಗೆ ಒಂದೇ ಒಂದು ವಿದ್ಯುತ್ ದೀಪವನ್ನು ಹಾಕಿಲ್ಲ. ಕಲ್ಲಿನಿಂದ ಕೋಟೆ ಆಕಾರದಲ್ಲಿ 30 ಅಡಿ ಎತ್ತರ ಕಟ್ಟಲಾಗಿದೆ. ಅದರ ಮೇಲೆ ಕೆಂಪೇಗೌಡರ ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇದು ಬಿಟ್ಟರೆ ಪುತ್ಥಳಿ ಸುತ್ತಲೂ ಪಾರ್ಕ್ ನಿರ್ಮಾಣ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ. ಅದು ಹೋಗಲಿ ಅಲ್ಲಿ ಬಿದ್ದಿರೋ ಕಾಂಡೊಮ್ ತೆರವು ಮಾಡೋದು, ಅಲ್ಲಿರೋ ಮಂಗಳಮುಖಿಯರ ಉಪಟಳಕ್ಕೆ ಬ್ರೇಕ್ ಕೂಡ ಹಾಕುತ್ತಿಲ್ಲ ಎಂದು ಪ್ರೋ.ಎಂ.ನಾಗರಾಜ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಅಸಲಿಗೆ ಬೆಂಗಳೂರಿನ್ನು ಕಟ್ಟಿದ ನಾಡದೊರೆ ಕೆಂಪೇಗೌಡರಿಗೆ ನಗರದಲ್ಲಿ ಜಾಗವೇ ಇಲ್ಲದೇ ಇದ್ರೆ ಇಂಥ ಕಸದ ತೊಟ್ಟಿಯಲ್ಲಿ, ಮಹಾನ್ ವ್ಯಕ್ತಿಯ ಪುತ್ಥಳಿಯನ್ನು ಇಡೋದೆ ಬೇಡ, ಪುತ್ಥಳಿಯನ್ನು ತೆರವುಗೊಳಿಸಲಿ. ಇಂಥಹ ಜಾಗದಲ್ಲಿ ಧೀಮಂತ ನಾಯಕನ ಪುತ್ಥಳಿಯನ್ನು ಇಡೋ ದರ್ದು ಸಿಎಂ ಸಿದ್ದರಾಮಯ್ಯರಿಗೆ ಏನಿತ್ತು ಅಂತ ರಾಜ್ಯ ಒಕ್ಕಲಿಗರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *