ಒಕ್ಕಲಿಗ ಸಮುದಾಯಕ್ಕಿರುವ 4% ಮೀಸಲಾತಿಯನ್ನು 12% ಅಥವಾ 15%ಕ್ಕೆ ಏರಿಸಿ – ಸರ್ಕಾರಕ್ಕೆ ಡೆಡ್‌ಲೈನ್

Public TV
2 Min Read

ಬೆಂಗಳೂರು: ಮೀಸಲಾತಿ (Reservation) ಹೋರಾಟದ ಅಖಾಡಕ್ಕೆ ಈಗ ಒಕ್ಕಲಿಗ ಸಮುದಾಯವೂ (Vokkaliga)  ಧುಮುಕಿದೆ. ರಾಜ್ಯ ಒಕ್ಕಲಿಗರ ಸಂಘದಿಂದ ಇಂದು ಪೂರ್ವಭಾವಿ ಸಭೆ ನಡೆಸಿ 2023ರ ಜನವರಿ 23 ರೊಳಗೆ ಹಾಲಿ 4% ನಿಂದ 12% ಅಥವಾ 15% ವರೆಗೆ ಮೀಸಲಾತಿ ಹೆಚ್ಚಿಸಲು ಗಡುವು ನೀಡಲಾಗಿದೆ.

ಪಂಚಮಸಾಲಿ ವರ್ಗದ ಗಡುವಿನ ಮಧ್ಯೆ ಒಕ್ಕಲಿಗರೂ ಗಡುವು ಕೊಟ್ಟಿದ್ದು ಸರ್ಕಾರದ ತಲೆನೋವು ದುಪ್ಪಟ್ಟಾಗಿಸಿದೆ. ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಸರ್ಕಾರದ ನಸೀಬು ಕೆಡ್ತಿದೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಮೀಸಲಾತಿ ಇಕ್ಕಳದ ಹಿಡಿತ ಕ್ರಮೇಣ ಹೆಚ್ಚಾಗ್ತಿದೆ. ಎಸ್‍ಸಿ (SC), ಎಸ್‍ಟಿ (ST) ಮೀಸಲಾತಿ ಹೆಚ್ಚಳ ಬಳಿಕ ಹಲವು ಸಮುದಾಯಗಳು ಮೀಸಲಾತಿ ಹೋರಾಟದ ಅಖಾಡಕ್ಕಿಳಿದಿವೆ. ಮೊನ್ನೆ ಪಂಚಮಸಾಲಿ ಸಮುದಾಯದಿಂದ ಡಿಸೆಂಬರ್ 19 ರೊಳಗೆ 2ಎ ಪ್ರವರ್ಗಕ್ಕೆ ಸೇರಿಸಲು ಸರ್ಕಾರಕ್ಕೆ ಗಡುವು ನೀಡಿದೆ. ಈ ಬೆನ್ನಲ್ಲೇ ಒಕ್ಕಲಿಗರ ಸಮುದಾಯವೂ ಹಾಲಿ 4% ರಿಂದ 12% ಅಥವಾ 15% ಮೀಸಲಾತಿ ಹೆಚ್ಚಳಕ್ಕೆ ಹಕ್ಕೊತ್ತಾಯ ಮಾಡಿದೆ. ಇದನ್ನೂ ಓದಿ: ಪ್ರತಿಯೊಬ್ಬರಿಗೂ ಅನ್ವಯವಾಗುವಂತೆ ಜನಸಂಖ್ಯಾ ನಿಯಂತ್ರಣ ಮಸೂದೆ ಜಾರಿಗೊಳಿಸಿ – ಗಿರಿರಾಜ್ ಸಿಂಗ್

ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ಇಂದು ರಾಜ್ಯ ಒಕ್ಕಲಿಗ ಸಂಘದ ವತಿಯಿಂದ ಮೀಸಲಾತಿಗೆ ಒತ್ತಾಯಿಸಿ ಪಕ್ಷಾತೀತ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಭಾಗವಹಿಸಿದ್ದ ನಿರ್ಮಲಾನಂದನಾಥ ಶ್ರೀಗಳು ಹಾಗೂ ನಂಜಾವಧೂತ ಶ್ರೀಗಳು ಸಮುದಾಯಕ್ಕೆ 15% ವರೆಗೆ ಮೀಸಲಾತಿ ಹೆಚ್ಚಿಸಲು ಸರ್ಕಾರಕ್ಕೆ ಒತ್ತಾಯಿಸಿದರು. ಅಷ್ಟಲ್ಲದೇ ಮುಂದಿನ ವರ್ಷದ ಜನವರಿ 23 ರೊಳಗೆ ಬೇಡಿಕೆ ಈಡೇರಿಸದಿದ್ದರೆ ಹೋರಾಟದ ಎಚ್ಚರಿಕೆಯನ್ನು ಸ್ವಾಮೀಜಿಗಳು ರವಾನಿಸಿದರು. ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಗೌಪ್ಯತೆ ಉಲ್ಲಂಘಿಸಲು ಸಾಧ್ಯವಿಲ್ಲ – ಡೇಟಾ ಸುರಕ್ಷತೆ ಬಗ್ಗೆ ರಾಜೀವ್ ಸ್ಪಷ್ಟನೆ

ಸಭೆಯಲ್ಲಿ ಭಾಗವಹಿಸಿದ್ದ ಸಚಿವ ಆರ್.ಅಶೋಕ್‍ಗೆ (R.Ashok) ಸಮುದಾಯದ ಪರವಾಗಿ ಶ್ರೀಗಳು ಬೇಡಿಕೆಯ ಮನವಿ ಪತ್ರ ಸಲ್ಲಿಸಿದರು. ಸರ್ಕಾರದ ಪರವಾಗಿ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಆರ್‌.ಅಶೋಕ್, ಮೀಸಲಾತಿ ಹೆಚ್ಚಳ ಸೇರಿದಂತೆ ಸಮುದಾಯದ ಎಲ್ಲ ಬೇಡಿಕೆಗಳ ಬಗ್ಗೆ ಸಿಎಂ ಜೊತೆ ಮಾತಾಡಿ ಆದಷ್ಟು ಬೇಗ ಒಂದು ನಿರ್ಧಾರಕ್ಕೆ ಬರೋದಾಗಿ ಭರವಸೆ ಕೊಟ್ರು. ಸಚಿವ ಸುಧಾಕರ್ (K.Sudhakar) ಮಾತನಾಡಿ, ಸಮುದಾಯ ನೀಡಿದ ಗಡುವಿನಲ್ಲಿ ಹೃದಯ ಶ್ರೀಮಂತಿಕೆ ಇರಬೇಕು ಎಂದು ಪರೋಕ್ಷವಾಗಿ ಗಡುವು ವಿಸ್ತರಿಸುವಂತೆ ಕೇಳಿಕೊಂಡ್ರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (D.K Shivakumar) ಮಾತನಾಡಿ, ಮೀಸಲಾತಿ ಹೋರಾಟಕ್ಕೆ ಸದಾ ಬೆಂಬಲಿಸುತ್ತೇನೆ. ಸಮುದಾಯ ಒಗ್ಗಟ್ಟಿಂದ ಹೋರಾಟ ತೀವ್ರಗೊಳಿಸಬೇಕು ಎಂದು ಕರೆಕೊಟ್ರು. ಇದೇ ವೇಳೆ ಡಿಕೆಶಿ, ತಾವು ಸಿಎಂ ಆಗಲು ಪರೋಕ್ಷವಾಗಿ ಸಮುದಾಯದ ಆಶೀರ್ವಾದ ಕೋರಿದ್ರು. ಅವಕಾಶ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಈ ಅವಕಾಶವನ್ನು ಕಳೆದುಕೊಳ್ಳಲು ಹೋಗಬೇಡಿ ಎಂಬ ತಮ್ಮ ಎಂದಿನ ಹೇಳಿಕೆಯನ್ನು ಡಿಕೆಶಿ ಪುನರುಚ್ಚರಿಸಿದರು.

ಒಕ್ಕಲಿಗ ಸಮುದಾಯ ಸದ್ಯ ಪ್ರವರ್ಗ 3ಎ ಯಲ್ಲಿದ್ದು, ಉದ್ಯೋಗ ಮತ್ತು ಶಿಕ್ಷಣದಲ್ಲಿ 4% ಮೀಸಲಾತಿ ಪಡೆಯುತ್ತಿದೆ. ಆದ್ರೆ ಜನಸಂಖ್ಯೆ 19 ರಿಂದ 20% ಇದ್ದು, ಅದಕ್ಕನುಸಾರ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *